ಬಳ್ಳಾರಿ ಜೂನ್ 13 : ವಿರೋಧ ಪಕ್ಷದ ನಾಯಕರು ಮತ್ತು ಕಾಂಗ್ರೆಸ್ ಎಂ.ಪಿ ಎಂ ಎಲ್ ಎ ಮನೆಗಳ ಮೇಲೆ ಪದೇ ಪದೇ ರಾಜ್ಯ ಮತ್ತು ಇಡೀ ರಾಷ್ಟ್ರದಾದ್ಯಂತ ಬಿಜೆಪಿ ಪ್ರಾಯೋಜಿತ ಈ.ಡಿ ದಾಳಿ ನಡೆಯುತ್ತಿದೆ, ಇದು ವಿರೋಧ ಪಕ್ಷಗಳನ್ನು ಕುಗ್ಗಿಸುವ ಭಾರತೀಯ ಜನತಾ ಪಕ್ಷದ ಷಡ್ಯಂತರ ಮತ್ತು ಕುತಂತ್ರವಾಗಿದೆ ಎಂದು ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್ ಆರೋಪಿಸಿದರು.
ಅವರು ಇಂದು ನಗರದ ರಾಯಲ್ ಫೋರ್ಟ್ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ,
ನಗರ ಶಾಸಕ ಭರತ್ ರೆಡ್ಡಿ, ಕಂಪ್ಲಿ ಶಾಸಕ ಗಣೇಶ್, ಕೂಡ್ಲಿಗಿ ಶಾಸಕ ಡಾಕ್ಟರ್ ಶ್ರೀನಿವಾಸ್ ಮತ್ತು ಅತ್ಯಂತ ಮುಖ್ಯವಾಗಿ ಬಳ್ಳಾರಿ ಸಂಸದ ಈ ತುಕಾರಾಂ ಅವರ ಮನೆ ಮೇಲೆ ದಾಳಿ ನಡೆಸಿರುವುದು ಬಿಜೆಪಿಯ ಕುತಂತ್ರ ಮತ್ತು ದುರುದ್ದೇಶದಿಂದ ಕೂಡಿದೆ, ಈ ಮೇಲ್ಕಂಡ ಎಲ್ಲಾ ಶಾಸಕರು ರಾಜಕೀಯ ಮತ್ತು ವ್ಯವಹಾರಗಳಲ್ಲಿ ಶುದ್ಧ ಹಕ್ತರಾಗಿದ್ದಾರೆ, ಇವರಿಂದ ಒಂದು ಪೇಪರ್ ಅಥವಾ ನಯಾ ಪೈಸೆಯನ್ನು ಸಹ ವಶಪಡಿಸಿಕೊಳ್ಳಲಾಗದೆ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಇ.ಡಿ ಬರಿಗೈಯಲ್ಲಿ ವಾಪಸ್ ಹೋಗಿದೆ, ಲೋಕಸಭಾ ಚುನಾವಣೆಯಲ್ಲಿ ಎಸ್ ಟಿ ನಿಗಮದ ಹಣವನ್ನು ಬಳಸಲಾಗಿದೆ ಎಂದು ಸುಖ ಸುಮ್ಮನೆ ವಿರೋಧ ಪಕ್ಷಗಳು ಆರೋಪವನ್ನು ಮಾಡುತ್ತಿವೆ, ಆದರೆ ಎಸ್ಟಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಹಣ ಈಗಾಗಲೇ ಶೇಕಡ 95 ರಷ್ಟು ವಾಪಸ್ ಆಗಿದೆ, ಇನ್ನು ಹೇಗೆ ಆ ಹಣವನ್ನು ಎಂಪಿ ಚುನಾವಣೆಯಲ್ಲಿ ಬಳಸಲು ಸಾಧ್ಯ ಎಂದು ಪ್ರಶ್ನಿಸಿದರು.
ಬಿಜೆಪಿ ಆಡಳಿತದಿಂದ ಇಲ್ಲಿಯವರೆಗೆ ಈಡಿ ದಾಳಿ ನಡೆಸಿರುವುದು ಶೇಕಡ 98 ರಷ್ಟು ವಿರೋಧ ಪಕ್ಷಗಳ ಎಂಪಿ ಎಮ್ಎಲ್ಎ ಗಳ ಮನೆಗಳ ಮೇಲೆ ಕೇವಲ ಎರಡು ಪರ್ಸೆಂಟ್ ಮಾತ್ರ ಬಿಜೆಪಿಯ ನಾಯಕರ ಅಥವಾ ಬಿಜೆಪಿ ವಿರೋಧಿ ನಾಯಕರ ಮೇಲೆ ದಾಳಿಯಾಗಿದೆ. ಇದನ್ನು ಗಮನಿಸಿದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿ ವಿರೋಧ ಪಕ್ಷವೇ ಇರಬಾರದು ಎಂಬಂತೆ ವರ್ತಿಸುತ್ತದೆ, ಇಡಿ ಮತ್ತು ಸಿ ಬಿ ಐ ಯನ್ನು ಬಳಸಿಕೊಂಡು ರಾಷ್ಟ್ರದಲ್ಲಿ ಇತರೆ ಪಕ್ಷಗಳ ಆಡಳಿತವನ್ನು ಹೈಜಾಕ್ ಮಾಡಿ ಆ ರಾಜ್ಯದಲ್ಲಿ ಹಿಂಭಾಗಲಿನ ಮೂಲಕ ಆಡಳಿತವನ್ನು ಹಿಡಿಯಲು ಬಿಜೆಪಿ ಸರ್ಕಾರ ಸಂಚುರೂಪಿಸುತ್ತದೆ, ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಬಿಜೆಪಿ ನಡೆಯನ್ನು ಖಂಡಿಸಿದರು.
ಗ್ರಾಮಾಂತರ ಶಾಸಕ ಬಿ ನಾಗೇಂದ್ರ ಅವರಿಗೆ ಸಚಿವ ಸ್ಥಾನ ಸಿಗಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ ಆದರೆ ಹೈಕಮಾಂಡ್ ಯಾವಾಗ ಸಿಗ್ನಲ್ ಕೊಡುತ್ತೋ ಆಗ ನಾಗೇಂದ್ರ ಸಚಿವರಾಗುತ್ತಾರೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ಲಮಪ್ರಶಾಂತ್, ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ್, ಕೇಂದ್ರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎ ಮಾನಯ್ಯ, ಮೇಯರ್ ಮುಲ್ಲಂಗಿ ನಂದಿಶ್, ಎಪಿಎಂಸಿ ಅಧ್ಯಕ್ಷ ನಾಗೇಂದ್ರ, ಬಗರ್ ಹುಕುಮ್ ಅಧ್ಯಕ್ಷ ತಿಮ್ಮನಗೌಡ, ಗ್ಯಾರಂಟಿ ಯೋಜನೆಯ ಅನುಷ್ಠಾನದ ಅಧ್ಯಕ್ಷ ಕೆ ಚಿದಾನಂದಪ್ಪ,
ಬಿ ರಾಂಪ್ರಸಾದ್, ವಿ. ಕೆ. ಬಸಪ್ಪ, ಕಲ್ಕಂಬ ಪಂಪಾಪತಿ, ವೆಂಕಟೇಶ್ ಹೆಗಡೆ, ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಮಹಾನಗರ ಪಾಲಿಕೆ ಸದಸ್ಯರುಗಳು ಇದ್ದರು