ಕಾರವಾರ, ಜೂನ್ 16: ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆಯ ಅಬ್ಬರ ತುಸು ಕಡಿಮೆಯಾಗಿದ್ದರೂ, ಅನೇಕ ಕಡೆಗಳಲ್ಲಿ ಭೂಕುಸಿತದ ಆತಂಕ ಮಾತ್ರ ಕಡಿಮೆಯಾಗಿಲ್ಲ. ಕಳೆದ ವರ್ಷ ಶಿರೂರಿನಲ್ಲಿ ಸಂಭವಿಸಿದ್ದ ಭೂಕುಸಿತದ ಕಹಿನೆನಪಿನಿಂದಲೇ ಜಿಲ್ಲೆಯ ಜನ ಇನ್ನೂ ಹೊರಬಂದಿಲ್ಲ. ಅಂಥದ್ದರಲ್ಲಿ ಈ ವರ್ಷ ಕೂಡ ಅನೇಕ ಕಡೆಗಳಲ್ಲಿ ಭೂಕುಸಿತ, ಗುಡ್ಡಕುಸಿತ ಸಂಭವಿಸಿವೆ. ಹೀಗಾಗಿ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ತಜ್ಞರ ತಂಡ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ತಜ್ಞರ ತಂಡ ಬಿಡು ಬಿಟ್ಟಿದೆ. ಕಾರವಾರ ತಾಲೂಕಿನಲ್ಲಿ ನಾಲ್ಕು ಕಡೆ ಗುಡ್ಡ ಕುಸಿತ ಆಗಿತ್ತು. ಹೀಗಾಗಿ ಕೆಲವೆಡೆ ಜನರನ್ನು ಸ್ಥಳಾಂತರಿಸಿದ್ದರೆ, ಇನ್ನು ಕೆಲವೆಡೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿತ್ತು.
ಕಾರವಾರ ತಾಲೂಕಿನ ಬಹುತೇಕ ಕಡೆ ಜನರು ಗುಡ್ಡ ಕುಸಿತದ ಆತಂಕ ಪಡುವ ಅಗತ್ಯ ಇಲ್ಲ ಎಂದು ಇದೀಗ ತಜ್ಞರು ಹೇಳಿದ್ದಾರೆ. ಕಾರವಾರ ನಗರದ ಹಬುವಾಡ ಪ್ರದೇಶದ ಮನೆಗಳಲ್ಲಿ ಜನ ನೆಲೆಸಬಹುದು. ಅಲ್ಲಿ ಗುಡ್ಡ ಜಾಸ್ತಿ ಕುಸಿದರೂ ಮನೆಗಳಿಗೆ ಹೆಚ್ಚಿನ ಹಾನಿ ಆಗಲ್ಲ ಎಂದು ತಜ್ಞರು ವರದಿಯಲ್ಲಿ ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಸುರಂಗ ಬಳಿ ಗುಡ್ಡ ಕುಸಿಯುವ ಸಾಧ್ಯತೆ ಕಡಿಮೆ ಎಂದು ಅವರು ಹೇಳಿದ್ದಾರೆ.