ಇಂದು ವಿಶ್ವವಿಖ್ಯಾತ ‘ಪುರಿ ಜಗನ್ನಾಥ’ನ ರಥೋತ್ಸವದ ‘ಬಹುದ ಯಾತ್ರೆ’

Ravi Talawar
ಇಂದು  ವಿಶ್ವವಿಖ್ಯಾತ ‘ಪುರಿ ಜಗನ್ನಾಥ’ನ ರಥೋತ್ಸವದ ‘ಬಹುದ ಯಾತ್ರೆ’
WhatsApp Group Join Now
Telegram Group Join Now

ಪುರಿ, ಒಡಿಶಾ: ವಿಶ್ವವಿಖ್ಯಾತ ‘ಪುರಿ ಜಗನ್ನಾಥ’ನ ರಥೋತ್ಸವದ ‘ಬಹುದ ಯಾತ್ರೆ’ ಇಂದು ಭಗವಂತನ ಶ್ರೀ ಮಂದಿರ ತಲುಪಲಿದೆ. ದೇವಾಲಯಕ್ಕೆ ಮೊದಲು ಭಗವಾನ್​​ ಜಗನ್ನಾಥರ ಒಡಹುಟ್ಟಿದವರಾದ ಬಲಭದ್ರ ದೇವರು, ಬಳಿಕ ಸಹೋದರಿ ದೇವಿ ಸುಭದ್ರಾ, ಕೊನೆಯಲ್ಲಿ ಜಗನ್ನಾಥ ದೇವರು ಆಗಮಿಸಲಿದ್ದಾರೆ. ಒಂಬತ್ತು ದಿನಗಳ ಕಾಲ ಗುಂಡಿಚಾ ದೇವಸ್ಥಾನದಲ್ಲಿ ನೆಲೆಸಿದ್ದ ದೇವರುಗಳನ್ನು ಭಕ್ತರು ಇಂದು ಭವ್ಯ ಮೆರವಣಿಗೆಯಲ್ಲಿ ದೇವರ ರಥವನ್ನು ಎಳೆಯಲಿದ್ದಾರೆ.

ಸಂಪ್ರದಾಯದ ಪ್ರಕಾರವೇ ಗುಂಡಿಚಾ ದೇವಸ್ಥಾನದಲ್ಲಿ ಎಲ್ಲ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ದೇವತೆಗಳ ‘ಪಹಂಡಿ’ ಮಧ್ಯಾಹ್ನ 12 ಗಂಟೆಗೆ ನೆರವೇರಲಿದೆ. ಸಂಜೆ 4 ಗಂಟೆಗೆ ರಥೋತ್ಸವ ನಡೆಯಲಿದೆ. ರಥ ಎಳೆಯುವ ಕಾರ್ಯ ಮುಗಿದ ನಂತರ ರಥದ ಮೇಲಿರುವ ಇತರ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ಶ್ರೀ ಜಗನ್ನಾಥ ದೇವಸ್ಥಾನದ ಆಡಳಿತ (SJTA) ಪ್ರಕಾರ, ಎಲ್ಲ ಧಾರ್ಮಿಕ ಕ್ರಿಯೆಗಳನ್ನು ಸುಗಮವಾಗಿ ಮತ್ತು ಶಿಸ್ತುಬದ್ಧವಾಗಿ ನಡೆಸಲು ವಿಸ್ತಾರವಾದ ಸಿದ್ಧತೆಗಳನ್ನು ಮಾಡಲಾಗಿದೆ. ಆಡಳಿತವು ಸಕಾಲದಲ್ಲಿ ಆಚರಣೆಗೆ ಒತ್ತು ನೀಡುತ್ತಿದೆ.

ಪುರಿ ಜಗನ್ನಾಥ ದೇವಸ್ಥಾನದ ರತ್ನ ಭಂಡಾರದ ಬಾಗಿಲ ಬರೋಬ್ಬರಿ 46 ವರ್ಷಗಳ ಬಳಿಕ ನಿನ್ನೆ ತೆರೆಯಲಾಯಿತು. ಪೂಜೆ ಸಲ್ಲಿಸಿದ ಬಳಿಕ ಭಾನುವಾರ ಮಧ್ಯಾಹ್ನ 1.28ಕ್ಕೆ ಆ ರಹಸ್ಯ ಕೊಠಡಿಯ ಬಾಗಿಲು ಓಪನ್ ಮಾಡಲಾಗಿದೆ.

1978 ರಲ್ಲಿ ಕೊನೆಯದಾಗಿ ರತ್ನ ಭಂಡಾರದ ಬಾಗಿಲನ್ನು ತೆರೆಯಲಾಗಿತ್ತು. ಜುಲೈ 7 ಮತ್ತು 8 ರಂದು ಪುರಿಯಲ್ಲಿ ಜಗನ್ನಾಥ ದೇವರ ಮಹಾರಥೋತ್ಸವ ನಡೆದಿದೆ. ಪ್ರತಿ ಬಾರಿ 1 ದಿನವಿದ್ದ ಜಾತ್ರೆ ಈ ಬಾರಿ 2 ದಿನ ನಡೆಸಲಾಗಿದೆ. ಈ ಭವ್ಯ ರಥಯಾತ್ರೆಗೆ ದೇಶ-ವಿದೇಶದಿಂದ ಭಕ್ತರು ಸೇರಿದ್ದರು. ಈ ಬಾರಿ ಜಾತ್ರೆಯ ಮೊದಲ ದಿನ ಭಾನುವಾರದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಧಾನ ಜಗನ್ನಾಥ ರಥದ ಹಗ್ಗಗಳನ್ನು ಎಳೆಯುವ ಮೂಲಕ ಸಾಂಕೇತಿಕವಾಗಿ ಮಹಾ ಯಾತ್ರೆಗೆ ಚಾಲನೆ ನೀಡಿದ್ದರು.

WhatsApp Group Join Now
Telegram Group Join Now
Share This Article