ಜಲಾಶಯ ಸಂಪೂರ್ಣ ಭರ್ತಿ; ಒಂದು ವರ್ಷದವರೆಗೆ ನೀರು ಸಮರ್ಪಕ ಪೂರೈಕೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Ravi Talawar
ಜಲಾಶಯ ಸಂಪೂರ್ಣ ಭರ್ತಿ; ಒಂದು ವರ್ಷದವರೆಗೆ ನೀರು ಸಮರ್ಪಕ ಪೂರೈಕೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
WhatsApp Group Join Now
Telegram Group Join Now

ಮಲಪ್ರಭಾ ಜಲಾಶಯಕ್ಕೆ ಗಂಗಾ ಪೂಜೆ; ಬಾಗಿನ ಅರ್ಪಣೆ ಕಾರ್ಯಕ್ರಮ

ಬೆಳಗಾವಿ, ಅ.15: ಉತ್ತಮ ಮಳೆಯಿಂದ ಮಲಪ್ರಭಾ ಜಲಾಶಯ ಮಟ್ಟ ಸಂಪೂರ್ಣ ಭರ್ತಿಯಾಗಿದ್ದು, ಪ್ರತಿವರ್ಷದಂತೆ ಹುಬ್ಬಳ್ಳಿ, ಧಾರವಾಡ ಸೇರಿದಂತೆ ಸವದತ್ತಿ, ಬೈಲಹೊಂಗಲ ತಾಲೂಕುಗಳಿಗೆ ಮಲಪ್ರಭಾ ಜಲಾಶಯದಿಂದ ಕುಡಿಯುವ ನೀರು ಬಿಡುಗಡೆ ಮಾಡಲಾಗುತ್ತಿದೆ. ಬೇಸಿಗೆ ಕಾಲದಲ್ಲಿ ಜನ, ಜಾನುವಾರುಗಳಿಗೆ ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯ ನೀರಿನ ಸಮಸ್ಯೆ ಇರುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹಾಗೂ ಮಲಪ್ರಭಾ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ್ ಅವರು ಹೇಳಿದರು.

ಮಲಪ್ರಭಾ ನೀರಾವರಿ ಸಲಹಾ ಸಮಿತಿ ವತಿಯಿಂದ

ಮಂಗಳವಾರ(ಅ.15) ನವಿಲುತೀರ್ಥ ಅಣೆಕಟ್ಟು ಸ್ಥಳದಲ್ಲಿ ಗಂಗಾ ಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನವಿಲುತೀರ್ಥ ಡ್ಯಾಂ ಉತ್ತರ ಕರ್ನಾಟಕದ ರೈತರ ಜೀವ “ಮಲಪ್ರಭಾ ಜಲಾಶಯ” ಭರ್ತಿಯಾಗಿರುವ ಶುಭ ಸಂದರ್ಭದಲ್ಲಿ ಮಲಪ್ರಭಾ ಜಲಾಶಯಕ್ಕೆ ಗಂಗಾ ಪೂಜೆ ಹಾಗೂ “ಬಾಗಿನ ಅರ್ಪಣೆ” ಸಲ್ಲಿಸುವುದು ನಮ್ಮ ಭಾಗ್ಯ ಎಂದು ಹೇಳಿದರು.

ವರುಣನ ಕೃಪೆ, ತಾಯಿ ರೇಣುಕಾ ಯಲ್ಲಮ್ಮ ಅನುಗ್ರಹದಿಂದ ಮಲಪ್ರಭಾ ನದಿಗೆ ನಾವೆಲ್ಲ ಬಾಗಿನ ಅರ್ಪಣೆ ಮಾಡುವ ಸೌಭಾಗ್ಯ ಸಿಕ್ಕಿದೆ. ಕಳೆದ ವರ್ಷ ನಾವು ಕಷ್ಟದಲ್ಲಿದ್ದೆವು. ಆದರೂ ಶಕ್ತಿ ಮೀರಿ ರೈತರನ್ನ ಕಾಪಾಡುವ ಕೆಲಸ ಮಾಡಿದ್ದೇವೆ, ಈಗ ಮಲಪ್ರಭೆ ತಾಯಿಯ ಕೃಪೆ ನಮಗೆ ಸಿಕ್ಕಿದೆ ಎಂದರು

