ಅತಿವೃಷ್ಟಿಯಿಂದ ಹಾನಿಗೊಳಗಾದ ಕುಂದಗೋಳ ತಾಲೂಕಿನ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭೇಟಿ, ಪರಿಶೀಲನೆ

Hasiru Kranti
ಅತಿವೃಷ್ಟಿಯಿಂದ ಹಾನಿಗೊಳಗಾದ ಕುಂದಗೋಳ ತಾಲೂಕಿನ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭೇಟಿ, ಪರಿಶೀಲನೆ
WhatsApp Group Join Now
Telegram Group Join Now
ಹುಬ್ಬಳ್ಳಿ, : ಎರಡು ಮೂರು ದಿನದಿಂದ ಧಾರವಾಡ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದೆ‌. ಅಣ್ಣಿಗೇರಿ, ನವಲಗುಂದ ಹಾಗೂ ಕುಂದಗೋಳ ತಾಲೂಕಿನ 130 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಹಾನಿಯಾದ ಮನೆಗಳಿಗೆ ಎಸ್.ಡಿ.ಆರ್.ಎಫ್ ನಿಯಮಾವಳಿಗಳ ಅನುಸಾರ ಪರಿಶೀಲಿಸಿ, ಪರಿಹಾರವನ್ನು ನೀಡಲಾಗುತ್ತದೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್. ಲಾಡ್ ಅವರು ಹೇಳಿದರು.
ಇಂದು ಕುಂದಗೋಳ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಜಿಲ್ಲಾಡಳಿತದಿಂದ ಪರಿಹಾರ ಕಾರ್ಯಗಳು ನಡೆಯುತ್ತಿವೆ. ಇನ್ನೂ ಹೆಚ್ಚಾಗಿ ಮಳೆ ಬರುವ ಸಾಧ್ಯತೆಯಿದೆ. ಸಾರ್ವಜನಿಕರು ಜಾಗರೂಕರಾಗಬೇಕಿದೆ. ಜನರು ಸರ್ಕಾರ, ಜಿಲ್ಲಾಡಳಿತ ನೀಡಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲನೆ ಮಾಡಬೇಕು ಎಂದರು.
ಮೃತವ್ಯಕ್ತಿ ಕುಟುಂಬಕ್ಕೆ ರೂ.5 ಲಕ್ಷ ಪರಿಹಾರ:
ಕಟ್ಟಿಹಳ್ಳ ದಾಟುವಾಗ ಮಳೆ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಟ್ರಾಕ್ಟರ್ ಉರುಳಿ ಬಿದ್ದಿದೆ. ಪರಿಣಾಮವಾಗಿ ಶಿವಯ್ಯ ಬಸಯ್ಯ ವಟ್ನಾಳಮಠ ಅವರು ಮೃತಪಟ್ಟಿದ್ದಾರೆ. ಜಾಗ್ರತೆ ವಹಿಸಿದ್ದರೆ ಒಂದು ಜೀವ ಉಳಿಯುತ್ತಿತ್ತು. ಇನ್ನೂ ಇಬ್ಬರಿಗೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದುರ್ಘಟನೆ ನಡೆಯಬಾರದಿತ್ತು. ಶಾಸಕರು, ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಸರ್ಕಾರದ ವತಿಯಿಂದ ಮೃತ ಕುಟುಂಬಸ್ಥರಿಗೆ ರೂ.5 ಲಕ್ಷ ಪರಿಹಾರವನ್ನು ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಧಾರವಾಡ ಜಿಲ್ಲೆಯಲ್ಲಿ ಮಳೆ ಪ್ರಮಾಣ ಹೆಚ್ಚಾಗಿರುತ್ತದೆ. ಪ್ರವಾಹ ರೀತಿಯಲ್ಲಿ ಹಳ್ಳಗಳು ಹರಿಯುತ್ತಿವೆ‌. ಇಂತಹ ಸಂದರ್ಭದಲ್ಲಿ ಬೈಕ್, ಕಾರ್, ಟ್ರಾಕ್ಟರ್, ಲಾರಿ, ಬಸ್ ಸೇರಿದಂತೆ ಯಾವುದೇ ರೀತಿಯ ವಾಹನಗಳನ್ನು ಹಳ್ಳಗಳನ್ನು, ಸೇತುವೆಗಳನ್ನು ದಾಟುವಾಗ ಎಚ್ಚರಿಕೆ ವಹಿಸಬೇಕು. ಯಾವುದೇ ರೀತಿಯ ದುಸ್ಸಾಹಸಕ್ಕೆ ಸಾರ್ವಜನಿಕರು ಮುಂದಾಗಬಾರದು. ನೀರು ಹರಿಯುವ ಪ್ರಮಾಣ ಇಳಿಮುಖವಾದ ನಂತರ ಜನರು ಹಳ್ಳ, ಸೇತುವೆಗಳನ್ನು ದಾಟಬೇಕು ಎಂದು ಹೇಳಿದರು.
