ಧಾರವಾಡದಲ್ಲಿ ಮುಂದುವರೆದ ವ್ಯಾಪಕ ಮಳೆ; ಓರ್ವ ವ್ಯಕ್ತಿ ಕಣ್ಮರೆ; ಮುಂದುವರೆದ ಪರಿಹಾರ ಕಾರ್ಯಾಚರಣೆ

Ravi Talawar
ಧಾರವಾಡದಲ್ಲಿ ಮುಂದುವರೆದ ವ್ಯಾಪಕ ಮಳೆ; ಓರ್ವ ವ್ಯಕ್ತಿ ಕಣ್ಮರೆ; ಮುಂದುವರೆದ ಪರಿಹಾರ ಕಾರ್ಯಾಚರಣೆ
WhatsApp Group Join Now
Telegram Group Join Now
ಧಾರವಾಡ :  ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತವು ವ್ಯಾಪಕ ಮತ್ತು ನಿರಂತರ ಮಳೆಯಿಂದ ಹಾನಿಯಾಗುವ ಕುರಿತು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರಿಂದ ಜಿಲ್ಲೆಯ ಹಲವು ಭಾಗಗಳಲ್ಲಿ ಅತಿಯಾದ ಮಳೆಯಿಂದ ಜನ ಜಾನುವಾರುಗಳನ್ನು ರಕ್ಷಿಸಿ, ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು  ಈ ಕುರಿತು ಪ್ರಕಟಣೆ ನೀಡಿ, ಮಳೆ ಮುನ್ಸೂಚನೆ ಹಿನ್ನಲೆಯಲ್ಲಿ ಪ್ರಾಧಿಕಾರದ ಸಭೆ ಜರುಗಿಸಿ, ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಸಂಭವನೀಯ ಹಾನಿ ಪ್ರದೇಶಗಳ ಕುರಿತು ಸುರಕ್ಷತಾ ಕ್ರಮಗಳನ್ನು ಮತ್ತು ತಕ್ಷಣಕ್ಕೆ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿತ್ತು.
ಅದರಂತೆ ಕಳೆದ 24 ಗಂಟೆ ಅಂದರೆ ಜೂನ್ 12 ರ 8:30 ಗಂಟೆಯವರೆಗೆ ವ್ಯಾಪಕ ಮಳೆಯಿಂದಾಗಿ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಆಯಾ ತಾಲೂಕಿನ ತಹಶೀಲ್ದಾರ ನೇತೃತ್ವದಲ್ಲಿ ತಕ್ಷಣ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಂಡು ಕ್ರಮವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
*ಜಿಲ್ಲಾಡಳಿತದ ಮುಂಜಾಗ್ರತೆಯಿಂದ ಯಶಸ್ವಿಯಾದ ರಕ್ಷಣಾ ಕಾರ್ಯ:* ಧಾರವಾಡ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ (ಜೂ.12 ರ ಬೆಳಿಗ್ಗೆ 8:30 ರ ವರೆಗೆ) ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದು, ಜಿಲ್ಲಾಡಳಿತದ ಮುಂಜಾಗೃತಾ ಕ್ರಮಗಳಿಂದಾಗಿ ಬಹುತೇಕ ಸ್ಥಳಗಳಲ್ಲಿ ಉಂಟಾಗಿದ್ದ ಅಪಾಯವನ್ನು ಸಮರ್ಥವಾಗಿ ನಿರ್ವಹಿಸಿ, ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮತ್ತು ಇದರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಜನ, ಜನುವಾರು ಜೀವ ಹಾನಿಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
