ಬಳ್ಳಾರಿ, ಏ. 11: ಅಲ್ ಇಂಡಿಯಾ ಕಿಸಾನ್ ಸಭಾ (A.I.K.S) ಸಂಸ್ಥೆಯ 90ನೇ ವರ್ಷದ ಸಂಸ್ಥಾಪನಾ ದಿನಾಚರಣೆಯನ್ನು ತಾಲೂಕಿನ ಕುರೇಕುಪ್ಪ ಗ್ರಾಮದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಕುರೇಕುಪ್ಪ ಗ್ರಾಮ ಘಟಕದ ಗೌರವಾಧ್ಯಕ್ಷ ಎನ್. ದೇವಣ್ಣ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಜಿ. ಪಂಪನಗೌಡ ಮಾತನಾಡಿ, ಅಲ್ ಇಂಡಿಯಾ ಕಿಸಾನ್ ಸಭಾ 90 ವರ್ಷಗಳನ್ನು ಪೂರೈಸಿರುವುದು ಹೆಮ್ಮೆಯ ಸಂಗತಿ ಎಂದರು.
ಇಂದಿನ ಕಾರ್ಪೊರೇಟ್ ಪ್ರಭುತ್ವಗಳು ರೈತ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿವೆ ಎಂದು ಆರೋಪಿಸಿದ ಅವರು, ರೈತರ ಭೂಮಿ ಹಕ್ಕು ಕಸಿಯಲು ಕಾರ್ಪೊರೇಟ್ ಶಕ್ತಿಗಳು ಹುನ್ನಾರ ನಡೆಸುತ್ತಿವೆ ಎಂದು ಹೇಳಿದರು. ರೈತರಿಗೆ ಸಮರ್ಪಕ ಬೆಂಬಲ ಬೆಲೆ ನೀಡಬೇಕು ಹಾಗೂ ಬಲವಂತದ ಭೂ ಸ್ವಾಧೀನವನ್ನು ತಕ್ಷಣ ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.
ಕುಡುತಿನಿ ಪ್ರದೇಶದ ಭೂ ಸಂತ್ರಸ್ತರಿಗೆ ನ್ಯಾಯಯುತ ಭೂ ಪರಿಹಾರ ನೀಡಬೇಕು, ಇಲ್ಲವಾದರೆ ರೈತರಿಗೆ ಅವರ ಭೂಮಿಯನ್ನು ಹಿಂತಿರುಗಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಸಿ.ಪಿ.ಐ.(ಎಂ) ಪಕ್ಷದ ತಾಲೂಕು ಕಾರ್ಯದರ್ಶಿ ಎ. ಸ್ವಾಮಿ ಸೇರಿದಂತೆ ಶಿವರುದ್ರಗೌಡ, ಪಂಪನಗೌಡ, ಮಹಾಂತೇಶ್, ಸಿದ್ದೇಶ್, ವೀರಭದ್ರಸ್ವಾಮಿ, ಕೆ. ಬಸವರಾಜ, ಯು. ಅಂಜಿನಪ್ಪ, ತಿಪ್ಪೇಸ್ವಾಮಿ, ಕೆ. ಸಿದ್ದಪ್ಪ ಸೇರಿದಂತೆ ಗ್ರಾಮದ ಅನೇಕ ರೈತರು ಭಾಗವಹಿಸಿದ್ದರು.


