ಧಾರವಾಡ : ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯು ನಿರಂತರವಾಗಿ ಆಗಿರುವುದರಿಂದ ಅನೇಕ ರಸ್ತೆ, ಸೇತುವೆ, ಚರಂಡಿಗಳಿಗೆ ಹಾನಿ ಆಗಿದೆ. ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಲು ಆದ್ಯತೆ ಮೇಲೆ ಇವುಗಳನ್ನು ದುರಸ್ತಿ ಮಾಡಬೇಕು. ಲೋಕೋಪಯೋಗಿ, ಪಿ.ಆರ್.ಇಡಿ, ಸಣ್ಣ ನೀರಾವರಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಮಳೆ ಹಾನಿಯಿಂದ ಆಗಿರುವ ಮೂಲ ಸೌಕರ್ಯಗಳ ದುರಸ್ತಿಗೆ ಅಂದಾಜು ಮಾಡಿ, ಆಯಾ ಇಲಾಖೆ ನೇರವಾಗಿ ಪ್ರಸ್ತಾವನೆ ಸಲ್ಲಿಸಿ, ಅದರ ಪ್ರತಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ತಕ್ಷಣ ಸಲ್ಲಿಸುವಂತೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಇಂದು ಗೂಗಲ್ ಮೀಟ್ದಲ್ಲಿ ಆನ್ಲೈನ್ ಮೂಲಕ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸಿ, ಜಿಲ್ಲಾಮಟ್ಟದ ಅಧಿಕಾರಿಗಳನ್ನು ಉದ್ದೇಶಿಸಿ, ಮಾತನಾಡಿದರು.
ಜಿಲ್ಲೆಯ ಮೂಲ ಸೌಕರ್ಯಗಳ ಹಾನಿ ಕುರಿತು ಸರ್ಕಾರಕ್ಕೆ ತಕ್ಷಣ ಪ್ರಸ್ತಾವನೆಗಳನ್ನು ಸಲ್ಲಿಸಬೇಕು. ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಬೆಳೆ ಸಮೀಕ್ಷೆ, ರಸ್ತೆ, ಸೇತುವೆ ಹಾನಿ ಸಮೀಕ್ಷೆಯನ್ನು ಖುದ್ದಾಗಿ ಪರಿಶೀಲಿಸಬೇಕೆಂದು ಅವರು ಹೇಳಿದರು.
*ಜಿಲ್ಲೆಯಲ್ಲಿ ಶೇ. 83 ರಷ್ಟು ಬಿತ್ತನೆ ಪೂರ್ಣ:* ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಗಳು ಚನ್ನಾಗಿ ಆಗಿದ್ದರಿಂದ ರೈತರಿಗೆ ಭೂಮಿ ಹದಗೊಳಿಸಲು ಮತ್ತು ಬಿತ್ತನೆಗೆ ಸಿದ್ದಗೊಳಿಸಲು ಸಹಾಯವಾಗಿತ್ತು. ಮುಂಗಾರು ಮಳೆ ನಿರಂತರವಾಗಿ ಮತ್ತು ವಾಡಿಕೆಗಿಂತ ಹೆಚ್ಚಾಗಿದ್ದರಿಂದ ಭೂಮಿಯ ತೇವಾಂಶ ಹೆಚ್ಚಳವಾಗಿದೆ. ಪ್ರಸಕ್ತ ಸಾಲಿಗೆ 2.81 ಲಕ್ಷ ಹೆಕ್ಟೆರ್ ಭೂಮಿ ಬಿತ್ತನೆಯ ಗುರಿ ಹೊಂದಲಾಗಿತ್ತು. ಅದರಂತೆ ಇಲ್ಲಿಯವರೆಗೆ 2.35 ಲಕ್ಷ ಹೆಕ್ಟೆರ್ ಭೂಮಿ ಬಿತ್ತನೆಯಾಗಿದೆ. ಶೇ. 83 ರಷ್ಟು ಮುಂಗಾರು ಬಿತ್ತನೆಯಾಗಿದೆ.