*ಕುಂದಗೋಳದಲ್ಲಿ ಓರ್ವ ವ್ಯಕ್ತಿ ಸಾವು, ಹುಬ್ಬಳ್ಳಿಯಲ್ಲಿ ಓರ್ವ ವ್ಯಕ್ತಿ ಕಣ್ಮರೆ:* ಕುಂದಗೋಳ ತಾಲ್ಲೂಕು ಹಂಚಿನಾಳ ಗ್ರಾಮದ ಹತ್ತಿರ ಹಳ್ಳದಲ್ಲಿ ಟ್ರಾಕ್ಟರ್ ಪಲ್ಟಿಯಾಗಿ ಕುಂದಗೋಳ ನಿವಾಸಿ ಶಿವಯ್ಯ ಬಸಯ್ಯ ವಟ್ನಾಲಮಠ (31) ಅವರು ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ವರದಿಯಾಗಿದೆ. ಇವರೊಂದಿಗೆ ಇದ್ದ ಕುಂದಗೋಳ  ನಿವಾಸಿ ವಾಸು ಶಿವಪ್ಪ ಬ್ಯಾಹಟ್ಟಿ (25) ಹಾಗೂ ಕಲಘಟಗಿ ತಾಲೂಕಿನ ಮುಕ್ಕಲ್ ಗ್ರಾಮದ ಮಲ್ಲಿಕಾರ್ಜುನ ಶಿವಪ್ಪ ಅಂಚಟಗೇರಿ (26) ಅವರು ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಮತ್ತು ಕುಂದಗೋಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮತ್ತು ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಹುಬ್ಬಳ್ಳಿನಗರ ತಾಲೂಕು ಅಯೋದ್ಯ ಗ್ರಾಮದ ನೇಕಾರನಗರ ಬ್ರಿಜ್ ಹತ್ತಿರ ಬೈಕಿನಲ್ಲಿ ರಸ್ತೆ ದಾಟುವಾಗ ಹುಸೇನಸಾಬ ಸಯ್ಯದಸಾಬ ಕಳಸ (58) ಅವರು ನೀರಿನ ರಭಸಕ್ಕೆ ಸಿಲುಕಿ ಕಣ್ಮರೆಯಾಗಿದ್ದಾರೆ ಎಂದು ಪ್ರಾಥಮಿಕ ವರದಿಯಾಗಿದೆ. ಇವರೊಂದಿಗೆ ಬೈಕ್‍ನಲ್ಲಿದ್ದ ವ್ಯಕ್ತಿ ಅಪಾಯದಿಂದ ಪಾರಾಗಿದ್ದಾರೆ. ತಹಶೀಲ್ದಾರ ಕಲ್ಲನಗೌಡ ಆರ್.ಪಾಟೀಲ ಅವರ ನೇತೃತ್ವದಲ್ಲಿ ತಾಲೂಕಾಡಳಿತವು ಕಣ್ಮರೆಯಾದ ವ್ಯಕ್ತಿಯ ಪತ್ತೆಗಾಗಿ ತೀವ್ರ ಕಾರ್ಯಾಚರಣೆ ಕೈಗೊಂಡಿದ್ದು, ತಪಾಸಣೆ ಕಾರ್ಯ ಮುಂದುವರೆದಿದೆ. ಹೆಚ್ಚಿನ ಕಾರ್ಯಾಚರಣೆ ಕೈಗೊಳ್ಳಲು ಬೆಳಗಾವಿಯಿಂದ ಇಂದು ಸಂಜೆ ಎಸ್‍ಡಿಆರ್‍ಎಫ್ ತಂಡ ಆಗಮಿಸಲಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
*ನವಲಗುಂದ ತಾಲ್ಲೂಕು:* ನವಲಗುಂದ ತಾಲ್ಲೂಕಿನಲ್ಲಿ ಬುಧವಾರ ಸುರಿದ ಮಳೆಗೆ ಯಮನೂರ ಗ್ರಾಮದ ಬೈಪಾಸ್ ಬಳಿ ಇರುವ ಕಾಶೀನಾಥ ಖೋಡೆ ಅವರ ಜಮೀನುದಲ್ಲಿ ನಿರ್ಮಿಸಿದ್ದ ಮನೆ ಸುತ್ತಲೂ ಬೆಣ್ಣಿಹಳ್ಳದ ನೀರು ಆವರಿಸಿ ಮನೆಯಲ್ಲಿ ನಾಲ್ಕು ಜನ ಕಾರ್ಮಿಕರು ಸಿಲುಕಿಕೊಂಡಿದ್ದರು.
