* ಗೋಕಾಕನಲ್ಲಿ ಜೂನ್ 30 ರಿಂದ ಜುಲೈ 8 ವರೆಗೆ ಜಾತ್ರೆ ಸಡಗರ- ಈ ಜಾತ್ರೆಯ ಸಂಭ್ರಮ ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತ ಭಕ್ತರು
ಬೆಳಗಾವಿ: ಕರದಂಟು ನಾಡಿನಲ್ಲಿ ಅದ್ಧೂರಿ ರಥೋತ್ಸವ.. ಅಲಂಕಾರಗೊಂಡ ಕಂಗೊಳಿಸುತ್ತಿರುವ ಲಕ್ಷ್ಮೀ ದೇವಿ ದೇವಸ್ಥಾನ.. ಬಂಡಾರದಲ್ಲಿ ಮಿಂದೇಳುತ್ತಿರುವ ಭಕ್ತ ಸಾಗರ..ಇಂತಹ ದೃಶ್ಯಗಳು ಈ ಜಾತ್ರೆಯಲ್ಲಿ ಕಂಡು ಬರುತ್ತೆ.
ಹೌದು…ಇತಿಹಾಸ ಪ್ರಸಿದ್ಧ ಕರದಂಟು ನಾಡಿನಲ್ಲಿ ಲಕ್ಷ್ಮೀ ದೇವಿ ಜಾತ್ರೆ ದಿನಗಣನೆ ಶುರುವಾಗಿದ್ದು, ಜೂನ್ 30 ರಿಂದ ಜುಲೈ 8 ವರೆಗೆ ಅದ್ಧೂರಿ ಜಾತ್ರಾ ಮಹೋತ್ಸವ ನೆರವೇರಲಿದೆ. ಸದ್ಯ ಗೋಕಾಕನಲ್ಲಿ ಈಗ ಮನೆ ಮನೆಯಲ್ಲೂ ಲಕ್ಷ್ಮೀ ದೇವಿ ಜಾತ್ರೆ ಸಂಭ್ರಮ ಮನೆ ಮಾಡಿದೆ. ಎಲ್ಲಿ ನೋಡಿದ್ರೂ ಲಕ್ಷ್ಮೀ ದೇವಿಯ ಆರಾಧನೆ ಕಂಡು ಬರುತ್ತಿದೆ. ಇಲ್ಲಿ ಪ್ರತಿ ವರ್ಷವೂ ಲಕ್ಷ್ಮೀ ದೇವಿ ಜಾತ್ರೆ ನಡೆಯುವುದಿಲ್ಲ ಬದಲಿಗೆ ಪ್ರತಿ 5 ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಈ ಭಾರಿ 10 ವರ್ಷಕ್ಕೆ ಈ ಜಾತ್ರೆ ನಡೆಯುತ್ತಿದೆ.

ಜಾತ್ರೆಗೆ ಲಕ್ಷಾಂತರ ಭಕ್ತರ ಆಗಮನ: ಸರ್ವಧರ್ಮೀಯರು ಶ್ರದ್ಧಾಭಕ್ತಿಯಿಂದ ಪೂಜಿಸುವ ಲಕ್ಷ್ಮೀ ದೇವಿ ಜಾತ್ರೆಯ ಸೊಬಗನ್ನು ಕಣ್ತುಂಬಿಕೊಳ್ಳಲು ಭಕ್ತರು ತುದಿಗಾಲ ಮೇಲೆ ನಿಂತಿದ್ದಾರೆ. ಸ್ಥಳೀಯರು ತಮ್ಮ ಮನೆಗಳನ್ನು ಸಿಂಗರಿಸಿ ಸಂಬಂಧಿಗಳನ್ನು ಆಹ್ವಾನಿಸುತ್ತಿದ್ದಾರೆ. ಜಾತ್ರೆಗೆ ರಾಜ್ಯ, ಹೊರರಾಜ್ಯಗಳ ಲಕ್ಷಾಂತರ ಭಕ್ತರು ಭೇಟಿ ನೀಡಲಿದ್ದಾರೆ. ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತು ತೀರಿಸಿ, ಭಕ್ತಿ ಸಮರ್ಪಿಸುತ್ತಾರೆ.
ಸಿಂಗಾರಗೊಳ್ಳಲಿದೆ ರಥ: ವೈಭವೋಪಿತ ಬಣ್ಣಬಣ್ಣದ ವಿದ್ಯುತ್ ದೀಪಗಳ ಅಲಂಕಾರದಿಂದ ಇಲ್ಲಿನ ಲಕ್ಷ್ಮೀ ದೇವಿ ಮಂದಿರಕ್ಕೆ ತರಹೇವಾರಿ ಹೂಗಳಿಂದ ಹಾಗೂ ವಿದ್ಯುತ್ ದೀಪದಿಂದ ಸಿಂಗಾರ ಮಾಡಲಾಗುತ್ತಿದೆ. ಅಲ್ಲದೇ ರಥಗಳನ್ನು ಸಂಪೂರ್ಣ ಅಲಂಕರಿಸಲಾಗುತ್ತಿದ್ದು, ರಥವು ಬಂಗಾರ ಲೇಪಿನ ನೋಡುಗರನ್ನು ಆಕರ್ಷಿಸುತ್ತಿದೆ.
