ಬೆಂಗಳೂರು, ಜೂನ್ 16: ಲೋಕಾಯುಕ್ತರೇ ಅಕ್ರಮದಲ್ಲಿ ಶಾಮೀಲಾಗಿರುವ ಆರೋಪ ಕೇಳಿಬಂದಿದೆ. ಆ ಮೂಲಕ ರಾಜ್ಯ ಸರ್ಕಾರಕ್ಕೆ ಮತ್ತೊಂದು ಮುಜುಗರ ಎದುರಾಗುವ ಆತಂಕ ಶುರುವಾಗಿದೆ. ಅಕ್ರಮದಲ್ಲಿ ಶಾಮೀಲಾಗಿರುವ ಲೋಕಾಯುಕ್ತ ಎಸ್ಪಿಯನ್ನು ರಾಜ್ಯ ಸರ್ಕಾರ ಕರ್ತವ್ಯದಿಂದ ರಿಲೀವ್ ಕೂಡ ಮಾಡಿದ್ದು, ಪೊಲೀಸರು ಬಂಧಿಸಿದ್ದಾರೆ.
ಇನ್ನು ಬಂಧನಕ್ಕೆ ಒಳಗಾಗಿರುವ ಲೋಕಾಯುಕ್ತ ಎಸ್ಪಿ, ಇಬ್ಬರು ಸಚಿವರ ಆಪ್ತ ಕಾರ್ಯದರ್ಶಿಗಳ ಹೆಸರು ಉಲ್ಲೇಖಿಸಿದ್ದಾರೆ. ಅಕ್ರಮದಲ್ಲಿ ಕೈಜೋಡಿಸಿದ್ದಾರೆಂದು ಮಾಹಿತಿ ಬಿಚ್ಚಿಟ್ಟಿದ್ದಾರೆ. ಆ ಮೂಲಕ ಅವರು ಕೂಡ ಅಕ್ರಮದಲ್ಲಿ ಶಾಮೀಲಾಗಿರುವ ಗುಮಾನಿ ಕೇಳಿಬಂದಿದೆ. ಒಂದು ವೇಳೆ ಸಚಿವರ ಹೆಸರು ಬಹಿರಂಗಗೊಂಡರೆ ಸರ್ಕಾರಕ್ಕೆ ಮತ್ತಷ್ಟು ಮುಜುಗರ ಉಂಟಾಗುವ ಸಾಧ್ಯತೆ ಇದೆ.
ಸದ್ಯ ಸಚಿವರ ಆಪ್ತ ಕಾರ್ಯದರ್ಶಿಗಳ ಪಾತ್ರದ ಬಗ್ಗೆ ಗುಮಾನಿ ಎದ್ದಿದ್ದು, ಇದು ಸರ್ಕಾರದ ವಿರುದ್ಧ ವಿಪಕ್ಷಕ್ಕೆ ಮತ್ತೊಂದು ಅಸ್ತ್ರ ದೊರೆಯುವ ಸಾಧ್ಯತೆ ಇದೆ. ಈ ಮುಂಚೆ ಕೂಡ ಲೋಕಾಯುಕ್ತರೇ ಅಕ್ರಮದಲ್ಲಿ ಶಾಮೀಲಾಗಿದ್ದಕ್ಕೆ ಸಿಎಂ ಸಿದ್ದರಾಮಯ್ಯರ ಮೊದಲ ಅವಧಿಯಲ್ಲೂ ಸರ್ಕಾರಕ್ಕೆ ಮುಜುಗರ ಉಂಟಾಗಿತ್ತು.