ಶಿರೂರು ಪುನರ್‌ವಸತಿ ಗ್ರಾಮದಲ್ಲಿ ದಿ. ಕೆ.ಎಚ್.ಪಾಟೀಲ್ ರವರ ಮೂರ್ತಿ ಅನಾವರಣ

Ravi Talawar
ಶಿರೂರು ಪುನರ್‌ವಸತಿ ಗ್ರಾಮದಲ್ಲಿ ದಿ. ಕೆ.ಎಚ್.ಪಾಟೀಲ್ ರವರ ಮೂರ್ತಿ ಅನಾವರಣ
WhatsApp Group Join Now
Telegram Group Join Now
ಕೆ.ಎಚ್. ಪಾಟೀಲ್ ಅವರು ಹುಟ್ಟು ಹೋರಾಟಗಾರರಾಗಿದ್ದರು- ಗೃಹ ಸಚಿವ ಡಾ. ಜಿ. ಪರಮೇಶ್ವರ
ಕೊಪ್ಪಳ ಜೂನ್ 22 (ಕರ್ನಾಟಕ ವಾರ್ತೆ): ಕೆ.ಎಚ್. ಪಾಟೀಲ್ ಅವರು ತಮ್ಮ ಗೌಡಿಕೆಯನ್ನು ಮೀರಿ ಜನ ಸಮುದಾಯದ ಜೊತೆಗೆ ಗುರುತಿಸಿಕೊಳ್ಳುವುದರ ಜೊತೆಗೆ ಅವರು ಜನರ ಕಷ್ಟಗಳಿಗೆ ಸ್ಪಂದಿಸುವ ಹುಟ್ಟು ಹೋರಾಟಗಾರರಾಗಿದ್ದರು ಎಂದು ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಹೇಳಿದರು.
ಅವರು ರವಿವಾರ ಕೊಪ್ಪಳ ಜಿಲ್ಲೆ ಕುಕನೂರು ತಾಲ್ಲೂಕಿನ ಶಿರೂರ ಪುನರವಸತಿ ಗ್ರಾಮದಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತ ವತಿಯಿಂದ ಹಮ್ಮಿಕೊಂಡಿದ್ದ ಮಾಜಿ ಸಚಿವರಾಗಿದ್ದ ದಿ. ಕೆ.ಎಚ್. ಪಾಟೀಲ್ ಅವರ ಮೂರ್ತಿ ಅನಾವರಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ರಾಜಕಾರಣದಲ್ಲಿ ಬಹಳ ವರ್ಷಗಳ ಕಾಲ ಜನ ಸಮುದಾಯದಲ್ಲಿ ಉಳಿದ ಕೆ.ಎಚ್. ಪಾಟೀಲ್ ಅವರ ಮೂರ್ತಿಯನ್ನು ಇಂದು ಸಂತೋಷದಿಂದ ಅನಾವರಣಗೊಳಿಸಿದ್ದೆನೆ. ನಾನು ಮೊದಲ ಬಾರಿ ಶಾಸಕನಾಗಿದ್ದಾಗ ಕೆ.ಎಚ್. ಪಾಟೀಲ್ ಅವರು ಕಂದಾಯ ಸಚಿವರಾಗಿದ್ದರು. ಯುವ ಉತ್ಸಾಹದ ಹೊಸ ಶಾಸಕರನ್ನು ಅವರು ಪ್ರೀತಿಯಿಂದ ಮಾತನಾಡಿಸುವುದರ ಜೊತೆಗೆ ನಮಗೆ ಪ್ರೋತ್ಸಾಹಿಸುತ್ತಿದ್ದರು. ಜನರ ಕಷ್ಟಗಳನ್ನು ದೂರ ಮಾಡುವ ಸಲುವಾಗಿ ಅವರು ಸಹಕಾರಿ ಕ್ಷೇತ್ರ. ಸಾಮಾಜಿಕ. ಆರ್ಥಿಕ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿದರು ಎಂದರು.
ಮೂರ್ತಿಗಳು ನೋಡಿದಾಗ ಸ್ಪೂರ್ತಿಯಾಗುತ್ತದೆ. ಇಂದಿರಾಗಾಂಧಿ ಅವರ ಮೂರ್ತಿ ನೋಡಿದರೆ ಅವರು ಬಡವರಿಗಾಗಿ ಹಲವಾರು ಯೋಜನೆ ಜಾರಿಗೆ ತಂದರು ಎಂದು ನೆನೆಸುತ್ತೆವೆ. ಡಿ.ದೇವರಾಜ ಅರಸು ಅವರ ಮೂರ್ತಿ ನೋಡಿದರೆ ಅವರು ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಕೆಲಸ ಮಾಡಿದರು ಎಂಬುದು ಹೇಗೆ ನೆನಪಿಗೆ ಬರುತ್ತದೆಯೊ ಹಾಗೆ ಕೆ.ಎಚ್. ಪಾಟೀಲ್ ಅವರ ಪ್ರತಿಮೆ ನೋಡಿದರೆ ಅವರ ಶಿಸ್ತಿನ ಶಿಫಾಯಿ ಹಾಗೂ ಹುಟ್ಟು ಹೋರಾಟಗಾರಿಕೆ ನೆನಪಿಗೆ ಬರುತ್ತದೆ ಎಂದು ಹೇಳಿದರು.
