ರಾಮದುರ್ಗ: ಮಕ್ಕಳ ಶಿಕ್ಷಣ ಮಟ್ಟ ಸುಧಾರಿಸುವ ಹಾಗೂ ಅಪೌಷ್ಠಿಕತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಅಂಗನವಾಡಿಗಳ ಮೂಲಕ ಮಕ್ಕಳಿಗೆ ಪೌಷ್ಟಿಕತೆ ಹಾಗೂ ಮಹಿಳೆಯರ ಆರೋಗ್ಯ ಕಾಳಜಿಗೆ ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.
ತಾಲೂಕಿನ ಗೊಡಚಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಕಾರ ನೀಡುವ ಸೌಲಭ್ಯಗಳನ್ನು ಅಂಗನವಾಡಿ ನೌಕರರು ಹಾಗೂ ಇಲಾಖೆ ಸಿಬ್ಬಂದಿ ಅವುಗಳ ಅನುಷ್ಠಾನಕ್ಕೆ ಶ್ರಮಿಸಬೇಕು. ಅಂದಾಗ ಮಾತ್ರ ಸರಕಾರದ ಯೋಜನೆ ಸಫಲಗೊಳ್ಳಲು ಸಾಧ್ಯ ಎಂದರು.
ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಮೇಲಿಂದ ಮೇಲೆ ಅಂಗನವಾಡಿ ಕೇಂದ್ರಗಳನ್ನು ಪರಿಶೀಲನೆ ನಡೆಸಿ, ಇಲಾಖೆಯಿಂದ ದೊರೆಯುವ ಎಲ್ಲ ಸೌಲಭ್ಯಗಳ ಸಮರ್ಪಕ ಅನುಷ್ಠಾನದ ಬಗ್ಗೆ ಗಮನ ಹರಿಸಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಲಕ್ಕವ್ವ ವಗ್ಗರ, ಸಿದ್ದಪ್ಪ ಗೊವರ, ಶಿವನಗೌಡ ಪಾಟೀಲ, ಈರಣ್ಣ ಕಾಮನ್ನವರ, ಗುರುಬಾಯಿ ಪೂಜೇರ, ಗಂಗವ್ವ ಮಾಕಾಳಿ, ಗಂಗಪ್ಪ ಹಾದಿಮನಿ, ಮುಖಂಡರಾದ ಸಿದ್ದಿಂಗಪ್ಪ ಸಿಂಗಾರಗೊಪ, ಜಿ.ಬಿ. ರಂಗನಗೌಡ್ರ, ಮಹಾಂತೇಶ ತಳವಾರ, ಈರಪ್ಪ ಗುಡೆನ್ನವರ, ಕಾಶಪ್ಪಗೌಡ ಪಾಟೀಲ, ಜಿ.ಪಂ ಎಇಇ ಎಂ.ಡಿ ಈಜಾನ, ಶಿಶು ಅಭಿವೃದ್ಧಿ ಅಧಿಕಾರಿ ಶಂಕರ ಕಂಬಾರ, ಪಿಡಿಓ ಸಿ.ಕೆ. ಕೊಪ್ಪದ, ಸೇರಿದಂತೆ ಇತರರಿದ್ದರು.