ಬಿದ್ದಾಗ ಸೊರಗೋದು, ಗೆದ್ದಾಗ ಸೊಕ್ಕು ಮಾಡೋದು ರಾಜಕಾರಣವಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ 

Ravi Talawar
ಬಿದ್ದಾಗ ಸೊರಗೋದು, ಗೆದ್ದಾಗ ಸೊಕ್ಕು ಮಾಡೋದು ರಾಜಕಾರಣವಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ 
WhatsApp Group Join Now
Telegram Group Join Now
ಗೋಕಾಕ : ಗೆದ್ದಾಗ ಸೊಕ್ಕಾಗಲಿ, ಸೋತಾಗ ಸೊರಗುವುದಾಗಲಿ ನನ್ನ ಜಾಯಮಾನವಲ್ಲ. ಸೋಲಲಿ, ಗೆಲ್ಲಲಿ ಯಾವತ್ತೂ ಜನರೊಂದಿಗಿದ್ದು ಅವರ ಕಷ್ಟ ಸುಖದಲ್ಲಿ ಭಾಗಿಯಾಗುವುದು ನನ್ನ ಗುಣ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಗುರುವಾರ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಕಾರ್ಯಕರ್ತರಿಗೆ ಧನ್ಯವಾದ ಸಮರ್ಪಣಾ ಸಮಾರಂಭದಲ್ಲಿ ಸಚಿವರು ಮಾತನಾಡುತ್ತಿದ್ದರು. ಸೋಲು, ಗೆಲುವು ಸಹಜ ಪ್ರಕ್ರಿಯೆ. ರಾಜಕಾರಣ ನಿಂತ ನೀರಲ್ಲ, ಗೆಲುವು ಯಾರ ಸ್ವತ್ತಲ್ಲ, ಬಿದ್ದಾಗ ಸೊರಗೋದು, ಗೆದ್ದಾಗ ಸೊಕ್ಕು ಮಾಡೋದು ರಾಜಕಾರಣವಲ್ಲ ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷ ಬೆಳಗಾವಿ ಲೋಕಸಭೆಯ ಇತಿಹಾಸದಲ್ಲೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಮತ ಪಡೆದಿದೆ. ತಾಂತ್ರಿಕವಾಗಿ ಸೋತಿರಬಹುದು. ಆದರೆ ಅತೀ ದೊಡ್ಡ ಸಂಖ್ಯೆಯಲ್ಲಿ ಜನರು ನಮ್ಮನ್ನು ಬೆಂಬಲಿಸಿದ್ದಾರೆ. ಪ್ರಚಾರಕ್ಕೆ ಹೋದಾಗ ಎಲ್ಲಕಡೆ ಅಭೂತಪೂರ್ವ ಬೆಂಬಲ ಸಿಗುತ್ತಿತ್ತು. ಈ ಬಾರಿ ಕಾಂಗ್ರೆಸ್    ಗೆೆಲುವು ಖಚಿತ ಎಂದು ಎಲ್ಲ ಕಡೆ ಜನರೇ ಮಾತನಾಡುತ್ತಿದ್ದರು. ಆದರೆ ಕಾರಣಾಂತರಗಳಿಂದ ಸೋತಿರಬಹುದು. ಇಂದಿರಾಗಾಂಧಿ, ಸಿದ್ದರಾಮಯ್ಯ ಸೇರಿದಂತೆ ಸೋತವರೆಲ್ಲ ಮತ್ತೆ ಎದ್ದು, ಗೆದ್ದು ರಾಜಕಾರಣದಲ್ಲಿ ಹೆಸರು ಮಾಡಿದ್ದಾರೆ. ಅವರು ನಮಗೆ ಆದರ್ಶ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ನಾವು ಸದಾ ನಿಮ್ಮ ಜೊತೆಗಿರುತ್ತೇವೆ. ನಿಮ್ಮನ್ನು ದೂರ ಮಾಡುವ ಮನೋಭಾವ ನಮ್ಮದಲ್ಲ. ಸೋಲಿನಿಂದ ಕಂಗೆಡುವುದು ಬೇಡ. ಕೆಲವರು ಸೋತರೆ ಧಮಕಿ ಹಾಕುತ್ತಾರೆ. ಪ್ರಜಾಪ್ರಭುತ್ವದಲ್ಲಿ ಯಾರಿಗೂ ಹೆದರಬೇಕಿಲ್ಲ. ಬೇರೆಯವರು ನಮಗೆ ಅನ್ನ ಹಾಕುವುದಿಲ್ಲ. ಸ್ವಾಭಿಮಾನದಿಂದ ಬದುಕೋಣ.  ಎಲ್ಲರೂ ಸೇರಿ ಪಕ್ಷ ಸಂಘಟನೆ ಮಾಡೋಣ ಎಂದು ಅವರು ತಿಳಿಸಿದರು.
