ನ್ಯೂಯಾರ್ಕ್, ಏಪ್ರಿಲ್ 29: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿಯ ನಂತರ, ಪಾಕಿಸ್ತಾನ ಮತ್ತು ಭಯೋತ್ಪಾದನೆಯನ್ನು ಬೆಂಬಲಿಸುವ ಅದರ ನೀತಿಗಳ ಬಗ್ಗೆ ಮತ್ತೆ ಪ್ರಶ್ನೆಗಳು ಎದ್ದಿವೆ. ವಿಶ್ವಸಂಸ್ಥೆಯಲ್ಲಿ ಭಾರತ ಪಾಕಿಸ್ತಾನದ ಮುಖವಾಡವನ್ನು ಕಳಚಿದೆ. ಇದು ಭಯೋತ್ಪಾದಕರಿಗೆ ಹಣಕಾಸು ಒದಗಿಸುವ ಒಂದು ರಕ್ಕಸ ದೇಶ ಎಂದು ಪಾಕಿಸ್ತಾನವನ್ನು ಕರೆದಿದೆ.ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿ ಯೋಜ್ನಾ ಪಟೇಲ್ ಮಾತನಾಡಿ, ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಸಂದರ್ಶನದಲ್ಲಿ ಭಯೋತ್ಪಾದನೆಗೆ ಬೆಂಬಲ ಹಾಗೂ ಹಣಕಾಸು ಸಹಾಯ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಅದನ್ನು ಇಡೀ ಜಗತ್ತೇ ನೋಡಿದೆ.
ಖ್ವಾಜಾ ತಪ್ಪೊಪ್ಪಿಗೆಯಿಂದ ಯಾರಿಗೂ ಆಶ್ಚರ್ಯವಾಗಿಲ್ಲ, ಏಕೆಂದರೆ ಪಾಕಿಸ್ತಾನವು ಜಾಗತಿಕ ಭಯೋತ್ಪಾದನೆಯನ್ನು ಉತ್ತೇಜಿಸುವ ರಕ್ಕಸ ರಾಷ್ಟ್ರವಾಗಿದೆ ಎಂದು ಹೇಳಿದರು. 2008 ರ ಮುಂಬೈ ದಾಳಿಯ ನಂತರ ಪಹಲ್ಗಾಮ್ ಭಯೋತ್ಪಾದಕ ದಾಳಿಯು ಅತಿ ಹೆಚ್ಚು ಸಾವುಗಳಿಗೆ ಕಾರಣವಾಗಿದೆ ಎಂದು ಪಟೇಲ್ ಹೇಳಿದರು.
ದಶಕಗಳಿಂದ ಗಡಿಯಾಚೆಗಿನ ಭಯೋತ್ಪಾದನೆಯ ಬಲಿಪಶುವಾಗಿರುವ ಭಾರತ, ಇಂತಹ ದಾಳಿಗಳು ಬೀರುವ ಪರಿಣಾಮವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದೆ. ಪಹಲ್ಗಾಮ್ ದಾಳಿಯ ನಂತರ ವಿಶ್ವದಾದ್ಯಂತದ ದೇಶಗಳು ಮತ್ತು ಅವುಗಳ ನಾಯಕರಿಂದ ದೊರೆತ ಬೆಂಬಲವನ್ನು ಭಾರತವು ಪೂರ್ಣ ಹೃದಯದಿಂದ ಶ್ಲಾಘಿಸುತ್ತದೆ ಎಂದು ಅವರು ಹೇಳಿದರು.
ಭಯೋತ್ಪಾದನೆ ನಿಗ್ರಹದ ಕುರಿತಾದ ವಿಶ್ವಸಂಸ್ಥೆಯ ಸಭೆಯನ್ನುದ್ದೇಶಿಸಿ ಮಾತನಾಡಿದ ಯೋಜ್ನಾ ಪಟೇಲ್, ಭಾರತದ ವಿರುದ್ಧ ಅಸಂಬದ್ಧ ಆರೋಪಗಳನ್ನು ಮಾಡಲು ಮತ್ತು ಪ್ರಚಾರವನ್ನು ಹರಡಲು ಅಂತಾರಾಷ್ಟ್ರೀಯ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಪಾಕಿಸ್ತಾನವನ್ನು ಖಂಡಿಸಿದರು.
ಖ್ವಾಜಾ ಆಸಿಫ್ ಹೇಳಿದ್ದೇನು? ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಇತ್ತೀಚೆಗೆ ಸ್ಕೈ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ, ಭಯೋತ್ಪಾದನೆಯನ್ನು ಬೆಂಬಲಿಸುವ ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸುವ ದೀರ್ಘ ಇತಿಹಾಸವನ್ನು ಹೊಂದಿದ್ದಾಗಿ ಒಪ್ಪಿಕೊಂಡರು.ನಾವು 30 ವರ್ಷಗಳಿಂದ ಅಮೆರಿಕಕ್ಕಾಗಿ ಈ ಕೊಳಕು ಕೆಲಸವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.