ಸರ್ಕಾರ ಹಂತದಲ್ಲಿ ಮೂರು ತಿಂಗಳ ಹಿಂದೆ ಕಟ್ಟಿಹಳ್ಳ ಸೇತುವೆ ಬಗ್ಗೆ ಶಾಸಕರು, ಇಲಾಖೆ ಅಧಿಕಾರಿಗಳು ವರದಿಯನ್ನು ಸಲ್ಲಿಸಿದ್ದಾರೆ. ಬಯಲು ಪ್ರದೇಶದಲ್ಲಿ ಈ ತರಹದ ಸಾಕಷ್ಟು ಸೇತುವೆಗಳನ್ನು ನಿರ್ಮಾಣ ಮಾಡಲಾಗಿದ್ದು, ಅಲ್ಲದೇ ಇನ್ನೂ ಸೇತುವೆಗಳು ಬೇಕಾಗಿವೆ. ಈ ಪ್ರದೇಶದಲ್ಲಿನ ಪ್ರಮುಖವಾದ ಕಟ್ಟಿ ಹಳ್ಳ ಸೇತುವೆ ಮಾತ್ರ ಉಳಿದುಕೊಂಡಿದೆ. ಈ ಸೇತುವೆ ನಿರ್ಮಾಣಕ್ಕೆ ಸ್ವತಃ ಸಂಧಿಸಿದ ಸಚಿವರಲ್ಲಿ ಮನವಿ ಮಾಡಿ, ಶೀಘ್ರಗತಿಯಲ್ಲಿ ಬ್ರಜ್ ನಿರ್ಮಾಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಚಿವರು ತಿಳಿಸಿದರು.
ಹಳ್ಳಗಳ ಅಗಲೀಕರಣ ಮಾಡಿದಾಗ ಸಹ ಬದುಗಳಲ್ಲಿ ನೀರು ತುಂಬುತ್ತದೆ. ಸುಮಾರು 30 ರಿಂದ 60 ಕಿ.ಮೀ‌. ವರೆಗೆ ರೂ.200 ಕೋಟಿ ವೆಚ್ಚದಲ್ಲಿ ಬೆಣ್ಣೆ ಹಳ್ಳ ಹೂಳು ತೆಗೆಯಲಾಗುತ್ತದೆ. ರೈತರು ತಮ್ಮ ಹೊಲಗಳಲ್ಲಿನ ಬದುಗಳನ್ನು ಅಗಲೀಕರಣ ಮಾಡಲು ಅವಕಾಶ ನೀಡುವುದಿಲ್ಲ. ರೈತರು ಜೆಸಿಬಿಗಳನ್ನು ವಾಪಸ್ಸು ಕಳಿಸುತ್ತಿದ್ದಾರೆ. ಇದರಿಂದ ಸಮಸ್ಯೆಗಳು ಉಳಿದುಕೊಳ್ಳುತ್ತವೆ. ರೈತರು ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಹುಬ್ಬಳ್ಳಿಯ ನೇಕಾರ ನಗರದಲ್ಲಿ ಹುಸೇನಸಾಬ್ ಎಂಬುವವರು ನೀರಿನಲ್ಲಿ ಕೊಚ್ಚಿ ಕೊಂಡು ಹೋಗಿರುವ ಸಾಧ್ಯತೆ ಇದೆ. ಅವರ ಪತ್ತೆಗೆ ಪೊಲೀಸ್, ಅಗ್ನಿಶಾಮಕ, ಎಸ್‌‌ಡಿಆರ್‌‌ಎಫ್ ತಂಡದಿಂದ ಶೋಧ ಕಾರ್ಯ ನಡೆಯುತ್ತಿದೆ. ಘಟನಾ ಸ್ಥಳ ಸಮೀಪದ ಸಿಸಿಟಿವಿಯನ್ನು ಪರಿಶೀಲನೆ ಮಾಡಲಾಗಿದ್ದು, ಅವರ ಪತ್ತೆ ಕಾರ್ಯ ಮುಂದುವರಿದೆ ಎಂದು ಅವರು ಮಾಹಿತಿ ನೀಡಿದರು.