ಅತಿಯಾದ ಮಳೆಯಿಂದ ಬೆಣ್ಣಿಹಳ್ಳ ಮತ್ತು ತುಪ್ಪರಿಹಳ್ಳದ ಅಕ್ಕಪಕ್ಕದ ಜಮೀನುಗಳಲ್ಲಿ ಪ್ರವಾಹದಿಂದ ನೀರು ಹೋಗಿ ಮೊಳಕೆಯೊಡೆಯುವ ಪ್ರಮಾಣ ಕಡಿಮೆಯಾಗಿದೆ. ಕೆಲವು ಭಾಗದಲ್ಲಿ ರೈತರು ಮರು ಬಿತ್ತನೆ ಮಾಡುತ್ತಿದ್ದಾರೆ. ಇಂತಹ ರೈತರಿಗೆ ಯಾವುದೇ ರೀತಿಯ ಬೀಜ, ಗೊಬ್ಬರ ಕೊರತೆಯಾಗದಂತೆ ಕೃಷಿ ಇಲಾಖೆಯ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
*ಬೀಜ ವಿತರಣೆ:* ಜಿಲ್ಲೆಯಲ್ಲಿ ಮುಂಗಾರು ಪೂರ್ವದಲ್ಲಿ ಸುಮಾರು 14,430 ಕ್ವಿಂಟಾಲ್ ವಿವಿಧ ರೀತಿಯ ಬೀಜಗಳನ್ನು ದಾಸ್ತಾನು ಹೊಂದಲಾಗಿತ್ತು. ರೈತರಿಗೆ ಈವರೆಗೆ ಬಿತ್ತನೆಗಾಗಿ 12,899 ಕ್ವಿಂಟಾಲ್ ವಿವಿಧ ರೀತಿಯ ಬೀಜಗಳನ್ನು ವಿತರಿಸಲಾಗಿದೆ. ಮತ್ತು 1528 ಕ್ಷಿಂಟಾಲ್ ಬೀಜಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಹೊಂದಲಾಗಿದ್ದು, ಅಗತ್ಯವಿದ್ದಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ಬೀಜಗಳನ್ನು ವಿತರಿಸಬೇಕು. ರೈತರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ತಿಳಿಸಿದರು.
*ರಸಗೊಬ್ಬರ ದಾಸ್ತಾನು:* ರೈತರ ಬೇಡಿಕೆಗೆ ಅನುಗುಣವಾಗಿ ಜಿಲ್ಲೆಯಲ್ಲಿ ಯೂರಿಯಾ ಸೇರಿದಂತೆ ವಿವಿಧ ರೀತಿಯ ರಸಗೊಬ್ಬರವನ್ನು ಪೂರೈಸಲಾಗುತ್ತಿದೆ. ಜೂನ್ ತಿಂಗಳ ಅಂತ್ಯಕ್ಕೆ ಸುಮಾರು 23 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇದೆ. ಜಿಲ್ಲೆಯಲ್ಲಿ ಹಿಂದಿನ ಶಿಲ್ಕು ಸೇರಿ ಪೂರೈಕೆಯಾಗಿದ್ದು 46,200 ಮೆಟ್ರಿಕ್ ಟನ್ ರಸಗೊಬ್ಬರ. ಇದರಲ್ಲಿ ಈಗಾಗಲೇ 32,000 ಮೆಟ್ರಿಕ್ ಟನ್ ರಸಗೊಬ್ಬರವನ್ನು ರೈತರಿಗೆ ವಿತರಿಸಲಾಗಿದೆ. ಈಗಲೂ 14,200 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯವಿದೆ.
*ಯೂರಿಯಾ ರಸಗೊಬ್ಬರ:* ವಿವಿಧ ಬೆಳೆಗಳಿಗೆ ಬಳಸುವ ಯೂರಿಯಾ ರಸಗೊಬ್ಬರದ ಬೇಡಿಕೆ ಜೂನ್ ಅಂತ್ಯಕ್ಕೆ 11,500 ಆಗಿತ್ತು. ಇಲ್ಲಿಯವರೆಗೆ ಜಿಲ್ಲೆಗೆ 15,900 ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರ ಪೂರೈಕೆಯಾಗಿದ್ದು, ಇದರಲ್ಲಿ 13,000 ಮೆಟ್ರಿಕ್ ಟನ್ ಮಾರಾಟವಾಗಿ, ಇನ್ನೂ 2,900 ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರ ದಾಸ್ತಾನು ಇದೆ.
