ಧಾರವಾಡ: ಧಾರವಾಡದ ಎಸ್. ಡಿ. ಎಮ್. ಇಂಜಿನಿಯರಿಂಗ್ ಕಾಲೇಜು ಎರಡು ದಿನಗಳ ರಾಷ್ಟೀಯಮಟ್ಟದ ಟೆಕ್ನೋ-ಕಲ್ಚರಲ್ ಫೆಸ್ಟಿವಲ್ ಇನ್ಸಿಗ್ನಿಯಾ -2025 ಮೇ 16 ಮತ್ತು 17 ರಂದು ಆಯೋಜಿಸುತ್ತಿದೆ. ಇನ್ಸಿಗ್ನಿಯಾದ ಈ 14 ನೇ ಆವೃತ್ತಿಯು 60 ಕ್ಕೂ ಹೆಚ್ಚು ವೈವಿಧ್ಯಮಯ ಕಾರ್ಯಕ್ರಮಗಳನ್ನು ಒಳಗೊಂಡಿದ್ದು, ದೇಶದೆಲ್ಲೆಡೆಯಿಂದ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಈ ತಾಂತ್ರಿಕ-ಸಾಂಸ್ಕೃತಿಕ ಉತ್ಸವದಲ್ಲಿ ಇಂಜಿನೀಯರಿಂಗ್ ಮತ್ತು ಬೇಸಿಕ್ ಸೈನ್ಸ್ ವಿಭಾಗಗಳು ನಡೆಸುತ್ತಿರುವ ಪೇಪರ್ ಪ್ರೆಸೆಂಟೇಷನ್ ಮತ್ತು ರಸಪ್ರಶ್ನೆಯಂತಹ ಇನ್ನೂ ಅನೇಕ ತಾಂತ್ರಿಕ ಸ್ಫರ್ಧೆಗಳಿದ್ದು, ಬ್ಯುಸಿನೆಸ್ ಮ್ಯಾನೇಜ್ಮೆಂಟ್ ವಿಭಾಗದ ನೈಜ ಜಗತ್ತಿನ ಬಿಸಿನೆಸ್ ಸಂಬಂಧಿತ ಸ್ಫರ್ಧೆಗಳನ್ನೂ ಕಾಣಬಹುದು. ಇದರ ಜೊತೆಗೆ ಪೂರ್ವ ಮತ್ತು ಪಾಶ್ಚಾತ್ಯ ನೃತ್ಯ ಮತ್ತು ಸಂಗೀತ, ನಾಟಕಗಳು, ಸಾಹಿತ್ಯಿಕ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಗುತ್ತವೆ.
ಇನ್ಸಿಗ್ನಿಯಾ-25 ರ ಉದ್ಘಾಟನಾ ಸಮಾರಂಭವು ಮೇ 16, 2025 ರಂದು ನಡೆಯಲಿದ್ದು, ಎಸ್. ಡಿ. ಎಮ್. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀ ಜೀವಂಧರ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ವಿಶೇಷ ಆಕರ್ಷಣೆ ಮೇ 17 ರಂದು ಕಾಲೇಜಿನ ಆಟದ ಮೈದಾನದಲ್ಲಿ ನಡೆಯುವ ಖ್ಯಾತ ಬಾಲಿವುಡ್ ಹಿನ್ನೆಲೆ ಗಾಯಕ ಶ್ರೀ ಶಾಶ್ವತ್ ಸಿಂಗ್ ಅವರ ಲೈವ್-ಇನ್-ಕನ್ಸರ್ಟ್. ಇನ್ಸಿಗ್ನಿಯಾ -25ರ ವಿಶೇಷತೆಗಳಲ್ಲಿ ಆಟೋ ಎಕ್ಸ್ ಪೋ ಮತ್ತು ಡ್ರೋನ್ ಸ್ಪರ್ಧೆಗಳು ಸೇರಿವೆ. ಧಾರವಾಡದ ಎಸ್. ಡಿ. ಎಮ್. ವೈದ್ಯಕೀಯ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ, ತನ್ಮೂಲಕ ಸಾಮಾಜಿಕ ಕಳಕಳಿಯನ್ನೂ ಜಾಗೃತಗೊಳಿಸಲಾಗುತ್ತದೆ.
ಈ ತಾಂತ್ರಿಕ ಸಾಂಸ್ಕೃತಿಕ ಉತ್ಸದ ಆಯೋಜನೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ರಮೇಶ್ ಎಲ್.ಚಕ್ರಸಾಲಿ, ಇನ್ಸಿಗ್ನಿಯಾದ ಮುಖ್ಯ ಸಂಚಾಲಕ ಪ್ರೊ.ಸತೀಶ ಕೆ.ಎ., ಡಾ. ಕೇಶವ ಜೋಷಿ, ಡಾ.ಜಗದೀಶ ಪೂಜಾರಿ, ಡಾ.ಸತೀಶ ಭೈರಣ್ಣನವರ್, ಡಾ.ಬಸವರಾಜ ಗುಡದಪ್ಪನವರ್, ಪ್ರೊ.ವಿ.ಆರ್.ಶಿವಣ್ಣವರ್, ಪ್ರೊ.ವಿ.ಪಿ.ಪಂಢರೀಕರ್ ಹಾಗೂ ವಿದ್ಯಾರ್ಥಿ ಸ್ವಯಂಸೇವಕರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಎಸ್. ಡಿ. ಎಮ್. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀ ಜೀವಂಧರ ಕುಮಾರ್, ಕಾಲೇಜಿನ ಪ್ರಾಂಶುಪಾಲ ಡಾ.ರಮೇಶ ಎಲ್. ಚಕ್ರಸಾಲಿ, ಸಂಚಾಲಕ ಪ್ರೊ.ಸತೀಶ್ ಕೆ.ಎ., ಪ್ರೊ. ಸುನೀಲ್ ಹೊನ್ನುಂಗಾರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು