ಮುದ್ದೇಬಿಹಾಳ: ರಾಜ್ಯದಲ್ಲಿ ಕಳಪೆ ಬೀಜಗಳ ಪೂರೈಕೆ ಆತಂಕ ಹೆಚ್ಚಾಗಿದೆ. ರಾಜ್ಯದ ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಪೂರೈಸುವ ಕುರಿತು ಸರ್ಕಾರ ಕೃಷಿ ಇಲಾಖೆ ಮುಖಾಂತರ ಅಫಿಡವಿಟ್ (ಪ್ರಮಾಣಪತ್ರ) ಕೊಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ, ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಪಿ.ರಾಜೀವ ಆಗ್ರಹಿಸಿದರು.
ನಡಹಳ್ಳಿ ಫಾರ್ಮಹೌಸ್ನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರವು ಗುಣಮಟ್ಟದ, ಸಂಸ್ಕರಿಸಿದ ಬೀಜ, ಗೊಬ್ಬರ ಪೂರೈಸುವಲ್ಲಿ ವಿಫಲವಾಗಿದೆ. ಬೀಜ ಸಂಸ್ಕರಣಾ ವಿಧಾನಗಳನ್ನು ಗಾಳಿಗೆ ತೂರುತ್ತಿದ್ದರೂ, ಕಳಪೆ ಬೀಜ ಪೂರೈಕೆಯಾಗುತ್ತಿದ್ದರೂ ತಡೆಯಲು ಯಾವುದೇ ಕ್ರಮ ಕೈಕೊಳ್ಳುತ್ತಿಲ್ಲ. ಕಳೆದ ವರ್ಷ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿಯವರು ಕಳಪೆ ಬೀಜಗಳ ಪೂರೈಕೆ ತಡೆಯುವಂತೆ, ಪೂರೈಸಿದವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ದೊಡ್ಡಮಟ್ಟದ ಹೋರಾಟ ನಡೆಸಿದ್ದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ರೈತರಿಂದ ಖರೀದಿಸಿದ್ದನ್ನೆ ಬಿತ್ತನೆ ಬೀಜ ಎಂದು ಮಾರಾಟ ಮಾಡುತ್ತ ರೈತರ ಶೋಷಣೆಗೆ ಸರ್ಕಾರ ಮುಂದಾಗಿರುವುದು ದುರಂತ ಎಂದರು.
ಸರ್ಕಾರ ಬೀಜ, ಗೊಬ್ಬರದ ದರ ಹೆಚ್ಚಿಸಿದೆ. ಬಿತ್ತನೆಯಿಂದ ಹಿಡಿದು ಕಟಾವು, ವಿತರಣೆಯವರೆಗೂ ನಡೆಯುವ ಪ್ರೊಸೆಸ್ ಕೃಷಿ ಇಲಾಖೆ ಗಮನಿಸುತ್ತಿಲ್ಲ. ಡ್ರಿಪ್, ಸ್ಪಿಂಕ್ಲರ್ ಇರಿಗೇಷನ್ಗೆ ಕೇಂದ್ರದಿಂದ ಸಂಪೂರ್ಣ ಅನುದಾನ ಬಂದಿದ್ದರೂ ರಾಜ್ಯ ಸರ್ಕಾರ ಇಲ್ಲೀವರೆಗೂ ತನ್ನ ಪಾಲು ಬಿಡುಗಡೆ ಮಾಡಿಲ್ಲ. ಇದರಿಂದಾಗಿ ಹಿಂದೆ ಇವುಗಳನ್ನು ಪೂರೈಸಿದ್ದ ಗುತ್ತಿಗೆದಾರರು ಈ ಬಾರಿ ಮುಂದೆ ಬರುತ್ತಿಲ್ಲ. ಎಲ್ಲರಿಗೂ ಡ್ರಿಪ್, ಸ್ಪಿಂಕ್ಲರ್ ಇರಿಗೇಷನ್ಗೆ ಆದ್ಯತೆ ಕೊಡುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿದೆ. ಕೇಂದ್ರ ಸರ್ಕಾರ ಭತ್ತ, ರಾಗಿ, ಜೋಳ, ತೊಗರಿ ಸೇರಿ ಬಹಳಷ್ಟು ಬೆಳೆಗಳ ಎಂಎಸ್ಪಿ ಹೆಚ್ಚಿಸಿದ್ದರೂ ರಾಜ್ಯ ಸರ್ಕಾರ ಅಗತ್ಯ ಪ್ರಮಾಣದಲ್ಲಿ ಖರೀದಿ ಕೇಂದ್ರ ತೆರೆಯದೆ ಬೆಳೆಗಾರರಿಗೆ ಅನ್ಯಾಯ ಮಾಡುತ್ತಿದೆ ಎಂದರು.
ತಾಂಡಾ ಕ್ರೆಡಿಟ್ ಹಾಸ್ಯಾಸ್ಪದ: ಹಿಂದಿನ ಬಿಜೆಪಿ ಸರ್ಕಾರವು ಮುಖ್ಯಮಂತ್ರಿಯಾಗಿದ್ದ ಎಸ್.ಆರ್.ಬೊಮ್ಮಾಯಿ, ಕಂದಾಯ ಸಚಿವರಾಗಿದ್ದ ಆರ್.ಅಶೋಕ ಅವರ ವಿಶೇಷ ಕಾಳಜಿ, ಕೇಂದ್ರ ಸರ್ಕಾರದ ಪ್ರಧಾನಿ ಮೋದಿ ಅವರ ವಿಶೇಷ ಆಸಕ್ತಿಯ ಸ್ವಾಮಿತ್ವ ಯೋಜನೆ ಪರಿಣಾಮ ಭೂ ಕಂದಾಯ ಕಾಯ್ದೆಯಯಡಿ ರಾಜ್ಯ ಸರ್ಕಾರದ ೨ಇ, ಜಿಲ್ಲಾಧಿಕಾರಿಯವರ ೩ಸಿ ಅಧಿಕಾರಕ್ಕೆ ತಿದ್ದುಪಡಿ ತಂದು ರಾಜ್ಯದ ೩೩೦೦ಕ್ಕೂ ಹೆಚ್ಚು ಲಂಬಾಣಿ ತಾಂಡಾ, ಹಾಡಿ, ಹಟ್ಟಿ, ಕ್ಯಾಂಪ್ಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ದಶಕಗಳ ಬೇಡಿಕೆ ಈಡೇರಿಸಲಾಗಿತ್ತು. ಆಗ ನಾನು ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷನಾಗಿದ್ದೆ. ನಮ್ಮ ಅವಧಿಯಲ್ಲಿ ೧.೭೫ ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ಕೊಡಲಾಗಿತ್ತು. ಬಾಕಿ ಉಳಿದವರಿಗೆ ೧೫-೨೦ ದಿನಗಳಲ್ಲಿ ಹಕ್ಕುಪತ್ರ ಕೊಡಬೇಕಿದ್ದ ಈ ಸರ್ಕಾರ ಎರಡು ವರ್ಷ ತೆಗೆದುಕೊಂಡು ನಾವು ಹಕ್ಕುಪತ್ರ ಕೊಟ್ಟಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಸ್ವಾತಂತ್ರ್ಯ ಬಂದಾಗಿನಿಂದ ೬೫ ವರ್ಷಗಳವರೆಗೆ ಆಡಳಿತ ನಡೆಸಿದ್ದ ಕಾಂಗ್ರೆಸ್ನಿಂದ ಇದು ಸಾಧ್ಯವಾಗಿರಲಿಲ್ಲ. ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸಿದ ಕ್ರೆಡಿಟ್ ತೆಗೆದುಕೊಳ್ಳುವ ಅರ್ಹತೆ ಈ ಸರ್ಕಾರಕ್ಕಿಲ್ಲ ಎಂದರು.