ಅತಿಯಾದ ಮಳೆಯಿಂದಾಗಿ ಗೋವಿನ ಜೋಳ, ಕಬ್ಬು ಮುಂತಾದ ಬೆಳೆಗಳಿಗೆ ಕೆಲವರು ಅಗತ್ಯಕ್ಕಿಂತ ಹೆಚ್ಚು ರಸಗೊಬ್ಬರವನ್ನು ಬಳಸುತ್ತಾರೆ. ಮತ್ತು ಕೆಲವೊಬ್ಬರು ಅವಶ್ಯಕತೆಗಿಂತ ಹೆಚ್ಚು ಗೊಬ್ಬರವನ್ನು ದಾಸ್ತಾನು ಮಾಡುತ್ತಾರೆ. ಇದರಿಂದಾಗಿ ತೊಂದರೆಯಾಗುತ್ತದೆ. ಭೂಮಿಯ ಫಲವತ್ತತೆಗೆ ಅನುಗುಣವಾಗಿ ತಜ್ಞರು ಶೀಫಾರಸ್ಸು ಮಾಡಿದ ಪೋಷಕಾಂಶವಿರುವ ಗೊಬ್ಬರಗಳನ್ನು ಬಳಸಬೇಕು. ಈ ಕುರಿತು ರೈತರಲ್ಲಿ ಜಾಗೃತಿ ಮೂಡಸಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.
ಮಾರುಕಟ್ಟೆಯಲ್ಲಿ ಕಳಪೆ ಬೀಜ, ಗೊಬ್ಬರದ ಬಗ್ಗೆ ನಿಗಾ ವಹಿಸಬೇಕು. ರಸಗೊಬ್ಬರಗಳನ್ನು ಎಆರ್ಪಿ ದರಗಳಲ್ಲಿಯೇ ಮಾರಾಟ ಮಾಡಬೇಕು. ಯಾವುದೇ ಲಿಂಕ್ ಗೊಬ್ಬರಗಳನ್ನು ರೈತರಿಗೆ ಒತ್ತಾಯಪೂರ್ವಕವಾಗಿ ನೀಡದಂತೆ ಕ್ರಮ ವಹಿಸಬೇಕೆಂದು ಕೃಷಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
*ಬೆಳೆ ಹಾನಿ ಸಮೀಕ್ಷೆ:* ನಿರಂತರ ಮಳೆಯಿಂದಾಗಿ ಜಿಲ್ಲೆಯ ನವಲಗುಂದ, ಕುಂದಗೋಳ ಹಾಗೂ ಹುಬ್ಬಳ್ಳಿ ಗ್ರಾಮೀಣ ಭಾಗದಲ್ಲಿ ಬೆಳೆ ಹಾನಿ ಕುರಿತು ರೈತರಿಂದ ಮನವಿ ಸಲ್ಲಿಕೆಯಾಗಿವೆ. ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಈಗಾಗಲೇ ಈ ಭಾಗದಲ್ಲಿ ಸಮೀಕ್ಷೆ ಕಾರ್ಯವನ್ನು ಮಾಡಲಾಗುತ್ತಿದೆ. ಕಂದಾಯ, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಅಧಿಕಾರಿಗಳ ತಂಡವು ಆದಷ್ಟು ಬೇಗ ಬೆಳೆ ಹಾನಿ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು. ಮಾಹಿತಿಯನ್ನು ಸರಿಯಾಗಿ ದಾಖಲಿಸಬೇಕೆಂದು ಅವರು ಹೇಳಿದರು.
*ಮನೆ ಹಾನಿ:* ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ವಿವಿಧ ತಾಲೂಕುಗಳು ಸೇರಿ 191 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಈಗಾಗಲೇ ರಾಜೀವಗಾಂಧಿ ಹೌಸಿಂಗ್ ಕಾರ್ಪೋರೇಷನ್ (ಆರ್.ಜಿ.ಎಚ್.ಸಿ.ಎಲ್) ತಂತ್ರಾಂಶದ ಮೂಲಕ ಹಾನಿಯಾಗಿರುವ ಮನೆಗಳ ವಿವರಗಳನ್ನು ದಾಖಲಿಸಬೇಕು. ಮನೆ ಹಾನಿ ಸಮೀಕ್ಷೆಯನ್ನು ಸೋಮವಾರದ ಒಳಗಾಗಿ ಪೂರ್ಣಗೊಳಿಸಬೇಕು. ತಹಶೀಲ್ದಾರರು ಮತ್ತು ಇಓ ಅವರು ಈ ಕುರಿತು ನಿರಂತರ ಮೇಲ್ಸವಾರಿ ಮಾಡಬೇಕೆಂದು ಅವರು ಹೇಳಿದರು.
ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ, ಶೆಡ್ಗಳಿಗೆ ಆದಷ್ಟು ಬೇಗನೆ ಪರಿಹಾರವನ್ನು ನೀಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಹಾಗೂ ಅನಧಿಕೃತವಾಗಿ ಸುಳ್ಳು ದಾಖಲೆಗಳನ್ನು ನೀಡಿ ವಂಚಿಸಿದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದರು.
*ಕೆರೆಗಳಿಗೆ ತಂತಿ ಬೇಲಿ:* ಜನವಸತಿ ಇರುವ ಪ್ರದೇಶದಲ್ಲಿ ಕೆರೆಗಳಿಗೆ ತಂತಿ ಬೇಲಿ ಅಥವಾ ಗಿಡಗಳನ್ನು ನೆಡುವ ಮೂಲಕ ಜೈವಿಕ ತಡೆಗೊಡೆ ವ್ಯವಸ್ಥೆಯನ್ನು ಮಾಡಬೇಕು. ಹಾಗೂ ಕೆರೆಯ ಪಕ್ಕದ ರಸ್ತೆ ಹಾಳಾಗಿದ್ದರೆ, ತಾತ್ಕಾಲಿಕವಾಗಿ ಬೇರೆ ರಸ್ತೆ ವ್ಯವಸ್ಥೆ ಕಲ್ಪಿಸಿಕೊಡಬೇಕು. ಕೆರೆಯಲ್ಲಿ ಈಜುವುದು ಮತ್ತು ಜಾನುವಾರಗಳ ಮೈ ತೊಳೆಯಲು ಹೋಗದ ಹಾಗೆ ಮುನ್ನೆಚ್ಚರಿಕೆ ವಹಿಸಬೇಕು. ಕೆರೆಗಳ ಸುತ್ತಲೂ ಸೂಚನಾ ಫಲಕಗಳನ್ನು ಅಳವಡಿಸಿ, ಮತ್ತು ಊರಿನಲ್ಲಿ ಡಂಗುರ ಸಾರುವ ಮೂಲಕ ಜನರಿಗೆ ಜಾಗೃತಿ ಮೂಡಿಸಿ ಎಂದು ಎಲ್ಲ ತಾಲೂಕಿನ ತಹಶೀಲ್ದಾರರಿಗೆ, ಪಿಡಿಓ ಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಮಳೆಯು ಮುಗಿಯುವವರೆಗೆ ಕೆರೆಯ ಬಗ್ಗೆ ಎಚ್ಚರಿಕೆವಹಿಸಿ ಮುಳ್ಳಿನ ಬೇಲಿಗಳನ್ನು ಹಾಕುವ ಮೂಲಕ ಮಕ್ಕಳು, ಜಾನುವಾರಗಳು ಕೆರೆಯ ಹತ್ತಿರ ಬಿಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು.
*ವಿದ್ಯುತ್ ಅವಘಡದ ಬಗ್ಗೆ ಎಚ್ಚರ:* ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಅನೇಕ ಕಡೆಗಳಲ್ಲಿ ವಿದ್ಯುತ್ ಕಂಬ ಬಾಗಿವೆ. ವಿದ್ಯುತ್ ತಂತಿ ಕೆಳಮಟ್ಟದಲ್ಲಿ ಜೋತು ಬಿದ್ದಿವೆ. ಇವುಗಳಿಂದ ಯಾವುದೇ ಜೀವ ಹಾನಿ, ಅವಘಡಗಳು ಆಗದಂತೆ ಹೆಸ್ಕಾಂ ಇಲಾಖೆಯವರು ಮುನ್ನಚ್ಚರಿಕೆ ವಹಿಸಬೇಕು. ವಿದ್ಯುತ್ ಕಂಬಗಳನ್ನು ಹಾಗೂ ಜೋತು ಬಿದ್ದಿರುವ ತಂತಿಗಳನ್ನು ಆದಷ್ಟು ಬೇಗನೆ ಸರಿಪಡಿಸಬೇಕೆಂದು ಸೂಚಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಬೆಳೆ ಹಾನಿ ಸಮೀಕ್ಷೆ ಹಾಗೂ ಮನೆ ಹಾನಿ ಸಮೀಕ್ಷೆ ಕುರಿತು ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಸಭೆ ನಿರ್ವಹಿಸಿದರು.
ಸಭೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯರು, ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು, ತಹಶೀಲ್ದಾರರು, ತಾಲೂಕಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.