ಕೆಲಸ ಮಾಡಿದವರು, ಕೆಲಸ ಮಾಡದವರು, ಮತ ಹಾಕಿದವರು, ಮತ ಹಾಕದವರು ಎಲ್ಲರೂ ಸಹ ನಮ್ಮವರೇ ಎಂದು ತಿಳಿಯೋಣ. ಯಾರ ಮೇಲೂ ಆರೋಪ ಮಾಡುವುದು ಬೇಡ. ಬಹಳ ಶಿಸ್ತಿನಿಂದ ಎಲ್ಲರೂ ಕೆಲಸ ಮಾಡಿದ್ದೀರಿ. ಶ್ರಮ ಪಟ್ಟಿದ್ದೀರಿ. ನಿಮ್ಮ ಸಹಾಯಕ್ಕೆ ನಾವು ನಿಲ್ಲುತ್ತೇವೆ. ಗೋಕಾಕ, ಅರಬಾವಿ ಕ್ಷೇತ್ರದ ಜನರಲ್ಲಿ ಮಂದಹಾಸ ತಂದು ಕೊಡು ಎಂದು ನಾನು ದೇವಿ ಮಹಾಲಕ್ಷ್ಮಿಯಲ್ಲಿ ಬೇಡಿಕೊಳ್ಳುತ್ತೇನೆ ಎಂದು ಹೆಬ್ಬಾಳಕರ್ ಹೇಳಿದರು.
ನಿಮ್ಮ ಜೊತೆಗಿರುತ್ತೇನೆ – ಮೃಣಾಲ್‌ ಹೆಬ್ಬಾಳಕರ್
ಲೋಕಸಭಾ ಚುನಾವಣೆ ಅಭ್ಯರ್ಥಿಯಾಗಿದ್ದ ಮೃಣಾಲ್‌ ಹೆಬ್ಬಾಳಕರ್ ಮಾತನಾಡಿ, ಚುನಾವಣೆ ಪ್ರಚಾರದ ವೇಳೆ ಪ್ರತಿ ಊರನ್ನು ತಲುಪುವ ಪ್ರಯತ್ನ ಮಾಡಿದ್ದೆವು. ಎಲ್ಲಕಡೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿತ್ತು. ಚುನಾವಣೆಯಲ್ಲಿ ಸೋತಿರಬಹುದು. ಆದರೆ 6 ಲಕ್ಷ ಜನರು ನಮ್ಮನ್ನು ಬೆಂಬಲಿಸಿದ್ದಾರೆ. ಇದು ಸಣ್ಣ ಸಂಖ್ಯೆಯಲ್ಲ. ಪ್ರತಿ ದಿನ ಚುನಾವಣೆ ಎಂದು ತಿಳಿದು ಕೆಲಸ ಮಾಡೋಣ. ನಾನು ಹಿಂಜರಿಯುವ ಪ್ರಶ್ನೆಯೇ ಇಲ್ಲ. ಸದಾ ನಿಮ್ಮ ಮನೆ ಮಗನಾಗಿ ಜೊತೆಗಿರುತ್ತೇನೆ. ಜಿಲ್ಲಾ, ತಾಲೂಕು ಪಂಚಾಯತ ಚುನಾವಣೆಯಲ್ಲಿ ನಿಮ್ಮೆಲ್ಲರ ಜೊತೆ ಇರುತ್ತೇನೆ.
