ಕರುನಾಡಿನ ಎಲ್ಲಾ ಮಹಿಳಾ ನಾಗರಿಕರಿಗೆ ಅವರ ಸಾಮಾಜಿಕ ಸ್ಥಾನಮಾನ, ಗುಣಮಟ್ಟದ ಅಭಿವೃದ್ಧಿ ಪಡಿಸಿಕೊಳ್ಳಲು, ಇತರರ ಮೇಲೆ ಅವಲಂಬನೆಯಾಗದೆ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆ ಎರಡು ವರ್ಷ ಯಶಸ್ವಿಯಾಗಿ ಪೂರೈಸುವುದರ ಮೂಲಕ ಮಹಿಳೆಯರ ಸ್ವಾವಲಂಬಿ ಹಾಗೂ ಆರ್ಥಿಕವಾಗಿ ಸ್ವತಂತ್ರರಾಗಿ ಬದುಕುವ ಕನಸು ಸಾಕಾರವಾಗುತ್ತಿದೆ.
ಎಐ ಗಳಂತಹ ತಂತ್ರಜ್ಞಾನ ಬಳಕೆಯಲ್ಲಿರುವ ಈ ಕಾಲಘಟ್ಟದಲ್ಲಿ ಇನ್ನು ಕೆಲವು ಕಡೆ ನಾಲ್ಕು ಚೌಕಟ್ಟಿನಲ್ಲಿಯೇ ಜೀವನ ಸಾಗಿಸುತ್ತಿರುವ ಮಹಿಳೆಯರ ಒಂದು ಗುಂಪಾದರೇ. ಸಂಚಾರ ಮಾಡಿದರೆ ಎಲ್ಲಿ ಸಾರಿಗೆ ವೆಚ್ಚ ತಗಲುತ್ತದೆ ಎಂದು ವರ್ಷದಲ್ಲಿ ಒಂದು ಬಾರಿ ಮನೆದೇವರ ಜಾತ್ರೆ ಹೆಸರಿನಲ್ಲಿ ಪ್ರಯಾಣ ಬೆಳೆಸಿದರೆ ಮತ್ತೇ ಮನೆ, ಮನೆಗೆಲಸ ಎಂದು ಮನೆಗೆ ಸಿಮೀತವಾಗುವ ಮಹಿಳೆಯರ ಇನ್ನೊಂದು ಗುಂಪು. ಅಲ್ಪ ಸ್ವಲ್ಪ ಸಂಚಾರ ಮಾಡಿದರೂ ಅದು ಮನೆಗೆ ದಿನಸಿ, ತರಕಾರಿ ತರುವ ಕಾರ್ಯಕ್ಕಾಗಿಯೋಅಥವಾ ಸಂಬಂಧಿಗಳ ಮನೆಗೆ ಭೇಟಿ ನೀಡುವುದಾಗಿರುತ್ತಿತ್ತು.
ಆದರೆ, ಈ ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದಲೂ ಕಾರಣವಿದ್ದರೂ ಕಾರಣವಿಲ್ಲದಿದ್ದೂ ಬಸ್ನಲ್ಲಿ ಮಹಿಳೆಯರ ಪ್ರಯಾಣದ ಸಂಖ್ಯೆ ಏರಿಕೆಯಾಗುತ್ತಿದೆ ಎನ್ನಬಹುದು. ಕೆಎಸ್ಆರ್ಟಿಸಿ ಬಸ್ನಲ್ಲಿ ಈಗ ಪುರುಷರಿಗಿಂತ ಹೆಚ್ಚು ಮಹಿಳೆಯರನ್ನೇ ನಾವು ಕಾಣಬಹುದಾಗಿದೆ. ಇದರಿಂದ ಅವರು ಆರ್ಥಿಕ, ಸಾಮಾಜಿಕ ಬೆಲಿಗಳಿಂದ ತಕ್ಕ ಮಟ್ಟಿಗೆ ಮುಕ್ತರಾಗಿ ಹಗಲಿನಲ್ಲಷ್ಟೇ ಅಲ್ಲದೇ ರಾತ್ರಿ ಸಮಯದಲ್ಲಿ ಭಯವಿಲ್ಲದೆ ಪ್ರಯಾಣವನ್ನು ಬೆಳೆಸುತ್ತಿರುವ ಸಂಗತಿ ಮಹಿಳಾ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರೆ ಅತಿಶಯೋಕ್ತಿ ಆಗಲಾರದು.
