ಬೆಂಗಳೂರು, ಮೇ 6: ಬಿರು ಬೇಸಿಗೆಯಲ್ಲಿ ದಣಿವು ನೀಗಿಸಲು ಜನ ಶರಬತ್ತು ಕುಡಿಯುವುದು ಸಾಮಾನ್ಯ. ಜಾಗೆಯೇ ಸಿಹಿ ತಿಂಡಿ ಪ್ರಿಯರು ಬಿಸಿ ಬಿಸಿ ಜಿಲೇಬಿ ತಿನ್ನಲು ಹಾತೊರೆಯುತ್ತಾರೆ. ಆದರೆ ಈಗ ಶರಬತ್ತು ಹಾಗೂ ಜಿಲೇಬಿ ಪ್ರಿಯರಿಗೆ ಆಘಾತ ಎದುರಾಗುವಂಥ ಆರೋಪಗಳು ಕೇಳಿಬಂದಿವೆ. ಬಾಯಲ್ಲಿ ನೀರೂರಿಸುವ ಜಿಲೇಬಿ ಆರೋಗ್ಯಕ್ಕೆ ಎಷ್ಟು ಸುರಕ್ಷಿತ ಎಂಬ ಚರ್ಚೆ ಶುರುವಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ಜಿಲೇಬಿಗೆ ಕೃತಕ ಬಣ್ಣ ಬಳಸುತ್ತಿರುವುದು ಆಹಾರ ಗುಣಮಟ್ಟ ಇಲಾಖೆಯ ಗಮನಕ್ಕೆ ಬಂದಿದೆ.
ಜಿಲೇಬಿ ಪ್ರಿಯರಿಗೆ ಆಘಾತ; ಕರ್ನಾಟಕದ ವಿವಿಧೆಡೆ ಜಿಲೇಬಿಗೆ ಕೃತಕ ಬಣ್ಣ

ಮತ್ತೊಂದೆಡೆ, ಪ್ಯಾಕೆಟ್ಗಳಲ್ಲಿ, ಬಾಟಲ್ಗಗಳಲ್ಲಿ ಶರಬತ್ತು ಮಾರಾಟವೂ ಜೋರಾಗಿದೆ. ಆದರೆ, ಈ ಶರಬತ್ತು ತಯಾರಿಸಲು ಕಲುಷಿತ ನೀರಿನ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಸಕ್ಕರೆ ಮಿಶ್ರಿತ ನೀರನ್ನು ಮುಚ್ಚಿದ ಡಬ್ಬಿಯಲ್ಲಿ ಇಡುವುದರಿಂದ ನೀರು ಕಲುಷಿತವಾಗುತ್ತದೆ. ಹೀಗಾಗಿ ಜಿಲೇಬಿ ಮತ್ತು ಶರಬತ್ ಗುಣಮಟ್ಟ ತಪಾಸಣೆಗೆ ವಿಶೇಷ ಕಾರ್ಯಾಚರಣೆ ನಡೆಸಲು ಆಹಾರ ಇಲಾಖೆ ಮುಂದಾಗಿದೆ. ಮುಂದಿನ 3 ದಿನಗಳಲ್ಲಿ ಪ್ರತಿ ಜಿಲ್ಲೆಗಳಲ್ಲಿ ತಲಾ 5 ಮಾದರಿ ಸಂಗ್ರಹ ಮಾಡಲಾಗುತ್ತದೆ. ಇಂಥಾ ತಿನಿಸುಗಳನ್ನು ಸೇವಿಸುವ ಮುನ್ನ ಎಚ್ಚರ ಅಗತ್ಯ ಎಂದು ಕೆಸಿ ಜನರಲ್ ಆಸ್ಪತ್ರೆ ಆಹಾರ ತಜ್ಞ ಕೀರ್ತಿ ಹಿರಿಸಾವೆ ಕೂಡ ಎಚ್ಚರಿಕೆ ನೀಡಿದ್ದಾರೆ.