ಬಳ್ಳಾರಿ,ಮೇ 23 2024-25 ನೇ ಸಾಲಿನ ಮುಂಗಾರು ಋತುವಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜೋಳ ಖರೀದಿ ಪ್ರಕ್ರಿಯೆ ಮಾರ್ಪಾಡು ಮಾಡಲಾಗಿದೆ.ಸರ್ಕಾರದ ಆದೇಶದಂತೆ ರಾಜ್ಯದಲ್ಲಿ 1 ಲಕ್ಷ ಮೆಟ್ರಿಕ್ ಟನ್ ಜೋಳ ಖರೀದಿಸುವ ಬದಲಾಗಿ 1.25 ಲಕ್ಷ ಮೆಟ್ರಿಕ್ ಟನ್ ಜೋಳ ಖರೀದಿಸುವುದಾಗಿ ಆದೇಶಿಸಿದೆ ಹಾಗೂ ಬಿಳಿಜೋಳ ಮಾರ್ಗಸೂಚಿಯಂತೆ ಪ್ರತಿ ರೈತರಿಂದ ಪ್ರತಿ ಎಕರೆಗೆ 20 ಕ್ವಿಂಟಾಲ್ ನಂತೆ ಗರಿಷ್ಟ 150 ಕ್ವಿಂಟಾಲ್ ಬಿಳಿಜೋಳವನ್ನು ಖರೀದಿಸುವ ಬದಲಾಗಿ, ಪ್ರತಿ ರೈತರಿಂದ ಪ್ರತಿ ಎಕರೆಗೆ 10 ಕ್ವಿಂಟಾಲ್ ನಂತೆ ಗರಿಷ್ಠ 150 ಕ್ವಿಂಟಾಲ್ ಬಿಳಿಜೋಳ ಖರೀದಿಸಲಾಗುವುದು ಎಂದು ಮಾರ್ಪಾಡಿಸಿ ಆದೇಶಿಸಲಾಗಿದೆ.
ಅದರಂತೆ ಎನ್ಐಸಿ (NIC) ತಂತ್ರಾಂಶದಲ್ಲಿ ಮಾರ್ಪಾಡು ಆದ ಕೂಡಲೇ ಖರೀದಿ ಪ್ರಕ್ರಿಯೆ ಆರಂಭಿಸಲಾಗುವುದು. ಹಾಗಾಗಿ ಜಿಲ್ಲೆಯಲ್ಲಿ ಈಗಾಗಲೇ ನೋಂದಣಿ ಮಾಡಿಕೊಂಡ ರೈತರು ಕೂಡಲೇ ನೋಂದಾಯಿತ ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ಜೋಳ ಮಾರಾಟ ಮಾಡಿ ಶೀಘ್ರವಾಗಿ ಗ್ರೇನ್ ವೋಚರ್ ಪಡೆದುಕೊಳ್ಳಬೇಕು.
ಮುಂಗಾರು ಜೋಳವನ್ನು ನೋಂದಣಿ ಮಾಡಿದ ರೈತರು ಶೀಘ್ರವಾಗಿ ಜೋಳ ಮಾರಾಟ ಮಾಡುವುದು ಅಗತ್ಯವಾಗಿದ್ದು, ರೈತರು ಮಾರಾಟ ಮಾಡುವ ಜೋಳವನ್ನು ಜೋಳ ಉಪಯೋಗಿಸುವ ಜಿಲ್ಲೆಗಳಿಗೆ ಪಡಿತರ ವಿತರಣೆ ಹಂಚಿಕೆಗೆ ನೀಡಲಾಗುವುದು. ಈ ನಿಟ್ಟಿನಲ್ಲಿ ಶೀಘ್ರವಾಗಿ ನೋಂದಾಯಿತ ರೈತರು ಜೋಳವನ್ನು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡುವ ಮೂಲಕ ಸರ್ಕಾರದ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು.
ಬೆಂಬಲ ಬೆಲೆ ಯೋಜನೆ ಬಗ್ಗೆ ರೈತರಿಗೆ ಯಾವುದೇ ಸಮಸ್ಯೆಗಳಿದ್ದರೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿಯಮಿತದ ಶಾಖಾ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಜಿಲ್ಲಾ ವ್ಯವಸ್ಥಾಪಕರು ಹಾಗೂ ಆಯಾ ತಾಲ್ಲೂಕಿನ ತಹಸಿಲ್ದಾರ್, ಕೃಷಿ ಅಧಿಕಾರಿ, ಎ.ಪಿ.ಎಂ.ಸಿ ಕಾರ್ಯದರ್ಶಿ ಅಥವಾ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬೇಕು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಾದ ಸಕೀನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.