ಪೊಲೀಸ್ ಹಾಗೂ ಅಗ್ನಿಶಾಮಕ ಪಡೆಗಳ ಸಹಾಯದಿಂದ ಜಲಾವೃತಗೊಂಡ ಮನೆಯಲ್ಲಿ ಸಿಲುಕಿದ್ದ ಬೆಳಗಾವಿಯ ಬಸವರಾಜ್ ಭಂಡಾರಿ, ವಿಜಯಲಕ್ಷ್ಮಿ ಭಂಡಾರಿ, ರಮ್ಯಾ ಭಂಡಾರಿ, ಸೌಮ್ಯ ಭಂಡಾರಿ ಹಾಗೂ ಅವರ ಸಾಕುನಾಯಿ, ಬೆಕ್ಕುನ್ನು ರಕ್ಷಿಸಲಾಯಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ್, ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಮತ್ತು ತಹಶೀಲ್ದಾರ ಸುಧೀರ ಸಾವುಕಾರ ಸಮ್ಮುಖದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಈಜು ತಜ್ಞರೊಂದಿಗೆ ರಕ್ಷಣೆ ಮಾಡಿ ನೀರಿನಿಂದ ಹೊರ ತರಲಾಯಿತು.
ನಂತರ ಅವರ ಆರೋಗ್ಯ ತಪಾಸಣೆ ನಡೆಸಿ, ಆರೋಗ್ಯವಾಗಿದ್ದ ಮಾಹಿತಿ ಪಡೆದು ಅವರನ್ನು ಅವರ ಊರಿನತ್ತ ಕಳಿಸಲಾಯಿತು ಎಂದು ತಿಳಿಸಿದ್ದಾರೆ.
*ಹುಬ್ಬಳ್ಳಿ ತಾಲೂಕು ಜಾನುವಾರುಗಳ ರಕ್ಷಣೆ, 2 ಹಾನಿ:* ಹುಬ್ಬಳ್ಳಿ ತಾಲ್ಲೂಕು ಬ್ಯಾಹಟ್ಟಿ ಗ್ರಾಮದ ಹತ್ತಿರ ಇರುವ ನಿಗರಿಹಳ್ಳಕ್ಕೆ ಹಬ್ಬಳ್ಳಿ ನಗರ, ಉಣಕಲ್ ಮತ್ತು ನವಲೂರ ಕಡೆಯಿಂದ ಬಾರಿ ಪ್ರಮಾಣದ ಮಳೆ ನೀರು ಬಂದಿದ್ದರಿಂದ ಹಳ್ಳದಲ್ಲಿ ಹಾಕಲಾಗಿದ್ದ ಕುರಿ ಶೆಡ್‍ಗೆ ರಾತ್ರಿ 12 ಗಂಟೆಗೆ ಸುಮಾರಿಗೆ ಹಳ್ಳದ ನೀರು ಬಂದು ಶೆಡ್‍ನಲ್ಲಿರುವ ಅಂದಾಜು 100 ಕುರಿಗಳು 3 ಜನರು ಸಿಲುಕಿಕೊಂಡಿದ್ದರು.
ಹುಬ್ಬಳ್ಳಿ ತಹಶೀಲ್ದಾರ ಜೆ.ಬಿ.ಮಜ್ಜಗಿ ಹಾಗೂ ಡಿವಾಯ್‍ಎಸ್‍ಪಿ ವಿನೋಧ ಮುಕ್ತೆದಾರ ಅವರ ನೇತೃತ್ವದಲ್ಲಿ ಪೊಲೀಸ್ ಹಾಗೂ ಅಗ್ನಿಶಾಮಕ ತಂಡದವರು ಪರಿಹಾರ ಕ್ರಮಗಳನ್ನು ಕೈಗೊಂಡು ಶೆಡ್‍ನಲ್ಲಿ ಸಿಲುಕಿದ್ದ ಕುರಿಗಳ ಮಾಲೀಕರಾದ ಬ್ಯಾಹಟ್ಟಿ ಗ್ರಾಮದ ಹಜರೇಸಾಬ ಹುಸೇನಸಾಬ ನೂಲ್ವಿ ಮತ್ತು ರಾಯಪ್ಪ ರಾಮಪ್ಪ ಕಬ್ಬೇರ ಹಾಗೂ ಆಯಟ್ಟಿ ಗ್ರಾಮದ ಹನಮಂತಪ್ಪ ಕಲ್ಲಪ್ಪ  ಬೇವೂರ ಅವರನ್ನು ರಕ್ಷಿಸಲಾಯಿತ್ತು. ಮತ್ತು ಅಂದಾಜು  100 ಕುರಿಗಳನ್ನು  ಅಗ್ನಿ ಶಾಮಕ ಸಿಬ್ಬಂದಿಗಳಿಂದ ರಕ್ಷಣೆ ಮಾಡಲಾಗಿದೆ. ಇವುಗಳ ಪೈಕಿ ಎರಡು ಕುರಿಗಳು ಹಳ್ಳದಲ್ಲಿ ಮೃತಪಟ್ಟಿರುವ ಬಗ್ಗೆ ಪ್ರಾಥಮಿಕ ವರದಿಯಾಗಿದೆ.
