ಹುಬ್ಬಳ್ಳಿ: ”ನಮಗೂ ರಾಜಕಾರಣ ಮಾಡುವುದಕ್ಕೆ ಬರುತ್ತದೆ, ಇನ್ನುಮುಂದೆ ನಾವೂ ರಾಜಕಾರಣ ಮಾಡುತ್ತೇವೆ” ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, “ಮುಡಾ ವಿಚಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪದೇ ಪದೆ ರಾಜಕಾರಣ ಮಾಡುತ್ತಿವೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ. ತನಿಖೆ ಮಾಡಲು ಅವಕಾಶ ಮಾಡಿಕೊಡಬೇಕು. ಅದನ್ನು ಬಿಟ್ಟು ನಿತ್ಯ ರಾಜಕಾರಣ ಮಾಡುವುದು ಸರಿಯಲ್ಲ. ಮುಡಾ ವಿಚಾರವನ್ನು ಪ್ರಧಾನಮಂತ್ರಿಗಳು ಅವರ ಚುನಾವಣಾ ಭಾಷಣದಲ್ಲಿ ಉಪಯೋಗಿಸಿಕೊಳ್ಳುತ್ತಾರೆ ಎಂದಾದರೆ ಅದು ರಾಜಕಾರಣ ಅಲ್ಲದೇ ಬೇರೇನು?. ಹಾಗಾಗಿ, ನಾವು ರಾಜಕಾರಣ ಮಾಡುತ್ತೇವೆ. ಪ್ರತ್ಯುತ್ತರ ನೀಡುತ್ತೇವೆ” ಎಂದು ಟಾಂಗ್ ನೀಡಿದರು.