ನಿರಂತರ ಯೋಗದಿಂದ ದೇಹ ಮತ್ತು ಮನಸ್ಸು ಒಗ್ಗೂಡುತ್ತವೆ;
ಧಾರವಾಡ : ಯೋಗವು ಭಾರತವು ವಿಶ್ವಕ್ಕೆ ನೀಡಿದ ಬಹು ದೊಡ್ಡ ಕೊಡುಗೆ. ಮುನಷ್ಯನ ದೇಹ ಮತ್ತು ದೇಶ ಶಾಂತ,ತಂಪಾಗಿದ್ದರೆ ಇಡೀ ವಿಶ್ವದಲ್ಲಿ ಶಾಂತಿ ನೆಲೆಸುತ್ತದೆ. ಯೋಗ ಪದದ ಅರ್ಥ, ನಮ್ಮ ದೇಹ ಮತ್ತು ಮನಸ್ಸನ್ನು ಒಟ್ಟುಗೂಡಿಸುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಆರ್.ಎನ್.ಶಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆಯುಷ್ಯ ಇಲಾಖೆ ಹಾಗೂ ವಿವಿಧ ಯೋಗ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ 11 ನೇ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಯೋಗ ಎಂದರೆ ಕೂಡುವುದು. ಎಲ್ಲರನ್ನು ಸೇರಿಸುವುದು ಯೋಗವಾಗಿದೆ. ವಿಶ್ವದಲ್ಲಿ ಚದುರಿರುವ ಮನಸ್ಸುಗಳನ್ನು ಒಂದೆಡೆ ಸೇರಿಸುವ ಶಕ್ತಿ ಯೋಗಕ್ಕಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಪ್ರತಿ ವರ್ಷದಂತೆ ಈ ವರ್ಷವು ಯೋಗ ದಿನಾಚರಣೆಗೆ ಒಂದು ದೇಶ ; ಒಂದು ಆರೋಗ್ಯ ಎಂಬ ಘೋಷ ವಾಕ್ಯ ನೀಡಿದ್ದಾರೆ. ವಿಶ್ವದ ಶಾಂತಿ, ಸಮಾನತೆ, ಸಮಾಧಾನಕ್ಕಾಗಿ ಎಲ್ಲರೂ ಶ್ರಮಿಸುತ್ತಿದ್ದಾರೆ. ಪ್ರತಿಯೊಬ್ಬ ವ್ಯಕ್ತಿ ಅನುಭವಿಸುವ ಸಮಾಧಾನ, ನೆಮ್ಮದಿಯೂ ವಿಶ್ವದ ಸಮಾಧಾನವಾಗಿದೆ. ಯೋಗ ಸಾಧನೆಯು ಶಾಂತಿ, ನೆಮ್ಮದಿಯನ್ನು ನಮಗೆ ತಂದುಕೊಡುತ್ತದೆ. ಈ ಘೋಷ ವಾಕ್ಯದ ಉದ್ದೇಶ ಇಡೀ ಜಗತ್ತಿನಲ್ಲಿ, ಜಾಗತಿಕ ಮಟ್ಟದಲ್ಲಿ ಶಾಂತಿ,ನೆಮ್ಮದಿ,ನೆಲಸಲಿ. ಎಲ್ಲರೂ ಪರಸ್ಪರ ಆರೋಗ್ಯದಿಂದ ಇರಲಿ ಎಂದು ಅರ್ಥೈಸುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಮನುಷ್ಯ ಆರೋಗ್ಯದಿಂದ ಇರಲು,ಯೋಗ ಮಾಡುವ ಅಭ್ಯಾಸ ಮುಖ್ಯವಾಗಿದೆ. ಪ್ರತಿದಿನ ಯೋಗ ಮಾಡುವುದನ್ನು ನಮ್ಮ ಜೀವನ ಶೈಲಿಯಾಗಿ ರೂಡಿಸಿಕೊಳ್ಳಬೇಕು. ನಿರಂತರ ಯೋಗ ಆರೋಗ್ಯವನ್ನು ಹೆಚ್ಚಿಸುತ್ತದೆ. ಯೋಗ ನಮ್ಮ ಜೀವನ ಶೈಲಿ ಆಗಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ, ಐಎಎಸ್ ಪ್ರೊಬೇಷನರಿ ಅಧಿಕಾರಿ ರೀತಿಕಾ ವರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳ, ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಂ. ಹೊನಕೇರಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಗಣೇಶ ಕಬಾಡೆ ವೇದಿಕೆಯಲ್ಲಿ ಇದ್ದರು.
ಯೋಗ ಶಿಕ್ಷಕ ಜಗದೀಶ ಮಳಗಿ ಅವರು ಯೋಗ ಅಭ್ಯಾಸ ಮಾಡಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್. ಎಸ್. ಕೆಳದಿಮಠ,ಧಾರವಾಡ ತಹಶಿಲ್ದಾರಡಾ.ಡಿ.ಎಚ್.ಹೂಗಾರ, ಸರಕಾರಿ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಎಫ್.ಸಿದ್ದನಗೌಡರ ಹಾಗೂ ವಿವಿಧ ಇಲಾಖೆಯ ಅಧಿಕಾರಿ ವರ್ಗದವರು, ವಿವಿಧ ಸಂಘ ಸಂಸ್ಥೆಯವರು, ಯೋಗ ಕೂಟದ ಸದಸ್ಯರು, ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದವರು,ಸಾರ್ವಜನಿಕರು, ವಿದ್ಯಾರ್ಥಿಗಳು ಇಂದಿನ ಸಾಮೂಹಿಕ ಯೋಗ ಅಭ್ಯಾಸದಲ್ಲಿ ಭಾಗವಹಿಸಿದ್ದರು.