ಪತ್ರಕರ್ತರು  ಪಾರದರ್ಶಕ ಸುದ್ದಿಗಳನ್ನು ನೀಡಬೇಕು: ಶಾಸಕ ಲಕ್ಷ್ಮಣ ಸವದಿ ಅಭಿಮತ

Ravi Talawar
ಪತ್ರಕರ್ತರು  ಪಾರದರ್ಶಕ ಸುದ್ದಿಗಳನ್ನು ನೀಡಬೇಕು: ಶಾಸಕ ಲಕ್ಷ್ಮಣ ಸವದಿ ಅಭಿಮತ
WhatsApp Group Join Now
Telegram Group Join Now
 ಅಥಣಿ : ಪತ್ರಿಕೆಗಳು ಮತ್ತು ಪತ್ರಕರ್ತರು  ನಿರ್ಭೀತಿಯಿಂದ ಸುದ್ದಿಗಳನ್ನು ಪ್ರಕಟಿಸುವ ಮೂಲಕ ಸಮಾಜವನ್ನು ತಿದ್ದುವ ಕೆಲಸವನ್ನ ಮಾಡಬೇಕು.  ಪಾರದರ್ಶಕತೆ ಹಾಗೂ  ನಿಷ್ಪಕ್ಷಪಾತದಿಂದ  ವರದಿಗಳನ್ನು ನೀಡಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
 ಅವರು ಶನಿವಾರ  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ , ಅಥಣಿ ತಾಲೂಕ ಘಟಕದಿಂದ ಆಯೋಜಿಸಲಾಗಿದ್ದ  ತಾಲೂಕ ಮಟ್ಟದ ಪತ್ರಿಕಾ ದಿನಾಚರಣೆ, ಸಾಧಕರ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
 ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ  ಕಾರ್ಯಾಂಗ ಶಾಸಕಾಂಗ ಮತ್ತು ನ್ಯಾಯಾಂಗ  ಜೊತೆಗೆ ನಾಲ್ಕನೆಯ ಅಂಗವಾಗಿ ಪತ್ರಿಕಾ ರಂಗವು  ಪ್ರಮುಖ ಪಾತ್ರ ವಹಿಸುತ್ತದೆ. ಪತ್ರಿಕೆಗಳು ಮತ್ತು ಪತ್ರಕರ್ತರು ಸಾಮಾಜಿಕ ವ್ಯವಸ್ಥೆಯಲ್ಲಿನ  ಲೋಪದೋಷಗಳನ್ನು ತಿದ್ದುವ ಕೆಲಸ ಮಾಡಬೇಕು. ಆಡಳಿತ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನ  ತಮ್ಮ ಹರಿತವಾದ ಲೇಖನಿಗಳ ಮೂಲಕ ಎತ್ತಿ ತೋರಿಸಿದಾಗ  ವ್ಯವಸ್ಥೆಯನ್ನು ಸರಿದಾರಿಗೆ ತರಲು ಸಾಧ್ಯವಿದೆ. ಇದರಿಂದ ಜನಸಾಮಾನ್ಯರಿಗೆ ನ್ಯಾಯ ಕೊಡಿಸಲು ಪತ್ರಕರ್ತರಿಂದ ಸಾಧ್ಯವಿದೆ ಎಂದು ಹೇಳಿದರು.
  ಸುದ್ದಿಯ ಮೂಲವನ್ನ ಹುಡುಕುವುದರ ಜೊತೆಗೆ ಸತ್ಯವನ್ನ ಬೆಳಕಿಗೆ ತಂದು, ಜನಪರ  ಯೋಜನೆ ಮತ್ತು ಚಿಂತನೆಗಳಿಗೆ ಚಾಲನೆ ನೀಡಲು  ಪತ್ರಕರ್ತರಿಂದ ಮಾತ್ರ ಸಾಧ್ಯ ಎಂದು ಹೇಳಿದರು.
