ರಾಮದುರ್ಗ: ಸಂಸ್ಥಾನಿಕರ ಕಾಲದಿಂದಲೂ ನಡೆದುಕೊಂಡು ಬಂದಿರುವ ಪಟ್ಟಣದ ಶ್ರೀವೆಂಕಟೇಶ್ವರ ರಥೋತ್ಸವ ಶುಕ್ರವಾರ ಬೆಳಿಗ್ಗೆ ೯.೩೦ ಗಂಟೆಗೆ ಸಹಸ್ರಾರು ಭಕ್ತರ ಹರ್ಷೋದ್ಘಾರದ ಮಧ್ಯ ಅತ್ಯಂತ ವೈಭವಯುವತಾಗಿ ಜರುಗಿತು.
ನಗರದ ಅರಸು ಮನೆತನದ ಭಾವೆ ಕುಟುಂಬದವರು ಈ ಜಾತ್ರೆಯನ್ನು ಅತ್ಯಂತ ವೈಭವದೊಂದಿಗೆ ನಡೆಸಿಕೊಂಡು ಬಂದಿದ್ದು, ಈ ಭಾಗದಲ್ಲಿಯೇ ಅತ್ಯಂತ ಪ್ರಖ್ಯಾತಿಯನ್ನು ಪಡೆದುಕೊಂಡಿದೆ.
ಮಲಪ್ರಭೆಯ ನದಿ ತೀರದಲ್ಲಿರುವ ಭವ್ಯ ವೇಂಕಟೇಶ್ವರ ದೇವಸ್ಥಾನ ದಿಂದ ಎಡಕ್ಕೆ ಏರುಮುಖವಾಗಿ ರಥವನ್ನು ಬೆಳಗಿನ ಸಮಯದಲ್ಲಿ ಎಳೆಯುತ್ತಿರುವದು ಒಂದು ವಿಶೇಷ.
ರಥವು ತೇರಬಜಾರದಲ್ಲಿರುವ ಹನಮಂತ ದೇವಸ್ಥಾನದ ವರಗೆ ಬಂದೂ ಮರಳುವಾಗ ಸ್ಥಳೀಯ ವಡ್ಡರ ಕೋಮಿನ ಜನರು ರಥದ ಕಲ್ಲಿನ ಗಾಲಿಗಳಿಗೆ “ಸನ್ನೆ ಗೋಲು’ ಹಾಕಿ ರಥವನ್ನು ಸಂಪೂರ್ಣ ಹಿಮ್ಮಖವಾಗಿ ತಿರುಗಿಸುವ ಕಾರ್ಯ ಅತ್ಯಂತ ಸಾಹಸಮಯವಾಗಿತ್ತು.
ಅತ್ಯಂತ ಐತಿಹಾಸಿಕ ಹಿನ್ನಲೆವುಳ್ಳ ಈ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಳ್ಳುವದು ಒಂದು ವಿಶೇಷ. ಈ ಜಾತ್ರೆ ಬಂತೆಂದರೆ ಸಾಕು ಪಟ್ಟಣದ ಜನತೆ ತಮ್ಮೆಲ್ಲಾ ಬಂಧು ಬಳಗವನ್ನು ಕರೆಯಿಸುವದು ಇಂದಿಗೂ ಕಾಣ ಸಿಗುತ್ತದೆ.
ತಂಪು ಪಾನಿಯ ನೀಡಿದ ಸಂಘ ಸಂಸ್ಥೆಗಳು:
ಬಿಸಲಿನ ದಗೆಯನ್ನು ಲೆಕ್ಕಿಸದೆ ಜಾತ್ರೆಗೆ ಬರುವಂತ ಭಕ್ತಾಧಿಗಳಿಗೆ ಪಟ್ಟಣದಲ್ಲಿನ ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ವಿವಿಧ ಸಮುದಾಯದ ಮುಖಂಡರು ತಂಪಾದ ಪಾನಿಯಗಳನ್ನು ನೀಡುವ ಮೂಲಕ ಬರುವ ಭಕ್ತಾಧಿಗಳ ಸೇವಾ ಕಾರ್ಯದಲ್ಲಿ ತೊಡಗಿರುವದು ಕಂಡುಬಂದಿತು.
ಗಣ್ಯರ ಭೇಟಿ:
ಜಾತ್ರಾ ಮಹೋತ್ಸವ ಅಂಗವಾಗಿ ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ, ಮಾಜಿ ಶಾಸಕ ಹಾಗೂ ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಹಾದೇವಪ್ಪ ಯಾದವಾಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲಣ್ಣ ಯಾದವಾಡ, ಬಿಜೆಪಿ ಮಂಡಲ ಅಧ್ಯಕ್ಷ ಡಾ| ಕೆ.ವಿ. ಪಾಟೀಲ ಸೇರಿದಂತೆ ವಿವಿಧ ಮುಖಂಡರು ಹಾಗೂ ಗಣ್ಯರು ವೆಂಕಟೇಶ್ವರ ದೇವರಿಗೆ ಪೂಜೆ ಸಲ್ಲಿಸಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ವೈಭವಯುತವಾಗಿ ಜರುಗಿದ ಶ್ರೀವೆಂಕಟೇಶ್ವರ ರಥೋತ್ಸವ


