ಬಳ್ಳಾರಿ. ಜುಲೈ 05. : ನಗರದಲ್ಲಿ ಪ್ರಗತಿಯಲ್ಲಿರುವ ಯಾವುದೇ ಕಾಮಗಾರಿಗಳು ವಿಳಂಬವಾಗುತ್ತಿಲ್ಲ ಉತ್ತಮವಾಗಿ ಮತ್ತು ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಲಾಗುತ್ತಿದೆ ಇದನ್ನೇ ಸಾರ್ವಜನಿಕರು ಮತ್ತು ವಿರೋಧ ಪಕ್ಷದವರು ನಿಧಾನಗತಿ ಎಂಬಂತೆ ಬಿಂಬಿಸುತ್ತಿದ್ದಾರೆ, ಅಂದಾಜು ಪಟ್ಟಿಯಲ್ಲಿರುವ ಅವಧಿ ಒಳಗೆ ಕಾಮಗಾರಿಯನ್ನು ಮುಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದರು.
ಅವರು ಇಂದು ಗಾಂಧಿನಗರದಲ್ಲಿ ಶಶಿಕಿರಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯನ್ನು ಸಚಿವ ಶಿವರಾಜ್ ತಂಗಡಿ ಅವರೊಂದಿಗೆ ಉದ್ಘಾಟಿಸುವ ಸಂದರ್ಭದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಯಾವುದೇ ಕಾಮಗಾರಿಗಳು ವಿಳಂಬವಾಗುತ್ತಿಲ್ಲ ಎಲ್ಲವೂ ಅಂದುಕೊಂಡಂತೆ ಅವಧಿಯ ಒಳಗೆ ನಡೆಯುತ್ತಿವೆ ಸುಧಾ ಕ್ರಾಸ್ ನಲ್ಲಿರುವ ರೈಲ್ವೆ ಬ್ರಿಡ್ಜ್ ಕಾಮಗಾರಿಯು ಸದ್ಯ ಸ್ಥಗಿತಗೊಂಡಿದೆ ಆ ಪ್ರದೇಶದ ಸಾರ್ವಜನಿಕರು ಕೋರ್ಟ್ ಮೊರೆ ಹೋಗಿರುವುದರಿಂದ ತಾತ್ಕಾಲಿಕವಾಗಿ ತಡವಾಗಿದೆ, ಆದರ ಹೆಚ್ಚಿನ ಮಾಹಿತಿಯನ್ನು ಕ್ಷೇತ್ರದ ಶಾಸಕ ಬಿ ನಾಗೇಂದ್ರ ಅವರನ್ನು ಕೇಳಿ ತಿಳಿಯಿರಿ ಎಂದರು.
ರಾಜ್ಯ ಸರ್ಕಾರದಲ್ಲಿ ನಡೆಯುವ ಬೆಳಗವಣಿಗೆಗಳ ಬಗ್ಗೆ ಉತ್ತರಿಸಿದ ರೆಡ್ಡಿ, ಮುಖ್ಯಮಂತ್ರಿ ಅಥವಾ ಕೆಪಿಸಿಸಿ ಅಧ್ಯಕ್ಷರ ಮಟ್ಟಕ್ಕೆ ಮಾತನಾಡಲು ನಾನು ಇನ್ನೂ ಬೆಳೆದಿಲ್ಲ, ನಾನು ಜಿಲ್ಲೆಯ ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಒಂದೆರಡು ಬಾರಿ ಚುನಾವಣೆಯಲ್ಲಿ ಗೆದ್ದು ಶಾಸಕರಾದವರು ಸಚಿವ ಸ್ಥಾನ ನಿರೀಕ್ಷೆ ಒಳ್ಳೆಯದಲ್ಲ ಎಂದರು.