46 ಶಿಲ್ಪಿಗಳ ಕೈಚಳಕ ರೆಡಿಯಾದ ರಥಗಳು: ವಿಶ್ವಕರ್ಮ ಶಿಲ್ಪಿಗಳಿಂದ 9 ತಿಂಗಳ ಕಾಲ ಈ ಎರಡು ರಥಗಳನ್ನು ಕೆತ್ತಲಾಗಿದೆ. ರಥ ತಲಾ 15 ಟನ್ ತೂಕವಿದ್ದು, ಉಡವಿ ಜಿಲ್ಲೆಯ ಕೋಟೇಶ್ವರದಲ್ಲಿ ಈ ರಥಗಳನ್ನು ನಿರ್ಮಾಣ ಮಾಡಲಾಗಿದೆ. ಕೋಟೇಶ್ವದ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರ ಕುಂಬಾಶಿಯ ರಥ ಶಿಲ್ಪಿ ರಾಜಗೋಪಾಲ ಆಚಾರ್ಯ ಅವರ ಪುತ್ರ ಲಕ್ಷ್ಮೀ ನಾರಾಯಾಣ ಆಚಾರ್ಯ ಅವರು ಈ ರಥಗಳನ್ನು ನಿರ್ಮಿಸಿದ್ದಾರೆ. ರಥ ನಿರ್ಮಾಣದಲ್ಲಿ ಒಟ್ಟು 46 ಜನ ಶಿಲ್ಪಿಗಳ ಕೆಲಸ ಮಾಡಿದ್ದು, ಸದ್ಯ ಈ ರಥ ಗೋಕಾಕಕ್ಕೆ ಆಗಮಿಸಿದೆ. ವೈಭವೋಪಿತ ಬಣ್ಣಬಣ್ಣದ ವಿದ್ಯುತ್ ದೀಪಗಳ ಅಲಂಕಾರದಿಂದ ಇಲ್ಲಿನ ಲಕ್ಷ್ಮೀ ದೇವಿ ಮಂದಿರಕ್ಕೆ ತರಹೇವಾರಿ ಹೂಗಳಿಂದ ಹಾಗೂ ವಿದ್ಯುತ್ ದೀಪದಿಂದ ಸಿಂಗಾರ ಮಾಡಲಾಗುತ್ತಿದೆ. ಅಲ್ಲದೇ ರಥಗಳನ್ನು ಸಂಪೂರ್ಣ ಅಲಂಕರಿಸಲಾಗುತ್ತಿದ್ದು, ರಥವು ಬಂಗಾರ ಲೇಪಿನ ನೋಡುಗರನ್ನು ಆಕರ್ಷಿಸುತ್ತಿದೆ.

ಭಂಡಾರದಲ್ಲಿ ಮಿಂದೆಳಲಿದ್ದಾರೆ ಭಕ್ತರು: ಇಲ್ಲಿ ಪ್ರತಿ ಮನೆಯಲ್ಲೂ ಹಬ್ಬದ ವಾತಾವರಣವಿದ್ದು, 10 ದಿನಗಳ ಕಾಲ ಈ ದೇವಿಯ ಜಾತ್ರೆಯನ್ನ ಆಚರಿಸಲಾಗುತ್ತಿದೆ. ಈ ಜಾತ್ರೆಯಲ್ಲಿ ಮುಖ್ಯವಾಗಿ ದೇವಿಯನ್ನ ತೇರಿನಲ್ಲಿ ಕುಡಿಸಿ ಮುಖ್ಯ ಓಣಿಗಳಲ್ಲಿ ಒಟ್ಟಾಗಿ ಸಾಗುವುದೆ ವಿಶೇಷ. ಈ ವರ್ಷ ನಡೆಯುವ ಜಾತ್ರೆಯನ್ನ ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಕರದಂಟು ನಾಡಿನ ಮನೆ ಮನೆಯಲ್ಲೂ ಹಬ್ಬದ ವಾತಾವರಣ ಕಂಡು ಬರುತ್ತಿದ್ದು, ಭಕ್ತರು ಫುಲ್ ಕುಣಿದು ಕುಪ್ಪಳಿಸಲಿದ್ದಾರೆ. 10 ದಿನಗಳ ಕಾಲ ನಡೆಯುವ ಲಕ್ಷ್ಮೀ ದೇವಿ ಜಾತ್ರೆಗೆ ನಾಡಿದ್ದು ಚಾಲನೆ ಸಿಗಲಿದೆ. ಇನ್ನೂ ಲಕ್ಷ್ಮೀ ದೇವಿಯ ಮೂರ್ತಿಯನ್ನ ತೇರಿನಲ್ಲಿ ಕೂರಿಸಿ ನಂತ್ರ ಗ್ರಾಮಸ್ಥರೆಲ್ಲರೂ ಎಳೆಯಲಿದ್ದು, ಈ ವೇಳೆ ಭಂಡಾರದಲ್ಲಿ ಲಕ್ಷಾಂತರ ಭಕ್ತರು ಮಿಂದೇಳಲಿದ್ದಾರೆ.
