ಬಳ್ಳಾರಿ:07.. ನಗರದ ಸಂಗನಕಲ್ಲು ರಸ್ತೆಯ ಬಿಜೆಪಿ ಜಿಲ್ಲಾ ಕಛೇರಿ ನೆಲ ಮಹಡಿ ಸ್ಥಳವನ್ನು ಖಾಸಗಿ ಕಾರ್ಯಕ್ರಮಕ್ಕೆ ನೀಡಿರುವ ಕುರಿತು ನಾನಾ ಚರ್ಚೆಗೆ ಗ್ರಾಸವಾಗಿದ್ದು, ಹಗ್ಗ ಜಗ್ಗಾಟದ ಮಧ್ಯೆ ಎರಡನೇ ಬಾರಿಗೆ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಅನಿಲ್ ಕುಮಾರ್ ಮೋಕ ಅವರಿಗೆ ವರಿಷ್ಠರು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ಮಾಜಿ ಸಚಿವರಾದ ಗಾಲಿ ಜನಾರ್ಧನ ರೆಡ್ಡಿ ಹಾಗೂ ಬಿ.ಶ್ರೀರಾಮುಲು ಅವರಿಬ್ಬರ ಮಧ್ಯೆ ನಡೆದ ಶೀತಲ ಸಮರದಿಂದ ಬಳ್ಳಾರಿ ಜಿಲ್ಲಾ ಬಿಜೆಪಿಯಲ್ಲಿ ಗೊಂದಲ ಶುರುವಾಗಿದೆ. ಕಾರ್ಯಕರ್ತರು ಹಾಗೂ ಮುಖಂಡರ ಮಧ್ಯೆ ಮಾತಿನ ಸಮರ, ಆರೋಪ ಪ್ರತ್ಯಾರೋಪಗಳು ಸಾಮಾನ್ಯವಾಗಿವೆ. ಇಂತಹದರ ಮಧ್ಯೆ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕ ಅವರು ಪಕ್ಷದ ಜಿಲ್ಲಾ ಕಛೇರಿ ನೆಲ ಮಹಡಿಯಲ್ಲಿ ಬರ್ತಡೇ ಪಾರ್ಟಿ ಆಯೋಜಿಸಲು ಅನುಮತಿ ನೀಡಿರುವುದು ಅಸಮಾಧಾನ ಸ್ಫೋಟಕ್ಕೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.
ಜಿಲ್ಲೆಯ ನಾಯಕರೇ ಈ ಕುರಿತು ವರಿಷ್ಠರ ಗಮನಕ್ಕೆ ತಂದಿದ್ದು, ಜಿಲ್ಲಾಧ್ಯಕ್ಷರಿಗೆ ಹಾಗೂ ಕಾರ್ಯಾಲಯದ ಕಾರ್ಯದರ್ಶಿ ಶರಣಕುಮಾರ್ ಅವರಿಗೆ ಕಾರಣ ಕೇಳಿ ವರಿಷ್ಠರು ನೋಟಿಸ್ ಜಾರಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕೆಲವರು ಸ್ಥಳಕ್ಕೆ ತೆರಳಿ ಖಾಸಗಿ ಕಾರ್ಯಕ್ರಮ ನಡೆಸಲು ಅನುಮತಿ ನೀಡಿದ್ದು ಯಾರು ಎಂದು ಕಚೇರಿ ಸಿಬ್ಬಂದಿಗಳನ್ನು ಪ್ರಶ್ನಿಸಿದ್ದಾರೆ, ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೊಕ ಅವರೇ ಹೇಳಿದ್ದರಂತೆ ಅದಕ್ಕೆ ನಾನು ಸುಮ್ಮನಾಗಿರುವೆ ಎಂದು ಉತ್ತರಿಸಿದ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಕುರಿತು ನೂತನ ಅಧ್ಯಕ್ಷ ಅನಿಲ್ ಕುಮಾರ್ ಮೊಕ ಅವರು ಪ್ರತಿಕ್ರಿಯಿಸಿ, ನಾನು ಊರಲ್ಲಿ ಇಲ್ಲ, ಪ್ರಯಾಗ್ ರಾಜಗೆ ತೆರಳಿರುವೆ, ಪಕ್ಷದ ಕಚೇರಿಯ ಮನೆ ಪಕ್ಕದವರು ಬರ್ತಡೇ ಪಾರ್ಟಿ ನಡೆಸಲು ಕೇಳಿರಲಿಲ್ಲ. ಮನೆ ಚಿಕ್ಕದಿದೆ, ಕಾರ್ಯಕ್ರಮಕ್ಕೆ ಬಂದವರು ಕೂಡಲು ಅನುಮತಿ ಕೇಳಿದ್ದರು ಅಷ್ಟೇ, ಅದು ಇಷ್ಟೆಲ್ಲಾ ರಾದ್ದಂತವಾಗಿದೆ, e ಕುರಿತು ವರಿಷ್ಠರ ಗಮನಕ್ಕೆ ತರುವೆ ಎಂದರು.