ಕಿಲ್ಲಾ ದಿ.06 ರಂದು ” ಮೊಹರಂ ಹಬ್ಬ “

Ravi Talawar
ಕಿಲ್ಲಾ ದಿ.06 ರಂದು ” ಮೊಹರಂ ಹಬ್ಬ “
WhatsApp Group Join Now
Telegram Group Join Now

ಕಿಲ್ಲಾ ತೊರಗಲ್ಲ- 05, ರಾಮದುರ್ಗ ತಾಲೂಕಿನ ಕಿಲ್ಲಾ ತೊರಗಲ್ಲದಲ್ಲಿ ರವಿವಾರ ದಿ.06 ರಂದು ಹಿಂದೂ – ಮುಸ್ಲಿಮರ  ” ಸೌಹಾರ್ದತೆ ಹಾಗೂ ಭಾವೈಕ್ಯತೆಯ ” ಪ್ರತೀಕವಾಗಿರುವ ‘ ಮೊಹರಂ ಹಬ್ಬದ ‘ ಆಚರಣೆಯು ಸಡಗರ , ಸಂಭ್ರಮಗಳೊಂದಿಗೆ ನೆರವೇರಲಿದೆ.

   ಸ್ವಾತಂತ್ರ್ಯ ಪೂರ್ವದಲ್ಲಿ ಕಿಲ್ಲಾ ತೊರಗಲ್ಲ ಸಂಸ್ಥಾನ ಕಾಲದಲ್ಲಿ ಹಿಂದೂ , ಮುಸ್ಲೀಮ್, ಜೈನ, ಮರಾಠಾ  ಹೀಗೆ ಅನೇಕಾನೇಕ ರಾಜ ಮಹಾರಾಜರು, ಆಳರಸರು ಸಂಸ್ಥಾನವನ್ನು ಆಳಿ , ಅಳಿದು ಹೋಗಿದ್ದರೂ ಕೂಡ ಜಾತಿಯ ಸಾಮರಸ್ಯವನ್ನು ಕಾಪಾಡಿಕೊಂಡು ಬಂದಿರುವ ಈ ಕಿಲ್ಲಾ ತೊರಗಲ್ಲ ಗ್ರಾಮವು ಶತ ಶತಮಾನಗಳ ಹಿಂದಿನ ಸಾಮರಸ್ಯ , ಸೌಹಾರ್ದತೆ ಮತ್ತು ಭಾವೈಕ್ಯತೆ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ , ಕಾರಣ ಈ  ಪವಿತ್ರ ಮಣ್ಣಿನಲ್ಲೇ ಅಂಥಹ ದಿವ್ಯವಾದ ಅಧ್ಯಾತ್ಮಿಕ ಮಹಾನ್ ಶಕ್ತಿಯು ಮಿಳೀತಗೊಂಡಂತಿದೆ.  ಮಹಾ .. ಮಹಾ ಶಿವ ಶರಣರು , ಆಧ್ಯಾತ್ಮಿಕ ಸಾಧಕರು ,  ತಪಸ್ವಿಗಳು,  ಸೂಫೀ ಸಂತರು, ಫಕೀರರು  ನಡೆದಾಡಿರುವ ಪುಣ್ಯಭೂಮಿ ಮಾತ್ರವಲ್ಲ,  ಅವರೆಲ್ಲರ ತಪಸ್ಸು, ಆಧ್ಯಾತ್ಮಿಕ ಸಾಧನೆಗಳೆಲ್ಲ ಈ ಮಣ್ಣಿನೊಂದಿಗೆ ಬೆರೆತುಕೊಂಡಿದೆ ಎನ್ನಬಹುದು.  ಕಾಲಗರ್ಭದಲ್ಲಿ ಹುದುಗಿ ಹೋದ ನೂರಾರು ಜಾತಿ , ಮತ, ಪಂಥಗಳ ಸಂಘರ್ಷಗಳಿಗೆ ಜಗತ್ತೇ ” ರಂಗ ” ಒದಗಿಸಿಕೊಟ್ಟಿದ್ದರೂ ಕೂಡ ನಮ್ಮ ಈ ತೊರಗಲ್ಲ ಗ್ರಾಮವು ಮಾತ್ರ ತನ್ನ ಮೌನ ಮುರಿದಿಲ್ಲ ಎಂಬುದು ಸಮಾಧಾನಕರ ಸಂಗತಿ.