ಸರ್ಕಾರದ ವೈಫಲ್ಯಕ್ಕೆ ಟೀಕೆ: ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯದ ಪಾಲನ್ನು ನಿಗದಿತ ಸಮಯದಲ್ಲಿ ಕೊಡುತ್ತಿಲ್ಲ. ಸಿದ್ದರಾಮಯ್ಯನವರು ಎರಡನೇ ಅವಧಿಗೆ ಸಿಎಂ ಆದರೂ ಆಲಮಟ್ಟಿ ಯೋಜನೆಗೆ ಪ್ರತಿ ವರ್ಷ ೧೦ಸಾವಿರದಂತೆ ೫ ವರ್ಷಗಳಲ್ಲಿ ೫೦ಸಾವಿರ ಕೋಟಿ ಅನುದಾನ ಕೊಡುವ ವಾಗ್ದಾನ ಸುಳ್ಳಾಗಿದೆ. ಅಬಕಾರಿ ಇಲಾಖೆಗೆ ವಾರ್ಷಿಕ ೪೫೦೦೦ ಕೋಟಿ ಸಂಗ್ರಹಿಸುವ ಟಾರ್ಗೆಟ್ ನೀಡಿ ಕಲಬೆರಕೆ ಮದ್ಯದ ಹಾವಳಿಯಿಂದ ಜನಸಾಮಾನ್ಯರ ಆರೋಗ್ಯ ಹಾಳಾಗಲು ಕಾರಣವಾಗುತ್ತಿದೆ. ಹಾಲು ಉತ್ಪಾದಕರಿಗೆ ಕೊಡಬೇಕಿದ್ದ ೭೦೦ ಕೋಟಿ ರೂ ಪ್ರೋತ್ಸಾಹಧನ ಬಾಕಿ ಉಳಿಸಿಕೊಂಡಿದೆ. ಅಕ್ರಮ ಸಕ್ರಮದಡಿ ೩೦೦೦೦ಕ್ಕೆ ಸಿಗುತ್ತಿದ್ದ ಟಿಸಿ ಈಗ ೩ ಲಕ್ಷಕ್ಕೆ ಸಿಗುವ ಪರಿಸ್ಥಿತಿ ಬಂದಿದೆ. ರೈತ ವಿದ್ಯಾನಿಧಿ ನಿಂತು ಹೋಗಿದೆ. ಜಲಾಶಯಗಳ ಕ್ರಸ್ಟಗೇಟ್ ವೀಕ್ ಆಗಿದ್ದು ಬದಲಾಯಿಸಲು ಮುಂದಾಗಿಲ್ಲ. ಸಾರಿಗೆ ಇಲಾಖೆಗೆ ೭೦೦೦ ಕೋಟಿ ಬಾಕಿ ಕೊಟ್ಟಿಲ್ಲ. ವಿದ್ಯುತ್ ಸರಬರಾಜು ಕಂಪನಿಗಳು ೪೫೦೦೦ ಕೋಟಿ ರೂ.ನಷ್ಟದಲ್ಲಿವೆ. ಮೂರು ಬಜೆಟ್ ಮಂಡಿಸಿದರೂ ರಾಜ್ಯವನ್ನು ಗುಡಿಸಲು ಮುಕ್ತ ಮಾಡಲು ಅನುದಾನ ಇಟ್ಟಿಲ್ಲ. ಬಸವ ವಸತಿ, ಅಂಬೇಡ್ಕರ್ ಆವಾಸ್ ಸೇರಿ ವಸತಿ ಯೋಜನೆಯಡಿ ಒಂದು ಮನೆಯನ್ನೂ ಕೊಟ್ಟಿಲ್ಲ. ತುಷ್ಟೀಕರಣ ರಾಜಕಾರಣ ಹೆಚ್ಚಾಗಿದ್ದು ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿ ಪೊಲೀಸರನ್ನೇ ಟಾರ್ಗೆಟ್ ಮಾಡಿ ರಕ್ಷಣಾ ವ್ಯವಸ್ಥೆ ವಿಫಲಗೊಂಡರೂ ತುಷ್ಟೀಕರಣದ ಪರಾಕಾಷ್ಟೆ ಹೆಚ್ಚಾಗಿದೆ. ರಾಜ್ಯದ ಜನ ಇದನ್ನು ಒಪ್ಪುವುದಿಲ್ಲ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ಅಶೋಕ ರಾಠೋಡ, ಗಿರೀಶಗೌಡ ಪಾಟೀಲ ಹಿರೇಮುರಾಳ, ಶ್ರೀಶೈಲ ದೊಡಮನಿ, ಪ್ರೇಮಸಿಂಗ್ ಚವ್ಹಾಣ, ಬಸವರಾಜ ಸರೂರ, ಸಂಜು ಬಾಗೇವಾಡಿ, ವಿಜಯಕುಮಾರ ಬಡಿಗೇರ, ನಾಗೇಶ ಕವಡಿಮಟ್ಟಿ ಇನ್ನಿತರರು ಇದ್ದರು.
