ರಾಮದುರ್ಗ: ಕಚೇರಿಗಳೆಂದರೆ ಸರಕಾರದ ಯೋಜನೆಗಳನ್ನು ರೈತರಿಗೆ ಹಾಗೂ ಸಾರ್ವಜನಿಕರಿಗೆ ತಲುಪಿಸುವ ಕೇಂದ್ರ. ಅಂತಹ ಕೇಂದ್ರಗಳು ಸುರಕ್ಷಿತವಾಗಿರುವದು ಅವಶ್ಯಕ. ಆದ್ದರಿಂದ ಹಳೆಯ ಕಟ್ಟಡಕ್ಕೆ ಮುಕ್ತಿ ನೀಡಿ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಸುರಕ್ಷಿತ ಕೆಲಸಕ್ಕೆ ಹೊಸ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದ ಪಕ್ಕದಲ್ಲಿರುವ ತೋಟಗಾರಿಕೆ ಇಲಾಖೆಯ ಕಚೇರಿ ಆವರಣದಲ್ಲಿ ೪೦ ಲಕ್ಷ ಅನುದಾನದಲ್ಲಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಹೊಸ ಕಚೇರಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೇರವೆರಿಸಿ ಅವರು ಮಾತನಾಡಿದರು.
ಈಗಿರುವ ಕಟ್ಟಡ ಹಳೆಯದಾಗಿದ್ದು, ಮಳೆ ಬಂದಾಗ ಸೋರಿ ಕಚೇರಿ ಸಿಬ್ಬಂದಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ಅಲ್ಲದೇ ಜವಳು ಹಿಡಿದು ಕಚೇರಿಯ ಮುಂದೆ ನೀರು ಸಂಗ್ರಹವಾಗಿ ಕಚೇರಿಗೆ ಬರುವ ರೈತರಿಗೆ ಹಾಗೂ ಇಲಾಖೆಯ ಸಿಬ್ಬಂದಿಗಳಿಗೆ ತೊಂದರೆ ಆಗುತ್ತಿರುವದನ್ನು ಅರಿತು ನೂತನ ಕಚೇರಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಲಾಯಿತು ಎಂದು ಹೇಳಿದರು.
ಕಟ್ಟಡ ನಿರ್ಮಾಣದ ಗುತ್ತಿಗೆ ಪಡೆದ ಎಜೇನ್ಸಿಯವರು ಗುಣಮಟ್ಟದಿಂದ ಕಟ್ಟಡ ನಿರ್ಮಿಸಬೇಕು. ಇಲ್ಲಿನ ಅಧಿಕಾರಿಗಳು ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ನಿಗಾವಹಿಸಿ ಗುಣಮಟ್ಟ ಕಾಪಾಡುವಲ್ಲಿ ಮುಂದಾಗಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಬಿ. ರಂಗನಗೌಡ್ರ, ಯುವ ಮುಖಂಡ ಕೃಷ್ಣಗೌಡ ಪಾಟೀಲ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಪ್ರಕಾಶ ಮುಗಳಖೋಡ, ಇತರ ಅಧಿಕಾರಿಗಳಾದ ಶಿವಾನಂದ ಕೊಪ್ಪದ, ಬಸವರಾಜ ಸಿಂಪಿ, ಹನಮಂತ ಹುಕ್ಕೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