ಜಾತ್ರೆ ಕಾರ್ಯಕ್ರಮ ವಿವಿರ: ಜೂನ್ 30ರಂದು ದೇವಿಯನ್ನು ಜಿನಗಾರ ಮನೆಯಿಂದ ಅಂಬಿಗೇರ ಓಣಿಯಲ್ಲಿ ಕೂಡಿಸಲಾಗುವುದು, ಜುಲೈ 2 ರಂದು ಮಹಾಲಕ್ಷ್ಮೀದೇವಿಯರಿಗೆ ಅಭಿಷೇಕ & ಪೂಜಾ ಕಾರ್ಯ ನಡೆಯುವುದು. ಅಲ್ಲದೇ ಮಧ್ಯಾಹ್ನ ಪುರುಜನರಿಂದ ನೈವೈದ್ಯ ಕಾರ್ಯಕ್ರಮ ರಾತ್ರಿ ದೇವಿಯರ ಹೊನ್ನಾಟ ಜರಗುವುದು. ಅಂದೇ ದ್ಯಾಮವ್ವಾದೇವಿಯರನ್ನು ರಥದಲ್ಲಿ ಕೂಡಿಸುವ ಕಾರ್ಯಕ್ರಮ ನಡೆಯುವುದು. ಎರಡು ರಥಗಳು ಸೋಮವಾರ ಪೇಠದಿಂದ ಶ್ರೀ ದ್ಯಾಮವ್ವದೇವಿಯ ಗುಡಿಯವರೆಗೆ ಬರುವುದು. 3ರಂದು ಮಧ್ಯಾಹ್ನ ರಥೋತ್ಸವ ಜರಗುವುದು, 2 ರಥಗಳು ಶ್ರೀ ದ್ಯಾಮವ್ವಾದೇವಿಯ ಗುಡಿಯಿಂದ ಚೌಧರಿ ಕೂಟದವರೆಗೆ ಬರುವುದು, 04ರಂದು ಮಧ್ಯಾಹ್ನ ರಥೋತ್ಸವ ಜರಗುವುದು, ಒಂದು ರಥವು ಶ್ರೀ ಚೌಧರಿ ಕೂಟದಿಂದ ಲಕ್ಷ್ಮೀದೇವಿ ದೇವಸ್ಥಾನದವರೆಗೆ ಹೋಗುವುದು, ನಂತರ (ಒಂದು ರಥವು ಶ್ರೀ ಚೌಧರಿ ಕೂಟದಿಂದ ಕೆಳಗಿನಪೇಟ ಲಕ್ಷ್ಮೀದೇವಿ ದೇವಸ್ಥಾನದವರೆಗೆ ಹೋಗುವುದು, 5ರಂದು ಪುರಜನರಿಂದ ನೈವೈದ್ಯ ಕೊಡುವ ಕಾರ್ಯಕ್ರಮ. ವಿವಿಧ ಶರ್ತುಗಳು 2 ಕೋಣಗಳನ್ನು ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ನಮಸ್ಕಾರ ಮಾಡಿಸುವುದು ಹಾಗೂ ಮದ್ದು ಹಾರಿಸುವ ಕಾರ್ಯಕ್ರಮ ನಡೆಯಲಾಗುವುದು. 6ರಿಂದ 8ರವೆರೆಗೆ ವಿವಿಧ ಸ್ಪರ್ಧೆಗಳು ಸೇರಿದಂತೆ ಕುಸ್ತಿ ಪಂದ್ಯಾವಳಿಗಳು ಹಾಗೂ ಗ್ರಾಮದ ಎಲ್ಲ ದೇವರುಗಳಿಗೆ ನೈವೈದ್ಯ ಕಾರ್ಯಕ್ರಮ ನಡೆಯಲಿದೆ ಎಂದು ಜಾತ್ರಾ ಕಮೀಟಿ ಸದಸ್ಯರು ʻಉದಯನಾಡುʼಗೆ ತಿಳಿಸಿದ್ದಾರೆ.

ಜಾತ್ರೆ ನಿಮಿತ್ತ ಮದ್ಯ ಮಾರಾಟ ನಿಷೇಧ: ಗೋಕಾಕ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಏಕಕಾಲಕ್ಕೆ ಭಾಗವಹಿಸುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಜಾತ್ರೆಯ ರಥೋತ್ಸವ ನಡೆಯುವ ಎರಡು ದಿನ ಮುಂಚೆ ಹಾಗೂ ರಥೋತ್ಸವ ನಡೆದ ಎರಡು ದಿನ ಸೇರಿದಂತೆ ಒಟ್ಟು 5 ದಿನ ದೇವಸ್ಥಾನದ 10 ಕಿಮೀ ವ್ಯಾಪ್ತಿ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.