ಎ.ಎಸ್.ಪಾಟೀಲ ನಡಹಳ್ಳಿಯವರು ಮಾತನಾಡಿ, ಹೊಸ ಕಂದಾಯ ಗ್ರಾಮಗಳ ಅಭಿವೃಧ್ದಿಗೆ ಎರಡು ಬಜೆಟ್ನಲ್ಲೂ ನಯಾಪೈಸೆ ಅಭಿವೃದ್ದಿ ಅನುದಾನ, ಸೌಲಭ್ಯ ಕೊಟ್ಟಿಲ್ಲ. ಹೊಸ ಕಂದಾಯ ಗ್ರಾಮಗಳ ಖಾಸಗಿ ಜಮೀನಿನಲ್ಲಿ ಮನೆ ಕಟ್ಟಿಕೊಂಡಿರುವ ಜಮೀನುಗಳಿಗೆ ಪರಿಹಾರ, ಮನೆಗಳಿಗೆ ಹಕ್ಕುಪತ್ರ ಕೊಟ್ಟಿಲ್ಲ. ರೈತರ ತೊಗರಿಯನ್ನೇ ಖರೀದಿ ಮಾಡಿ ಏಜಂಟರ ಮೂಲಕ ಬೀಜ ಎಂದು ಮಾರುತ್ತಿದ್ದರೂ ತಡೆಯುತ್ತಿಲ್ಲ. ಕಳಪೆ ಬೀಜ ರೈತರ ಉತ್ಪಾದನೆಗೆ ಬಹಳ ದೊಡ್ಡ ಮಟ್ಟದಲ್ಲಿ ಹೊಡೆತ ಬೀಳುತ್ತಿದ್ದರೂ ಗಂಭೀರವಾಗಿ ಪರಿಗಣಿಸಿಲ್ಲ. ಅಗತ್ಯ ಪ್ರಮಾಣದಲ್ಲಿ ತೊಗರಿ ಖರೀದಿ ಕೆಲವು ಕಡೆ ಮಾತ್ರ ಆಗಿದೆ. ಬಹಳಷ್ಟು ಕಡೆ ಆಗಿಲ್ಲ. ಕೇಂದ್ರದ ಎಂಎಸ್ಪಿ ದರವನ್ನೂ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ತಾಂಡಾಗಳು ಕಂದಾಯ ಗ್ರಾಮಗಳಾಗಲು ಪಿ.ರಾಜೀವ ಕಾರಣ. ವಿಧಾನಸಭೆಯಲ್ಲಿ ಗಟ್ಟಿದನಿಯಲ್ಲಿ ಮಾತನಾಡಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದನ್ನು ಜಾರಿಗೊಳಿಸಲು ಹೆಚ್ಚಿನ ಪ್ರಯತ್ನ ನಡೆಸಿದ್ದರು ಎಂದರು.
ಈ ಸರ್ಕಾರ ಮಕ್ಕಳ ಕಿಡ್ನಿ, ಅಂಗಾಂಗ ಮಾರಿಯಾದರೂ ತುಪ್ಪ ತಿನ್ನು ಎನ್ನುವ ಮಟ್ಟಕ್ಕೆ ನಡೀತಿದೆ. ಎಲ್ಲಕ್ಕೂ ರೇಟ್ ಹೆಚ್ಚಿಸಿ ಗ್ಯಾರಂಟಿಗೆ ಕೊಡುತ್ತಿದೆ. ಕಳಪೆ ಗುಣಮಟ್ಟದ ಬೀಜ ಕುರಿತು ನಡಹಳ್ಳಿಯವರು ದೊಡ್ಡ ಮಟ್ಟದ ಹೋರಾಟ ಮಾಡಿದ್ದರು. ಈ ಸರ್ಕಾರದ ಆಡಳಿತ ಗಮನಿಸಿದರೆ ಬಹಳ ದೊಡ್ಡ ಪೆಟ್ಟು ತಿಂದವರು ರೈತರು, ದಲಿತರು. ಜನಸಾಮಾನ್ಯರ ಜೀವನದ ಜೊತೆ ಸರ್ಕಾರ ಚಲ್ಲಾಟವಾಡುತ್ತಿದೆ.
-ಪಿ.ರಾಜೀವ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ.
ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಕಳಪೆ ಬೀಜ ಪೂರೈಕೆ ತಡೆಯುವಂತೆ ಕೋರಿದ್ದೇನೆ. ಹಿಂದೆ ತೊಗರಿ ಏನಾಗಿತ್ತು ಅನ್ನೋದು ಎಲ್ಲರಿಗೂ ಗೊತ್ತಿದೆ. ಈಗಾಗಲೇ ೧೧೦ ರೈತರು ಲೋಕಾಯುಕ್ತದಲ್ಲಿ ಕಳಪೆ ಬೀಜ ಕುರಿತು ದೂರು ದಾಖಲಿಸಿದ್ದಾರೆ. ತೊಗರಿ ಇನ್ನಿತರ ಬೀಜಗಳ ಬೀಜೋತ್ಪಾದನೆಯ ನಿಯಮ ಪಾಲಿಸದೆ ಮಾರಾಟ ಮಾಡುತ್ತಿದ್ದಾರೆ. ಬೀಜ ತಯಾರಿಸುವ ಪ್ರಕ್ರಿಯೆಯ ನಿಗಾ ವಹಿಸುವಲ್ಲಿ ಸರ್ಕಾರ, ಕೃಷಿ ಇಲಾಖೆ ವಿಫಲವಾಗಿದೆ. ಇದು ಕಳಪೆ ಬೀಜ ಯಥೇಚ್ಚ ಮಾರಾಟಕ್ಕೆ ದಾರಿ ಮಾಡಿಕೊಟ್ಟಿದೆ.
-ಎ.ಎಸ್.ಪಾಟೀಲ ನಡಹಳ್ಳಿ, ರಾಜ್ಯಾಧ್ಯಕ್ಷರು, ಬಿಜೆಪಿ ರೈತ ಮೋರ್ಚಾ.