ಪಕ್ಷವನ್ನು ಬಲಿಷ್ಠಗೊಳಿಸಿ ಮುಂದಿನ ದಿನಗಳಲ್ಲಿ ಗೆಲ್ಲೋಣ ಎಂದು ಹೇಳಿದರು.
ಹಿರಿಯ ಮುಖಂಡ ಅಶೋಕ ಪೂಜಾರಿ, ಈ ಬಾರಿ ಹಿನ್ನಡೆ ಅನುಭವಿಸಿರಬಹುದು. ಆದರೆ ಮೃಣಾಲ ಹೆಬ್ಬಾಳಕರ್ ಅವರ ವಿಚಾರ, ಕ್ರಿಯಾಶೀಲತೆ, ಎಲ್ಲರನ್ನೂ ಗೌರವಿಸುವ ಮನೋಭಾವ ಖಂಡಿತ ಅವರನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಲಕ್ಷ್ಮೀ ಹೆಬ್ಬಾಳಕರ್ ಅವರ ಕ್ರಿಯಾಶೀಲತೆ, ಕತೃತ್ವ ಶಕ್ತಿ ಅವರನ್ನು ಈ ಎತ್ತರಕ್ಕೆ ಕೊಂಡೊಯ್ದಿದೆ ಎಂದರು.
ಸಿದ್ಧಲಿಂಗ ದಳವಾಯಿ, ಎಲ್ಲರೂ ಮನಸ್ಫೂರ್ತಿಯಿಂದ ಕೆಲಸ ಮಾಡಿದ್ದಾರೆ. ಆದರೂ ಕೆಲವೊಮ್ಮೆ ಅನಿರೀಕ್ಷಿತ ಫಲಿತಾಂಶ ಬರುತ್ತದೆ. ನಾವು ಎದೆಗುಂದುವುದು ಬೇಡ ಎಂದರು.
ಅನಿಲ ದಳವಾಯಿ ಮಾತನಾಡಿ, ಬಿಜೆಪಿಯ ಪೊಳ್ಳು ಭರವಸೆ, ಹಣ ಬಲದ ಮುಂದೆ ನಾವು ಸೋಲಬೇಕಾಯಿತು. ಸೋತಲ್ಲೇ ಗೆಲ್ಲೋಣ, ಹಿಂಜರಿಯಬೇಕಿಲ್ಲ. ಮುಂದಿನ ಬಾರಿ ಗೆಲ್ಲುವ ಪ್ರತಿಜ್ಞೆ ಮಾಡೋಣ ಎಂದರು.
ಮಹಾಂತೇಶ ಕಡಾಡಿ ಸ್ವಾಗತಿಸಿದರು. ಚಂದ್ರಶೇಖರ್ ಕೊಣ್ಣೂರ, ಲಕ್ಕಣ್ಣ ಸಂಶುದ್ದಿ, ರಾವ್ ಸಾಹೇಬ ಬೆಳಕೂಡ, ರಮೇಶ ಉಟಗಿ, ಕಲ್ಪನಾ ಜೋಶಿ, ಭೀಮಪ್ಪ ಹಂದಿಗುಂದ, ಚಂದನ ಗಿಡನ್ನವರ, ವಿ.ಪಿ.ನಾಯಕ, ಶಂಕರ್ ಗಿಡ್ಡನ್ನವರ, ಪ್ರಕಾಶ ಭಾಗೋಜಿ, ಬಸವರಾಜ ಬೆಳಕೊಡ್, ಲಗಮಣ್ಣ ಕಳಸಣ್ಣವರ, ಪ್ರಕಾಶ ಅರಳಿ, ಶಿವಪುತ್ರ ಜಕ‌ನಾಳ, ಜಯಗುನಿ ಬಡೇಖಾನ್, ದಸ್ತಗೀರ್ ಪೈಲವಾನ್, ಜಾಕೀರ್ ನದಾಫ್, ಅಪ್ಜಲ್ ಖತೀಬ್, ಶಬ್ಬೀರ್ ಮುಜಾವರ್, ಪುಟ್ಟು ಖಾನಾಪುರೆ, ರಾಜು ತೇಲಿ, ರಾಜುಗೌಡ ಪಾಟೀಲ, ಬಾಬು ಜಮಖಂಡಿ ಮುಂತಾದವರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article