ರಾಯಚೂರು, ಏಪ್ರಿಲ್ 18: ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಗೋಡೆಗೆ ಗೂಡ್ಸ್ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಅಮರಾಪುರ ಬಳಿ ನಡೆದಿದೆ. ಅಪಘಾತದಲ್ಲಿ ನಾಗರಾಜ್(28), ಸೋಮು(38), ನಾಗಭೂಷಣ್(36) ಹಾಗೂ ಮುರಳಿ(38) ಮೃತಪಟ್ಟಿದ್ದಾರೆ. ಮೃತ ನಾಲ್ವರು ತೆಲಂಗಾಣದ ಹಿಂದೂಪುರ ನಿವಾಸಿಗಳು ಎಂದು ಗುರುತಿಸಲಾಗಿದೆ. ದೇವದುರ್ಗ ತಾಲೂಕಿನ ಗಬ್ಬೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಘಟನೆ ಬಗ್ಗೆ ಗಾಯಾಳು ಆನಂದ್ ಟಿವಿ9 ಗೆ ಪ್ರತಿಕ್ರಿಯಿಸಿದ್ದು, ತೆಲಂಗಾಣದ ಹಿಂದೂಪುರದಿಂದ ಯಾದಗಿರಿ ಜಿಲ್ಲೆಯ ಶಹಪುರಕ್ಕೆ ಕುರಿ ಖರೀದಿಗೆ ಹೋಗಿದ್ದೆವು. ರಾತ್ರಿ 10 ಕ್ಕೆ ಊಟ ಮಾಡಿ ಮಲಗಿದ್ದೆವು. ವಾಹನ ಯಾರು ಓಡಿಸುತ್ತಿದ್ದರು ಗೊತ್ತಿಲ್ಲ. ತಡ ರಾತ್ರಿ ಪೊಲೀಸರು ಬಂದು ನೀರು ಕುಡಿಸಿದಾಗ ಎಚ್ಚರವಾಗಿದೆ. ಕಾಲಿಗೆ ಗಂಭೀರಗಾಯವಾಗಿದೆ ಅಂತ ಹೇಳಿದ್ದಾರೆ.