ರಾಜ್ಯ ಸರ್ಕಾರ 2 ವರ್ಷದಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ಪ್ರತಿ ವರ್ಷ 52 ಸಾವಿರ ಕೋಟಿ ರೂ. ಹಣವನ್ನು ನಮ್ಮ ಸರ್ಕಾರ ಖರ್ಚು ಮಾಡುತ್ತಿದೆ. ಜನ ಸಮುದಾಯಕ್ಕೆ ಉತ್ತಮ ಆಡಳಿತ ನೀಡುವ ಸರ್ಕಾರ ಅದೇ ಒಳ್ಳೆಯ ಸರ್ಕಾರ. ಇನ್ನೂ 2 ವರ್ಷ 8 ತಿಂಗಳಲ್ಲಿ ನಮ್ಮ ಸರ್ಕಾರ ಅನೇಕ ಉತ್ತಮ ಯೋಜನೆಗಳನ್ನು ಜಾರಿ ಮಾಡಲಿದೆ. ಈ ವರ್ಷದ ಬಜೆಟನಲ್ಲಿ ಸರ್ಕಾರ ನೀರಾವರಿಗಾಗಿ 22 ಸಾವಿರ ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ ಎಂದು ಹೇಳಿದರು.
ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ. ದೇಶಪಾಂಡೆ ಅವರು ಮಾತನಾಡಿ, ನಾನು ಮತ್ತು ಭೋಸರಾಜು ಅವರು ಕೆ.ಎಚ್ ಪಾಟೀಲ್ ಅವರ ಜೊತೆಗೆ ಕೆಲಸ ಮಾಡಿದ್ದೆವೆ. ಅವರು ಒಳ್ಳೆಯ ಆಡಳಿತಗಾರರಾಗಿದ್ದರು. ಅವರು ಪಾರದರ್ಶಕ ಆಡಳಿತಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದರು. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಪಕ್ಷಕ್ಕೆ ಹೆಚ್ಚಿನ ಶಕ್ತಿ ತುಂಬುವ ಕೆಲಸ ಅವರು ಮಾಡಿದ್ದಾರೆ. ತಮ್ಮ ಸರಳ ವ್ಯಕ್ತಿತ್ವದ ಜೊತೆಗೆ ಆಡಳಿತದಲ್ಲಿ ಹಿಡಿತ ಉಳ್ಳವರಾಗಿದ್ದರು. ಕೃಷಿ. ಸಹಕಾರ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದ್ದರು. ಕೆ.ಎಚ್. ಪಾಟೀಲ್ ಅವರನ್ನು ಹುಲಕೋಟಿಯ ಹುಲಿ ಎಂದೆ ಕರೆಯುತ್ತಿದ್ದರು ಎಂದು ಹೇಳಿದರು.
ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ. ಪಾಟೀಲ್ ಅವರು ಮಾತನಾಡಿ, ಶಿರೂರ ಗ್ರಾಮದಲ್ಲಿ ಕೆ.ಹೆಚ್.ಪಾಟೀಲ್ ರವರ ಮೂರ್ತಿಯನ್ನು ಸುಂದರವಾಗಿ ಪ್ರತಿಷ್ಠಾಪನೆ ಮಾಡಿರುವುದು ನನಗೆ ಸಂತಸ ತಂದಿದೆ. ಹತ್ತಿ ಮಾರುವುದಕ್ಕಾಗಿ ರೈತರಿಗೆ ಬಹು ದೊಡ್ಡ ಸವಾಲಾಗಿದ್ದ ಸಂದರ್ಭದಲ್ಲಿ ಕೆ.ಹೆಚ್.ಪಾಟೀಲ್ ರವರು ಸಹಕಾರಿ ಕ್ಷೇತ್ರದ ಮುಖಾಂತರ ಹತ್ತಿ ಮಿಲ್‌ಗಳನ್ನು ಪ್ರಾರಂಭ ಮಾಡಿ ರೈತರಿಗೆ ರಕ್ಷಣೆ ಮಾಡಿದರು. ಸಾಮಾಜಿಕ ನ್ಯಾಯವನ್ನು ಒದಗಿಸಲು ಸಹಕಾರ ಕ್ಷೇತ್ರದ ಮೂಲಕ ಹೋರಾಟ ಮಾಡಿರುವ ಅವರನ್ನು ನೆನಪಿಸುವಂತಹ ಕಾರ್ಯವನ್ನು ಶಿರೂರು ಗ್ರಾಮದಲ್ಲಾಗಿದೆ. ನಮ್ಮ ತಂದೆ ಕೆ.ಹೆಚ್.ಪಾಟೀಲ್ ಅವರ ಬಗ್ಗೆ ಎಲ್ಲರು ತಮ್ಮ ಸಂಪರ್ಕ ಅನುಭವವನ್ನು ಹಂಚಿಕೊಂಡಿದ್ದಾರೆ ಎಂದರು.
WhatsApp Group Join Now
Telegram Group Join Now
Share This Article