ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಲು ತಮ್ಮ ಸರ್ಕಾರದಿಂದ ರಶ್ಮಿಕಾ ಮಂದಣ್ಣ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಅವರು ಆಹ್ವಾನವನ್ನು ತಿರಸ್ಕರಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ರವಿ ಗಣಿಗ ಆರೋಪಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ರವಿ ಗಣಿಗ, ರಶ್ಮಿಕಾ ಮಂದಣ್ಣ ಅವರ ತಂಡವು ನಮ್ಮ ಆಹ್ವಾನವನ್ನು ತಿರಸ್ಕರಿಸಿರುವುದಕ್ಕೆ ನಮ್ಮ ಬಳಿ ಪುರಾವೆ ಇದೆ ಎಂದಿದ್ದಾರೆ.
‘ಇದು ರಶ್ಮಿಕಾ ಅವರ ಹೇಳಿಕೆಯಲ್ಲ, ಬದಲಿಗೆ ರಶ್ಮಿಕಾ ಅವರ ತಂಡದ ಹೇಳಿಕೆ. ನಾವು ರಶ್ಮಿಕಾ ಅವರನ್ನು ಬೆಂಗಳೂರು ಚಲನಚಿತ್ರೋತ್ಸವಕ್ಕೆ ಕರೆದಿದ್ದೆವು. ಆದರೆ, ಅವರು ನಮ್ಮ ಆಹ್ವಾನವನ್ನು ತಿರಸ್ಕರಿಸಿದರು. ಈ ಸಂಬಂಧ ನಮ್ಮ ಬಳಿಯಿರುವ ದಾಖಲೆಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುತ್ತೇವೆ” ಎಂದು ಅವರು ಹೇಳಿದರು.
ಆಮಂತ್ರಣವಿದ್ದರೂ ರಶ್ಮಿಕಾ ಚಿತ್ರೋತ್ಸವಕ್ಕೆ ಹಾಜರಾಗಿಲ್ಲ. ಹೀಗಾಗಿ ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದ್ದರು.
ತಮ್ಮ ಟೀಕೆಗಳಿಗೆ ಮತ್ತಷ್ಟು ಸ್ಪಷ್ಟನೆ ನೀಡಿದ ಗಣಿಗ, ನನ್ನ ಹೇಳಿಕೆ ‘ಗೂಂಡಾಗಿರಿ’ ಅಥವಾ ‘ರೌಡಿಸಂ’ ಎಂದು ಅರ್ಥವಲ್ಲ. ನಾನು ಕನ್ನಡಿಗನಾಗಿ ನಾನು ನೀಡಿದ ಹೇಳಿಕೆಗೆ ಬದ್ಧನಾಗಿರುತ್ತೇನೆ. ನನ್ನ ತಾಯಿನಾಡು, ನನ್ನ ಭಾಷೆ ಮತ್ತು ನನ್ನ ಜನರೊಂದಿಗೆ ನಾನು ನಿಂತಿರುವುದಕ್ಕೆ ನನಗೆ ಹೆಮ್ಮೆ ಇದೆ… ರಶ್ಮಿಕಾ ಮಂದಣ್ಣ ಬಗ್ಗೆ ನಮಗೆ ಹೆಮ್ಮೆ ಇದೆ. ಆಕೆ ಕನ್ನಡತಿ. ನಾವು ಆಕೆಯನ್ನು ಕರೆದಿದ್ದೇವೆ. ಆದರೆ, ಅವರು ಕನ್ನಡಿಗರಿಗೆ ಸಮಯವಿಲ್ಲ ಎಂದು ಹೇಳಿದರು. ಇದು ಕನ್ನಡಿಗರನ್ನು ನಡೆಸಿಕೊಳ್ಳುವ ಮಾರ್ಗವೇ? ಎಂದು ಪ್ರಶ್ನಿಸಿದ್ದಾರೆ.