ಹುಬ್ಬಳ್ಳಿ ತಾಲ್ಲೂಕು ಇಂಗಳಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಬೆಣ್ಣಿ ಹಳ್ಳಕ್ಕೆ ನೀರು ಬಂದು ನಡುಗಡ್ಡೆಯಲ್ಲಿ ಸಿಲುಕಿದ್ದ ಕುರಿಗಾರರಾದ ಇಂಗಳಳ್ಳಿ ಗ್ರಾಮ ನಿವಾಸಿಗಳಾದ ಹುಸೇನಸಾಬ ದುದುಸಾಬ ತಹಶೀಲ್ದಾರ, ಚನಬಸಪ್ಪ ಮಲ್ಲಪ್ಪ ಕುರಿ ಮತ್ತು ಮೌಲಾಸಾಬ ಪಕ್ರುಸಾಬ ನದಾಫ ಅವರನ್ನು ಪೊಲೀಸ್ ಹಾಗೂ ಅಗ್ನಿಶಾಮಕ ತಂಡಗಳು ರಕ್ಷಣೆ ಮಾಡಿದವು.
ಈ ಮೂವರಿಗೆ ಸೇರಿದ್ದ ಅಂದಾಜು 470 ಕುರಿ ಮತ್ತು ಆಡುಗಳನ್ನು ಅಗ್ನಿಶಾಮಕ ಇಲಾಖೆಯವರ ಸಹಾಯದಿಂದ ಬೋಟ್ ಮೂಲಕ ಹೊರಗಡೆ ತಗೆದು ರಕ್ಷಿಸಲಾಗಿದೆ. ಯಾವುದೇ ಪ್ರಾಣ ಹಾನಿಯಾಗಿರುವುದಿಲ್ಲ. ಮತ್ತು ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮ ಹತ್ತಿರದ ಬೆಣ್ಣಿಹಳ್ಳದಲ್ಲಿ ಸಿಲುಕಿದ ಮೊರಬ ಗ್ರಾಮದ ಮೂರು ಜನರನ್ನು ರಕ್ಷಣೆ ಮಾಡಲಾಗಿದ್ದು ಮತ್ತು 300 ಕುರಿಗಳನ್ನು ರಕ್ಷಿಸುವ ಕಾರ್ಯ ಪ್ರಗತಿಯಲ್ಲಿದೆ.
 ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಪೋಲೀಸ್ ವರಿಷ್ಚಾಧಿಕಾರಿ ಡಾ. ಗೋಪಾಲ ಬ್ಯಾಕೋಡ್, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ತಹಶೀಲ್ದಾರ ಜೆ.ಬಿ. ಮಜ್ಜಗಿ, ಹೆಚ್ಚುವರಿ ಎಸ್.ಪಿ. ನಾರಯಣ ಭರಮನಿ, ಸ್ಥಳೀಯ ಪೊಲೀಸ್ ಅಧಿಕಾರಿಗಳು, ಗ್ರಾಮೀಣ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಸಹಾಯಕ ಕೃಷಿ ನಿರ್ದೇಶಕರು, ಹುಬ್ಬಳ್ಳಿ ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಪಂಚಾಯತ್ ಪಿಡಿಓ ಮತ್ತು ಗ್ರಾಮ ಪಂಚಾಯತ ಸದಸ್ಯರು ಹಾಜರಿದ್ದರು.
WhatsApp Group Join Now
Telegram Group Join Now
Share This Article