ಸೇನೆಯಲ್ಲಿ ಹೋರಾಡುತ್ತಿರುವ ಎಲ್ಲ ಭಾರತೀಯರ ಬಿಡುಗಡೆಗೆ ರಷ್ಯಾ ಸಮ್ಮತಿ

Ravi Talawar
ಸೇನೆಯಲ್ಲಿ ಹೋರಾಡುತ್ತಿರುವ ಎಲ್ಲ ಭಾರತೀಯರ ಬಿಡುಗಡೆಗೆ ರಷ್ಯಾ ಸಮ್ಮತಿ
WhatsApp Group Join Now
Telegram Group Join Now

ನವದೆಹಲಿ/ಮಾಸ್ಕೋ: ಉಕ್ರೇನ್‌ನಲ್ಲಿ ರಷ್ಯಾ ಸೇನೆಗಾಗಿ ಹೋರಾಡುತ್ತಿರುವ ಎಲ್ಲ ಭಾರತೀಯರನ್ನು ಬಿಡುಗಡೆ ಮಾಡಲು ಮತ್ತು ವಾಪಸ್ ಕಳುಹಿಸಲು ರಷ್ಯಾ ನಿರ್ಧರಿಸಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸ್ಕೋ ಭೇಟಿಯ ಸಂದರ್ಭದಲ್ಲಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದ ನಂತರ ಈ ಮಹತ್ವದ ಬೆಳವಣಿಗೆ ನಡೆದಿದೆ.

ಎರಡು ದಿನಗಳ ಭೇಟಿಗಾಗಿ ಮಾಸ್ಕೋದಲ್ಲಿರುವ ಪ್ರಧಾನಿ ಮೋದಿ ಸೋಮವಾರ ಸಂಜೆ ಪುಟಿನ್ ಆಯೋಜಿಸಿದ್ದ ಖಾಸಗಿ ಔತಣಕೂಟದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು.

ದೊಡ್ಡ ಮೊತ್ತದ ಸಂಬಳದ ಕೆಲಸ ಕೊಡಿಸುವುದಾಗಿ ಹೇಳಿದ ಏಜೆಂಟ್​ಗಳ ಮಾತನ್ನು ನಂಬಿ ಕನಿಷ್ಠ ಎರಡು ಡಜನ್ ಭಾರತೀಯರು ರಷ್ಯಾಗೆ ಹೋಗಿದ್ದರು. ಆದರೆ ರಷ್ಯಾದಲ್ಲಿ ಅವರನ್ನು ಸೇನೆಗೆ ಸೇರಿಸಿ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಹೋರಾಡಲು ನಿಯೋಜಿಸಲಾಗಿದೆ. ಏತನ್ಮಧ್ಯೆ, ರಷ್ಯಾದಲ್ಲಿ ಸಿಲುಕಿರುವ ಭಾರತೀಯರನ್ನು ಶೀಘ್ರವಾಗಿ ಮರಳಿ ಕರೆತರಲು ಭಾರತ ಸರ್ಕಾರವು ರಷ್ಯಾದ ಅಧಿಕಾರಿಗಳೊಂದಿಗೆ ಮುತುವರ್ಜಿಯಿಂದ ಮಾತುಕತೆ ನಡೆಸುತ್ತಿದೆ ಎಂದು ಮಾರ್ಚ್​​ನಲ್ಲಿ ಸರ್ಕಾರ ಹೇಳಿತ್ತು.

ವರದಿಗಳ ಪ್ರಕಾರ, ಯುದ್ಧದಲ್ಲಿ ನಾಲ್ವರು ಭಾರತೀಯರು ಸಾವನ್ನಪ್ಪಿದ್ದಾರೆ ಹಾಗೂ 10 ಮಂದಿ ದೇಶಕ್ಕೆ ಮರಳಿದ್ದಾರೆ. ಸುಮಾರು 35 ರಿಂದ 40 ಭಾರತೀಯರು ಇನ್ನೂ ರಷ್ಯಾದಲ್ಲಿ ಸಿಲುಕಿದ್ದಾರೆ ಎಂದು ನಂಬಲಾಗಿದೆ. ಉಕ್ರೇನ್ ಯುದ್ಧದಲ್ಲಿ ರಷ್ಯಾದ ಪರವಾಗಿ ಹೋರಾಡುತ್ತಿರುವ ಭಾರತೀಯರ ಸ್ಥಿತಿಯ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ.

WhatsApp Group Join Now
Telegram Group Join Now
Share This Article