” ಮೋಹರಂ ಹಬ್ಬವು ” ಹಿಂದೂ – ಮುಸ್ಲಿಮರ ಸೌಹಾರ್ದತೆ ಹಾಗೂ ಭಾವೈಕ್ಯತೆಯ ಪ್ರತೀಕವಾಗಿರುವ ಹಬ್ಬಗಳಲ್ಲಿ ಪ್ರಮುಖವಾದದ್ದು  ಎಂದು ಬೇರೆ ಹೇಳಬೇಕಿಲ್ಲ.  ಯಾವುದೇ ತೆರನಾದ ತಾರತಮ್ಯ ಇಲ್ಲದೇ ಈ ಹಬ್ಬದಲ್ಲಿ ಎಲ್ಲರೂ ಒಂದಾಗಿ ಪಾಲ್ಗೊಂಡು ಆಚರಿಸುವ ಗ್ರಾಮೀಣ ಪ್ರದೇಶದ  ” ಹಬ್ಬವು ” ಇದಾಗಿದ್ದು,  ಇದಕ್ಕೆ ‘ ಅಲ್ಹಾಬ್ ಹಬ್ಬ ‘ ಅಂತಲೂ ಕರೆಯುವ ವಾಡಿಕೆಯು ಜನ ಜನೀತವಾಗಿದೆ.
ಹತ್ತು ದಿನಗಳಿಂದ ನಡೆಯುತ್ತಿರುವ ಈ ” ಮೋಹರಂ ಹಬ್ಬದ ” ಆಚರಣೆಯ ಪ್ರಯುಕ್ತ ಸಂಸ್ಥಾನದ ಕಾಲದಿಂದಲೂ ಸಂಸ್ಥಾನದ ಮಹರಾಜರ ಅರಮನೆಯಿಂದ ಊರಲ್ಲಿನ ಪ್ರಮುಖ ಮಸೀದಿಗಳಿಗೆ ” ಲಾಡಿ,  ಸಕ್ಕರೆ, ಊದು ” ನಿತ್ಯ  ಕಳಿಸುವ ಪರಂಪರೆಯು ಅನಾದಿಕಾಲದಿಂದಲೂ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ. ಗುರುವಾರ ದಿ.03 ರಂದು ” ಲಾಲಸಾಬ ದೇವರು ” ಏಳುವುದರೊಂದಿಗೆ ಆರಂಭವಾದ ಮೋಹರಂ ಹಬ್ಬ,  ಶನಿವಾರ ದಿ.05 ರಂದು ಊರೊಳಗಿನ ” ಕಾಸೀಮಸಾಬ ದೇವರು ” ಕತ್ತಲ ರಾತ್ರಿಯ ಬೆಳಗಿನ ಜಾವ ಏಳುವುದು. ಈ ಸಂದರ್ಭದಲ್ಲಿ ತೊರಗಲ್ಲ-ವ- ಖಾನಪೇಠ ಗ್ರಾಮದ ಜನತೆ ಮಾತ್ರವಲ್ಲದೇ ಪರ ಊರಿನಿಂದಲೂ ಅಸಂಖ್ಯಾತ ಜನರು ಬಂದು ಸೇರುತ್ತಾರೆ.

ಮಾರನೆಯದಿನ ರವಿವಾರ ದಿ. 06 ರಂದು ಬೆಳಗಿನ ಜಾವದಿಂದ ಸಾಯಂಕಾಲ ವರೆಗೆ ಎಲ್ಲಾ ಮಸೀದಿಗಳಲ್ಲಿನ ” ದೇವರ ಪಂಜಾ,  ಹಾಗೂ ಡೋಲಿಗಳು ” ಏಳುತ್ತವೆ.  ಅದೇ ದಿನ  ಸಾಯಂಕಾಲ 5.30 ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೆ ದೇವರು ಹೊಳೆಗೆ ಹೋಗುವ ದೃಶ್ಯವು ದೂರದೂರಿನಿಂದ ಆಗಮಿಸಿದ ಭಕ್ತಾಧಿಗಳ ಕಣ್ಮನ ಸೆಳೆಯುತ್ತದೆ,  ಈ  ಕಾರಣದಿಂದಲೇ ವರ್ಷದಿಂದ ವರ್ಷಕ್ಕೆ ” ತೊರಗಲ್ಲ ಮೋಹರಂ ಹಬ್ಬವನ್ನು ” ನೋಡಲು ಬರುವ ಪರ  ಊರಿನ ಭಕ್ತಾಧಿಗಳ ಸಂಖ್ಯೆಯು ಹೆಚ್ಚುತ್ತಲೇ ಸಾಗಿದೆ.

ಕಿಲ್ಲಾ ತೊರಗಲ್ಲ ಗ್ರಾಮವು,  ರಾಮದುರ್ಗ ದಿಂದ ಬೆಳಗಾವಿಯ ಮುಖ್ಯ ರಸ್ತೆಗೆ ಹೊಂದಿಕೊಂಡಿದ್ದು , ರಾಮದುರ್ಗ ಹಾಗೂ ಕಟಕೋಳದಿಂದ ಕೇವಲ 11 ಕಿ.ಮೀ.  ಅಂತರದಲ್ಲಿದೆ, ಇಲ್ಲಿಗೆ ಬಂದು  ಹೋಗಲು ಸಾಕಷ್ಟು ಅಟೋ,  ಬಸ್ಸುಗಳ ಸಾರಿಗೆ ಸಂಪರ್ಕದ ವ್ಯವಸ್ಥೆಯು ಇರುವುದು.

WhatsApp Group Join Now
Telegram Group Join Now
Share This Article