ರೂ. 5 ಲಕ್ಷ ಪರಿಹಾರ ಬಿಡುಗಡೆ ಆದೇಶದ ಪ್ರತಿ :
ಕುಂದಗೋಳ ತಾಲೂಕಿನಲ್ಲಿ ಹಂಚನಾಳ-ದ್ಯಾವೂರ ಗ್ರಾಮಗಳ ಮದ್ಯದಲ್ಲಿ ಹರಿಯುವ ಕಟ್ಟಿಹಳ್ಳದಲ್ಲಿ ಟ್ರ್ಯಾಕ್ಟರ್ ಮೇಲೆ ಹೋಗುವಾಗ ಪ್ರವಾಹಕ್ಕೆ ಸಿಲುಕಿ ಮೃತನಾದ ಶಿವಯ್ಯ ಬಸಯ್ಯ ವಟ್ನಾಳಮಠ ಇವರ ಮನೆಗೆ ಸಚಿವರು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ಸಂದರ್ಭದಲ್ಲಿ ಸರ್ಕಾರದಿಂದ ರೂ. 5 ಲಕ್ಷ ಪರಿಹಾರ ಬಿಡುಗಡೆ ಮಾಡಿದ ಆದೇಶದ ಪ್ರತಿಯನ್ನು ಕುಟುಂಬಸ್ಥರಿಗೆ ವಿತರಿಸಿದರು.
ಗಾಯಾಳುವಿಗೆ ಆರ್ಥಿಕ ನೆರವು ನೀಡಿದ ಸಚಿವರು :
ಕುಂದಗೋಳ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಟ್ಟಿಹಳ್ಳದ ಟ್ರ್ಯಾಕ್ಟರ್ ದುರಂತದಲ್ಲಿ ಸಿಲುಕಿ ಗಾಯಾಳು ಆಗಿದ್ದ ವಾಸು ಶಿವಪ್ಪ ಹೈಬತಿ ಅವರ ಆರೋಗ್ಯವನ್ನು ಸಚಿವರು ವಿಚಾರಣೆ ನಡೆಸಿದರು. ಗಾಯಾಳುವಿಗೆ ಸ್ವತಃ ರೂ. 20 ಸಾವಿರ ಹಣವನ್ನು ವಿತರಿಸಿದರು. ಅಲ್ಲದೇ ವೈದ್ಯರಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಕುಂದಗೋಳ ತಾಲೂಕು ಆಸ್ಪತ್ರೆ,  ಹಂಚಿನಾಳ ಮತ್ತು ದೇವನೂರ ಮಧ್ಯೆ ಬರುವ ಕಟ್ಟಿ ಹಳ್ಳದ ವೀಕ್ಷಣೆ, ದೇವನೂರ ಮತ್ತು ಕಮಡೊಳ್ಳಿ ಮಧ್ಯೆ ಬರುವ ಬೆಣ್ಣೆ ಹಳ್ಳ ಮತ್ತು ಬೆಳೆ ಹಾನಿ ವೀಕ್ಷಣೆ, ಹಿರೇನರ್ತಿ ಗ್ರಾಮದ ರಸ್ತೆ ಹಾಗೂ ಸರಕಾರಿ ಪ್ರೌಢಶಾಲೆ ವೀಕ್ಷಣೆ ಹಾಗೂ ಮುಳ್ಕೊಳ್ಳಿ ಗ್ರಾಮದ ರಸ್ತೆ ಹಾಗೂ ಬೆಳೆ ಹಾನಿ ವೀಕ್ಷಣೆ ಮಾಡಿದರು.
ಶಾಸಕ ಎಂ.ಆರ್.ಪಾಟೀಲ, ಮಾಜಿ ಶಾಸಕರಾದ ಎಂ.ಎಸ್.ಅಕ್ಕಿ, ಕುಸುಮಾವತಿ ಶಿವಳ್ಳಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಡಿವೈಎಸ್ಪಿ ವಿನೋದ ಮುಕ್ತೆದಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಕುಂದಗೋಳ ತಹಶೀಲ್ದಾರ ರಾಜು ಮಾವರಕರ, ಡಿಎಚ್ಓ ಡಾ.ಹೋನಕೇರಿ, ಹಿರಿಯ ಕಾರ್ಮಿಕ ನಿರೀಕ್ಷಕಿ ರಜನಿ ಹಿರೇಮಠ, ಕುಂದಗೋಳ ತಾಲೂಕು ವೈದ್ಯಾಧಿಕಾರಿ ಡಾ.ಸೋಫಿಯಾ, ಸಿಪಿಐ ನವೀನ ಜಕಲಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಮುಖಂಡರು, ರೈತರು, ಸಾರ್ವಜನಿಕರು ಇತರರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article