 ಇಂದಿನ ತಂತ್ರಜ್ಞಾನದಿಂದ  ಬದಲಾದ ಕಾಲಚಕ್ರದಲ್ಲಿ ಪತ್ರಿಕೋದ್ಯಮದಲ್ಲಿ  ಬಾರಿ ಪೈಪೋಟಿ ಇದೆ. ಸುದ್ದಿ ಬಿಂಬಿಸುವ  ಅವಸರದಲ್ಲಿ  ಸತ್ಯವನ್ನು ಮರೆಯಬಾರದು. ಪತ್ರಿಕೋದ್ಯಮ  ಇಂದು   ಸಂಕಷ್ಟದಲ್ಲಿದ್ದು, ಸತ್ಯ ಹಾಗೂ ಪ್ರಾಮಾಣಿಕ ಪತ್ರಕರ್ತರು  ಆರ್ಥಿಕತೆದಿಂದ ಹಿಂದುಳಿದು  ಬಡತನದಲ್ಲಿಯೇ ಜೀವನ ಮುಗಿಸುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿದ್ದ  ಮಾಜಿ ಶಾಸಕ ಷಹಜಾನ ಡೊಂಗರಗಾವ  ಮಾತನಾಡಿ  ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ಪತ್ರಿಕೆಗಳು ಸಮಾಜದ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಸ್ವಾತಂತ್ರ್ಯದ ನಂತರವೂ ಕೂಡ  ಪತ್ರಿಕಾರಂಗದಲ್ಲಿ ಅನೇಕ ಸುಧಾರಣೆಗಳನ್ನು ಕಂಡಿದೆ. ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಪತ್ರಕರ್ತರು ಸತ್ಯ ನಿಷ್ಠುರ ವರದಿಗಳನ್ನು ನೀಡುವ ಮೂಲಕ  ಸಮಾಜದಲ್ಲಿ ಸುಧಾರಣೆಗೆ ಪ್ರೇರಣೆಯಾಗಬೇಕು. ಪತ್ರಿಕಾ  ದಿನಾಚರಣೆಯನ್ನು ಹಮ್ಮಿಕೊಳ್ಳುವ ಮೂಲಕ  ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ  ಸನ್ಮಾನಿಸುತ್ತಿರುವುದು ಕೂಡಾ  ಶ್ಲಾಘನೀಯ ಎಂದರು.
   ಅತಿಥಿ ಉಪನ್ಯಾಸಕರಾಗಿದ್ದ  ಹಿರಿಯ ಪತ್ರಕರ್ತೆ  ನಿರೂಪಮ ಕೆ ಎಸ್ ಮಾತನಾಡಿ  ಕನ್ನಡ ಮಾಧ್ಯಮ ಕ್ಷೇತ್ರದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ  ತಂತ್ರಜ್ಞಾನ ಬೆಳೆದು ಸಾಮಾಜಿಕ ಜಾಲತಾಣ  ಹೆಚ್ಚು ಜನಪ್ರಿಯವಾಗುತ್ತಿದೆ. ಯುವ ಪತ್ರಕರ್ತರು  ಡಿಜಿಟಲ್ ಮಾಧ್ಯಮವನ್ನು ಬಳಸಿಕೊಳ್ಳಲು ಹಲವು ಅವಕಾಶಗಳಿವೆ. ಡಿಜಿಟಲ್ ಮಾಧ್ಯಮದ ಮೂಲಕ  ಅನೇಕ ಪತ್ರಕರ್ತರು ಉದ್ಯೋಗ ಕಂಡುಕೊಂಡಿದ್ದು, ಇವುಗಳ ಬಗ್ಗೆ ಹೆಚ್ಚಿನ  ಮಾಹಿತಿ ಪಡೆದುಕೊಂಡು  ತಮ್ಮದೇ ಆದ ಡಿಜಿಟಲ್ ಮಾಧ್ಯಮವನ್ನು ರೂಪಿಸಿಕೊಂಡು  ಬದುಕು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.
