ಮಂಗಳೂರು, ಜೂನ್ 25: ಕಡಲನಗರಿ ಮಂಗಳೂರಿನಲ್ಲಿ ಭ್ರಷ್ಟಚಾರ ಮಿತಿ ಮೀರಿದೆ. ಕಲ್ಲು ಸಹ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸರಿಯಲು ಲಂಚ ಕೇಳುತ್ತಿವೆ ಎಂದು ಜನ ಮಾತನಾಡುತ್ತಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ಎಲ್ಲ ವಿಭಾಗಗಳಿಗೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದಾಗ ಹಲವು ಹುಳುಕುಗಳು ಬೆಳಕಿಗೆ ಬಂದಿವೆ. ಲೋಕಾಯುಕ್ತ ಅಧಿಕಾರಿಗಳ ಅನಿರೀಕ್ಷಿತ ಭೇಟಿ ವೇಳೆ ಪಾಲಿಕೆಯಲ್ಲಿನ ಭ್ರಷ್ಟ ಅಧಿಕಾರಿಗಳ ನಿಜ ಬಣ್ಣ ಬಯಲಾಗಿದೆ. ಕಂದಾಯ ವಿಭಾಗ, ಆರೋಗ್ಯ ವಿಭಾಗ, ಎಂಜಿನಿಯರ್ ವಿಭಾಗ, ಲೆಕ್ಕ ಪತ್ರ ವಿಭಾಗ, ನಗರ ಯೋಜನಾ ವಿಭಾಗ, ಆಯುಕ್ತರ ಕಛೇರಿಯಲ್ಲಿ ಕಡತ ವಿಲೇವಾರಿಯಲ್ಲಿ ಹಲವಾರು ನ್ಯೂನತೆ ಇರುವುದು ಗೊತ್ತಾಗಿದೆ. ಅದರಲ್ಲೂ ಕಂದಾಯ ಮತ್ತು ನಗರ ಯೋಜನಾ ವಿಭಾಗದ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು ಬ್ರೋಕರ್ ಒಬ್ಬರ ಬಳಿ 5 ಲಕ್ಷ ರೂ. ಹಣವೂ ಪತ್ತೆಯಾಗಿದೆ.
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಚುನಾಯಿತ ಕೌನ್ಸಿಲ್ನ ಅಧಿಕಾರವಧಿ ಫೆಬ್ರವರಿ 27 ಕ್ಕೆ ಕೊನೆಯಾಗಿದೆ. ಆ ಬಳಿಕ ಚುನಾವಣೆ ನಡೆಯದಿರುವ ಕಾರಣ ಅಧಿಕಾರಿಗಳದ್ದೇ ರಾಜ್ಯಭಾರ ಎಂಬಂತಾಗಿದೆ. ಆರೋಗ್ಯ ವಿಭಾಗದಲ್ಲಿ ಹಲವಾರು ಉದ್ದಿಮೆ ಪರವಾನಗಿಯ ಕಡತಗಳು ವೆಬ್ಸೈಟ್ನಲ್ಲಿ ಬಾಕಿ ಇರುವುದು ಪತ್ತೆಯಾಗಿದೆ.