ಐಸಿಎಆರ್-ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪದಲ್ಲಿ ಆಯೋಜಿಸಿದ ರೈತರಿಗೆ ಮೂರು ದಿನಗಳ ಹೈನೋದ್ಯಮ ಹಾಗೂ ಪಶುಸಂಗೋಪನೆಯಲ್ಲಿ ಉದ್ಯಮಶೀಲತೆ ಹಾಗೂ ಆರು ದಿನಗಳ ಕೃಷಿ ಸಖಿ ತರಬೇತಿ ಸಮಾರೋಪ ಸಮಾರಂಭವು ಜರುಗಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರಾದ ಡಾ. ಮಂಜುನಾಥ ಚೌರಡ್ಡಿಯವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ದೇಶದಲ್ಲಿ ಹಾಲು ಉತ್ಪಾದನೆಯು ಸಮರ್ಪಕವಾಗಿದ್ದು ಗುಣಮಟ್ಟದ ಹಾಲು ಉತ್ಪಾದನೆ ಇಂದಿನ ಅಗತ್ಯವಾಗಿದ್ದು, ಜೊತೆಗೆ ಹೈನುಗಾರಿಕೆ ಅಳವಡಿಸಿಕೊಳ್ಳುತ್ತಿರುವ ರೈತರು ಈ ಕ್ಷೇತ್ರದಲ್ಲಿ ಉತ್ತಮ ಲಾಭಾಂಶ ಪಡೆದು ಕೃಷಿಯ ಜೊತೆಗೆ ಉದ್ಯಮವಾಗಿ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಉತ್ತಮ ಗುಣಮಟ್ಟದ ಹಾಲು ಉತ್ಪಾದನೆ ತಂತ್ರಜ್ಞಾನಗಳನ್ನು ಒಳಗೊಂಡ ಉತ್ತಮ ತರಬೇತಿಯನ್ನು ನೀಡಲಾಗಿದೆ. ಶಿಬಿರಾರ್ಥಿಗಳು ಇದರ ಲಾಭ ಪಡೆದು ಉತ್ತಮ ಉದ್ಯಮಿಯಾಗಬೇಕೆಂದು ಕರೆ ನೀಡಿದರು. ಅದೇರೀತಿಯಾಗಿ, ಕೃಷಿ ಸಖಿಯರು ಹೈನುಗಾರಿಕೆ ಜೊತೆಗೆ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಬರುವ ರೈತರ ಸಮಸ್ಯೆಗಳಿಗೆ ತಾವು ಸ್ಪಂದಿಸಬೇಕೆಂದು ತಿಳಿಸಿದರು. ವಿಜ್ಞಾನಿಗಳಾದ ಡಾ. ಎಸ್. ಎಸ್. ಹಿರೇಮಠ, ಎಸ್. ಎಮ್. ವಾರದ, ಜಿ. ಬಿ. ವಿಶ್ವನಾಥ ಹಾಗೂ ಪ್ರವೀಣ ಯಡಹಳ್ಳಿ ಇವರು ಉಪಸ್ಥಿತರಿದ್ದರು. ತರಬೇತಿ ಶಿಬಿರದಲ್ಲಿ ಪಾಲ್ಗೊಂಡ ಆಯ್ದ ಅಭ್ಯರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಪಾಲ್ಗೊಂಡ ಎಲ್ಲ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.