ಅಬ್ಬಾ..!ಉಚಿತ ಬಸ್ ಪ್ರಯಾಣದಿಂದ ಈಗ ಸಾರಿಗೆಯ ವೆಚ್ಚದ ಚಿಂತೆ ಬಿಟ್ಟು ಇಂಟರವ್ಯೂವ ನೀಡುವ ತಯಾರಿ ನಡೆಸಿದೆ ಎಂದು ಬೆಂಗಳೂರಿನ ಕಂಪನಿಯಲ್ಲಿ ಉದ್ಯೋಗಾಕಾಂಕ್ಷಿಯ ನುಡಿಗಳು ಒಂದೆಡೆಯಾದರೆ, ಕುಟುಂಬ ನಿರ್ವಹಣೆಯಲ್ಲಿ ಖರ್ಚಿನ ಬರೆಗೆ ಪ್ರವಾಸದ ಕನಸನ್ನು ನನಸು ಮಾಡಲು ಹಿಂಜರಿಯುವ ಅದೆಷ್ಟೋಗೃಹಣಿಯರು ಬ್ಯಾಗ್ ಪ್ಯಾಕ್ ಮಾಡಿತಮ್ಮ ಕನಸಿಗೆ ರೆಕ್ಕೆ ನೀಡಿದ ಶಕ್ತಿ ಯೋಜನೆಯ ಕೃಪೆಯಿಂದ ರಾಜ್ಯಾದ್ಯಂತ ಸಂಚಾರ ಮಾಡಿದಂತಾಯಿತು ಎಂದು ಹರ್ಷ ವ್ಯಕ್ತ ಪಡಿಸಿದ ಮಹಿಳಾಮಣಿಗಳ ನುಡಿ ಮತ್ತೊಂದೆಡೆ. ಮುಪ್ಪಿನಲ್ಲಿ ಇಷ್ಟ ದೇವರದರ್ಶನದ ಮಹದಾಸೆ ಹೊಂದಿರುವ ಹಿರಿಯ ಜೀವಿಗಳು ಈ ಉಚಿತ ಬಸ್ ಪ್ರಯಾಣದಿಂದ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಇಷ್ಟ ದೇವರ ದರ್ಶನ ಪಡೆದು ಪಾವನರಾದೇವು ಎಂದವರು ಇನ್ನೊಂದೆಡೆ ಹೀಗೆ ಶಕ್ತಿ ಯೋಜನೆ ಒಂದೇ ಇದ್ದರೂ ಇದರ ಫಲಾನುಭವಿಗಳಾದ ಮಹಿಳಾಮಣಿಗಳ ಧನ್ಯತಾ ಭಾವ ಅನೇಕ.
ಇನ್ನು ಕೆಲ ಮಹಿಳೆಯರು ಉಚಿತ ಪ್ರಯಾಣ ಯೋಜನೆಯಾದ ಈ ಶಕ್ತಿ ಯೋಜನೆಯನ್ನು ಕೇವಲ ಮನೆಯಿಂದ ಹೊರಗಡೆ ಸಂಚಾರ ಮಾಡಲು ಮಾತ್ರ ಉಪಯೋಗಿಸದೇ ಸಿಕ್ಕಿರುವ ಅವಕಾಶದಲ್ಲಿಯೇ ತಮ್ಮ ವ್ಯಾಪಾರವನ್ನು ಏಕೆ ವೃದ್ಧಿಸಿಕೊಳ್ಳಬಾರದೆಂದು ಮನೆಯಲ್ಲಿ ತಯಾರಿಸಿ ಮಾರಾಟ ಮಾಡುತ್ತಿದ್ದ ಹಪ್ಪಳ, ಉಪ್ಪಿನಕಾಯಿ, ರೋಟಿ, ಹೋಳಿಗೆಗಳ ಹೀಗೆ ಅನೇಕ ಆಹಾರ ಪದಾರ್ಥಗಳನ್ನು ಹಳ್ಳಿಯಿಂದ ನಗರಗಳಿಗೆ ಕೊಂಡೊಯ್ದು ಮಾರಾಟ ಮಾಡಿ ತಮ್ಮ ಉತ್ಪನ್ನದ ಹೆಸರು ಪ್ರಖ್ಯಾತಿ ಮಾಡುವುದರೊಂದಿಗೆ ತಮ್ಮ ಆರ್ಥಿಕ ಜೀವನಮಟ್ಟವನ್ನು ಸುಧಾರಿಸಿಕೊಂಡು ಸ್ವಾವಲಂಬನೆ ಜೀವನಕ್ಕೆ ಮಾದರಿಯಾಗಿ ಬದುಕುತ್ತಿದ್ದಾರೆ. ಆದರೆ ದುರದುಷ್ಟಕರ ಎಂದರೆ ಶಕ್ತಿ ಯೋಜನೆಯ ದುರುಪಯೋಗ ಪಡೆದುಕೊಳ್ಳುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅದೆಷ್ಟೊ ಹಾಸ್ಯಾತ್ಮಕವಾಗಿತೊರಿಸುವ ವಿಡಿಯೋ ಶಾಟ್ಸ್ಗಳು ಸ್ಕ್ರೋಲ್ ಮಾಡಿದಾಗ ಸೀಗುವಷ್ಟು ಯೋಜನೆಯಿಂದ ಸದುಪಯೋಗ ಪಡಿಸಿಕೊಂಡು ಜೀವನ ರೂಪಿಸಿಕೊಳ್ಳುತ್ತಿರುವುದರ ಬಗ್ಗೆ ಒಂದು ವಿಡಿಯೋ ಶಾಟ್ಸ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುವುದು ತುಂಬ ಕಡಿಮೆವಿರುವುದು ಬೇಸರದ ಸಂಗತಿ.
ವಿದ್ಯಾಶ್ರೀ ಹೊಸಮನಿ
ಪ್ರಶಿಕ್ಷಣಾರ್ಥಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,
ವಿಜಯಪಯರ