 ಹಿರಿಯ ಪತ್ರಕರ್ತ  ಸಿ. ಎ. ಇಟ್ನಾಳಮಠ ಪ್ರಾಸ್ತಾವಿಕವಾಗಿ  ಮಾತನಾಡಿ  ಪತ್ರಿಕೋದ್ಯಮ ನಡೆದು ಬಂದ ಧಾರಿ ಮತ್ತು  ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯ ಚಟುವಟಿಕೆಗಳು ಕುರಿತು ತಿಳಿಸಿದರು.
 ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ  ಸುಕ್ಷೇತ್ರ ಗಚ್ಚಿನ ಮಠದ ಶಿವಬಸವ ಸ್ವಾಮೀಜಿ  ಆಶೀರ್ವಚನ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ  ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ  ಅಣ್ಣಾಸಾಬ ತೆಲಸoಗ  ಮಾತನಾಡಿದರು.
 ಈ ಸಂದರ್ಭದಲ್ಲಿ  ಹಿರಿಯ ಪತ್ರಕರ್ತ  ಎಸ್ ಡಿ ಚಕ್ರವರ್ತಿ, ಸಮಾಜ ಸೇವಕ ರಾಮನಗೌಡ ಪಾಟೀಲ, ಮಹಿಳಾ ಸಾಹಿತಿ ಡಾ. ಅರ್ಚನಾ ಅಥಣಿ, ಅಭಿಯಂತರ  ಪ್ರವೀಣ ಹುಣಸಿಕಟ್ಟಿ ಮತ್ತು ಆದರ್ಶ ಶಿಕ್ಷಕ  ಎಸ್ ಕೆ  ಖೋತ ಅವರನ್ನು  ಸನ್ಮಾನಿಸಲಾಯಿತು.ಇದೇ ಸಂದರ್ಭದಲ್ಲಿ  ಕಳೆದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಮತ್ತು ವಿವಿಧ ಕ್ಷೇತ್ರಗಳಲ್ಲಿ    ಉತ್ತಮ ಸಾಧನೆ ಮಾಡಿದ ಪತ್ರಕರ್ತರ ಮಕ್ಕಳಿಗೆ  ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪತ್ರಿಕಾ ದಿನಾಚರಣೆಯ  ಅಂಗವಾಗಿ ಮನೆ ಮನೆಗೆ ಪತ್ರಿಕೆಗಳನ್ನ ಹಂಚುವ ವಿತರಕರಿಗೆ  ಉಡುಗೊರೆ ವಿತರಿಸಲಾಯಿತು.
 ಸಮಾರಂಭದಲ್ಲಿ  ಪಟ್ಟಣದ ಹಿರಿಯ ವೈದ್ಯ ಡಾ. ಮಲ್ಲಿಕಾರ್ಜುನ ಹಂಜಿ, ಎಸ್ ಎಸ್ ಎಮ್ ಎಸ್ ಮಹಾವಿದ್ಯಾಲಯದ ಪ್ರಾಚಾರ್ಯ  ಡಾ.ಬಿ ಎಸ್ ಕಾಂಬಳೆ, ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ  ಅಧಿಕಾರಿ  ಶಿವಾನಂದ ಕಲ್ಲಾಪುರ, ತಾಲೂಕ ವೈದ್ಯಾಧಿಕಾರಿ  ಡಾ. ಬಸಗೌಡ ಕಾಗೆ, ಕ್ಷೇತ್ರ ಶಿಕ್ಷಣಾಧಿಕಾರಿ  ಎಂ ಬಿ ಮೋರಟಗಿ, ಜಿ ಪಂ. ಇಂಜಿನಿಯರ್ ವೀರಣ್ಣ ವಾಲಿ, ಪುರಸಭೆ ಮುಖ್ಯ ಅಧಿಕಾರಿ  ಅಶೋಕ ಗುಡಿಮನಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಮಗೊಂಡ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಅಣ್ಣಾಸಾಬ ತೆಲಸoಗ  ಸ್ವಾಗತಿಸಿದರು. ವಿಜಯ ಹುದ್ದಾರ ನಿರೂಪಿಸಿದರು. ಶಿವಕುಮಾರ ಅಪರಾಜ  ವಂದಿಸಿದರು.
WhatsApp Group Join Now
Telegram Group Join Now
Share This Article