ಬೇಸಿಗೆ ಕಾಲದಲ್ಲಿ ಬಾದಾಮಿ, ರಾಮದುರ್ಗ, ನವಲಗುಂದ ತಾಲೂಕುಗಳ ಜೊತೆಗೆ ಮಲಪ್ರಭಾ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೂ ನೀರು ಬಿಡುಗಡೆಗೆ ಜಲಾಶಯದಲ್ಲಿ ನೀರು ಸಂಗ್ರಹಣೆ ಮಾಡಲಾಗಿದೆ. ಈ ಭಾಗದ ಶಾಸಕರ ಆಶಯದಂತೆ ಮುಂದಿನ ದಿನಗಳಲ್ಲಿ ಉದ್ಯಾನವನ, ವೀಕ್ಷಕರಿಗೆ ಆಸನ ಸೇರಿದಂತೆ ಜಲಾಶಯ ಅಭಿವೃದ್ಧಿಪಡಿಸಿ, ಕೆ.ಆರ್.ಎಸ್. ಮಾದರಿಯಲ್ಲಿ ಮಾರ್ಪಾಡು ಮಾಡಲಾಗುವುದು ಎಂದು ಸಚಿವೆ ಹೆಬ್ಬಾಳಕರ ಅವರು ತಿಳಿಸಿದರು.

ಕೆ.ಆರ್.ಎಸ್, ಆಲಮಟ್ಟಿ ಅಣೆಕಟ್ಟುಗಳು ಮಾದರಿಯಲ್ಲಿ ಮಲಪ್ರಭಾ ಜಲಾಶಯ ಸುತ್ತಮುತ್ತ ಪ್ರದೇಶವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಎಲ್ಲ ಶಾಸಕರು ಜನಪ್ರತಿನಿಧಿಗಳು ಶ್ರಮ ವಹಿಸಲಿದ್ದಾರೆ. ನಾಲ್ಕು ಜಿಲ್ಲೆಯ 13 ತಾಲೂಕುಗಳ ಜನರು ಕುಡಿಯುವ ನೀರು, ಕೃಷಿ ಚಟುವಟಿಕೆಗಳಿಗೆ ಈ ಜಲಾಶಯದ ಅವಲಂಬಿತರಾಗಿದ್ದಾರೆ. ಈಗ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಜನರು ಸಂತಸದಲ್ಲಿದ್ದಾರೆ ಎಂದು ನವಲಗುಂದ ಶಾಸಕ ಎನ್.ಎಚ್. ಕೋನರೆಡ್ಡಿ ಅವರು ಹೇಳಿದರು.

ಮಲಪ್ರಭೆಯ ಇಂದಿರಾ ಗಾಂಧಿ ಜಲಾಶಯ ತುಂಬಿ ಹರಿಯುತ್ತಿದೆ. ಎಲ್ಲರೂ ಸಂತಸ ಪಡುವ ವಿಷಯ. ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಈ ಭಾಗದ ರೈತರಿಗೆ, ಜನಕರುಗಳಿಗೆ ಕುಡಿಯುವ ನೀರಿನ ಯಾವುದೇ ಅಡತಡೆ ಇಲ್ಲ. ಸರ್ಕಾರದಿಂದ ಜಲಾಶಯದ ಇನ್ನಷ್ಟು ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಸವದತ್ತಿ ವಿಧಾನಸಭಾ ಮತಕ್ಷೇತ್ರದ ಶಾಸಕ

ವಿಶ್ವಾಸ ವೈದ್ಯ ಅವರು ತಿಳಿಸಿದರು.

ಬಾದಾಮಿ ಶಾಸಕ ಚಿಮ್ಮನಕಟ್ಟಿ, ಮಲಪ್ರಭಾ ನೀರಾವರಿ ಸಲಹಾ ಸಮಿತಿಯ ಸಭೆಯ ಸದಸ್ಯರು, ಮಲಪ್ರಭಾ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ನವಿಲುತೀರ್ಥ ವೃತ್ತದ ಅಧೀಕ್ಷಕ ಎಂಜಿನಿಯರ್ ವಿ.ಎಸ್.ಮಧುಕರ, ನೀರಾವರಿ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನವೀಕೃತ ಪ್ರವಾಸಿಮಂದಿರ ಉದ್ಘಾಟನೆ:

ಇದಕ್ಕೂ ಮುಂಚೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು, ನವಿಲುತೀರ್ಥದ ನವೀಕೃತ ಪ್ರವಾಸಿ ಮಂದಿರದ ಕಟ್ಟಡವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸವದತ್ತಿ ಶಾಸಕ ವಿಶ್ವಾಸ್ ವೈದ್ಯ, ನವಲಗುಂದ ಶಾಸಕ ಎನ್.ಎಚ್. ಕೋನರೆಡ್ಡಿ, ಬಾದಾಮಿ ಶಾಸಕ ಚಿಮ್ಮನಕಟ್ಟಿ, ಮಲಪ್ರಭಾ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ನವಿಲುತೀರ್ಥ ವೃತ್ತದ ಅಧೀಕ್ಷಕ ಎಂಜಿನಿಯರ್ ವಿ.ಎಸ್.ಮಧುಕರ ಸೇರಿದಂತೆ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.

 

WhatsApp Group Join Now
Telegram Group Join Now
Share This Article