ನಮ್ಮ ತಾಯಿಯದು ಸಹಜ ಸಾವು, ಸಚಿವ ಭೈರತಿ ಸುರೇಶರದ್ದು ಆಚಾರವಿಲ್ಲದ ನಾಲಿಗೆ: ಬಿ.ವೈ. ರಾಘವೇಂದ್ರ ಕಿಡಿ

Ravi Talawar
ನಮ್ಮ ತಾಯಿಯದು ಸಹಜ ಸಾವು, ಸಚಿವ ಭೈರತಿ ಸುರೇಶರದ್ದು ಆಚಾರವಿಲ್ಲದ ನಾಲಿಗೆ: ಬಿ.ವೈ. ರಾಘವೇಂದ್ರ ಕಿಡಿ
WhatsApp Group Join Now
Telegram Group Join Now

ಶಿವಮೊಗ್ಗ: ನಮ್ಮ ತಾಯಿ ಮೈತ್ರಾ ದೇವಿ ಅವರದು ಸಹಜ ಸಾವು. ಅವರ ಸಾವಿನ ಕುರಿತು ಮಾತನಾಡಿ ಸಚಿವ ಭೈರತಿ ಸುರೇಶ್ ಅವರು ತಮ್ಮದು ಆಚಾರ ವಿಲ್ಲದ ನಾಲಿಗೆ ಎಂದು ಸಾಬೀತು ಪಡಿಸಿದ್ದಾರೆಂದು ಸಂಸದ ಬಿ.ವೈ. ರಾಘವೇಂದ್ರ ಅವರು ಖಾರವಾಗಿಯೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಸಂಸದರ ಪತ್ರಿಕಾ ಹೇಳಿಕೆ ಹೀಗಿದೆ: “ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್ ಅವರೇ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ದಲ್ಲಿ ನಡೆದಿರುವ ಅಕ್ರಮ ನಿವೇಶನ ಹಂಚಿಕೆ ಪ್ರಕರಣದಲ್ಲಿ ನಿಮ್ಮ ಭ್ರಷ್ಟ ನಾಯಕರನ್ನು ಉಳಿಸಿಕೊಳ್ಳಲು, ಪ್ರಕರಣದ ದಿಕ್ಕನ್ನು ಬೇರೆ ಕಡೆ ತಿರುಗಿಸಲು ನನ್ನ ಪೂಜ್ಯ ತಾಯಿಯವರ ಸಹಜ ಸಾವನ್ನು ಆಚಾರವಿಲ್ಲದ, ತಮ್ಮ ಎಲುಬಿಲ್ಲದ ನಾಲಿಗೆಯ ಮೂಲಕ ಕಾಂಗ್ರೆಸ್​ ಪಕ್ಷದ ಮೂಲ ರಾಜಕೀಯ ಸಂಸ್ಕೃತಿಯಾದ ಲಜ್ಜೆಗೆಟ್ಟ ರಾಜಕಾರಣಕ್ಕೆ ಬಳಸಿಕೊಂಡಿರುವುದು ಆಕ್ಷೇಪಾರ್ಹ”.

“ಇದು ಅವರ ಸ್ಮರಣೆಗೆ ಮಾತ್ರವಲ್ಲ, ಮಾನವೀಯತೆಯ ಮೂಲ ಮೌಲ್ಯಗಳಿಗೂ ಧಕ್ಕೆ ತರುವಂತಹ ಕೃತ್ಯ. ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ವೈಯಕ್ತಿಕ ನೋವನ್ನು ರಾಜಕೀಯ ಪ್ರಯೋಜನಕ್ಕಾಗಿ ಬಳಸುವುದು ಜನತೆಗೂ, ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳಿಗೂ ಕಪ್ಪುಚುಕ್ಕೆ ಇಟ್ಟಂತೆಯೇ ಸರಿ. ಈ ರೀತಿಯ ನೀಚ ರಾಜಕಾರಣವನ್ನು ಯಾರು ಕೂಡ ಮಾಡಬಾರದು, ಇದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು, ಅಳವಡಿಸಿಕೊಳ್ಳಬಾರದು. ಇದು ನಿಮಗೆ ಖಂಡಿತಾ ಶೋಭೆ ತರುವುದಿಲ್ಲ. ಇಂತಹ ಲಜ್ಜಾಸ್ಪದ ರಾಜಕೀಯದ ಮುಖವಾಡಗಳನ್ನು ನಾನು ಧಿಕ್ಕರಿಸುತ್ತೇನೆ. ಈ ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ಆಗ್ರಹಿಸುತ್ತೇನೆ. ಇಲ್ಲವಾದಲ್ಲಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸುವ ಎಚ್ಚರಿಕೆ ಈ ಮೂಲಕ ತಮಗೆ ನೀಡುತ್ತಿದ್ದೇನೆ” ಎಂದಿದ್ದಾರೆ.

WhatsApp Group Join Now
Telegram Group Join Now
Share This Article