ಇಂಡಿ: ಹೆಣ್ಣಗು ಜನಿಸಿದರೇ ಹುಣ್ಣು ಹುಟ್ಟಿದಂತೆ ಎನ್ನುವ ಕಾಲವೊಂದಿತ್ತು ಆದರೆ ಈಗ ಕಾಲ ಬದಲಾಗಿದ್ದು ಹೆಣ್ಣು ಮಗು ಜನಿಸಿದರೇ ಹೊನ್ನ ಸಿಕ್ಕಂತಾಗಿದೆ. ಹೆಣ್ಣು ಮಕ್ಕಳಿಗೆ ಧ್ವನಿ ಇಲ್ಲದ ಕಾಲವಾಗಿತ್ತು. ಹೆಣ್ಣು ಹುಟ್ಟಿದರೇ ಹೊನ್ನ ಹುಟ್ಟಿದ ಭಾವನೆಯಾಗಿ ಕಾಲ ಬದಲಾಗುತ್ತಿದ್ದು ನಮ್ಮ ಭಾರತ ದೇಶದಲ್ಲಿ ಹೆಣ್ಣಿಗೆ ಗೌರವ ಸ್ಥಾನವಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ನಗರದ ಸ್ಪಂದನಾ ಸೂಪರ್ ಸ್ಪೆಷಾಲಿಟಿ ಆಸತ್ರೆ ಆವರಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತವಾಗಿ ಹೆಣ್ಣು ಮಗು ಜನಿಸಿದರೆ ಹೆರಿಗೆ ಹಾಗೂ ಚಿಕಿತ್ಸೆ ಉಚಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳಾ ದಿನಾಚರಣೆಯಂದು ವೈದ್ಯಕೀಯ ಲೋಕದಲ್ಲಿ ಕೆಲಸ ಮಾಡುವವರು ಹಾಗೂ ಕುಟುಂಬದವರು ಹೆಣ್ಣು ಭ್ರೂಣ ಹತ್ಯೆ ಮಾಡುವುದಿಲ್ಲ ಎಂಬ ಆತ್ಮಸಾಕ್ಷಿಯಾಗಿ ದೃಢಸಂಕಲ್ಪ ಮಾಡಬೇಕು. ಅದು ಶ್ರೇಷ್ಠ ಕೆಲಸ. ಭ್ರೂಣ ಹತ್ಯೆ ತುಂಬಾ ಅಪರಾಧ. ಅದಕ್ಕೆ ಎಲ್ಲಿಯೂ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.
ಲಿಂಗ ಭೇದಷ್ಟೇ ಅಲ್ಲದೇ ಎಲ್ಲ ರಂಗದಲ್ಲಿಯೂ ಸಮಾನತೆ ಕಂಡಿರುವ ಬಸವಣ್ಣನವರು ಜನಿಸಿದ ನಾಡು ನಮ್ಮದು. ೧೨ನೇ ಶತಮಾನದಲ್ಲಿ ಬಸವಣ್ಣನವರು ಕೂಡಾ ಹೆಣ್ಣಿಗೆ ಈ ಸಮಾಜದಲ್ಲಿ ಸಮಾನತೆ ಸ್ವಾತಂತ್ರ್ಯ ಇದೆ ಎಂದು ಪ್ರತಿಪಾದಿಸಿ ನ್ಯಾಯ ದೊರಕಿಸಿಕೊಟ್ಟಿದ್ದಾರೆ. ಮುಂದುವರೆದ ರಾಷ್ಟ್ರಗಳನ್ನು ಗಮನಿಸಿದರೇ ಪ್ರೀತಿ, ವಿಶ್ವಾಸ ನಮ್ಮ ದೇಶದಲ್ಲಿ ಕಾಣುತ್ತಿವೆ ಎಂಬುವುದು ಹೆಮ್ಮೆಯ ಸಂಗತಿ. ಹಲವು ಜನ ಮಹಿಳೆಯರು ಸಮಾಜ ಮುಖಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಭಾರತೀಯರದ್ದು, ನಮ್ಮ ಪೂರ್ವಜ್ಞರು ಈ ಸಂಸ್ಕೃತಿ ನೀಡಿದ್ದಾರೆ. ತಾಯಿ, ತಂಗಿ, ಮಡದಿಯಾಗಿ ಕಾಣುತ್ತೇವೆ. ತಾಯಿಯಾದವಳು ಒಂದು ಮನೆಯಲ್ಲಿ ಜನಿಸಿ, ಇನ್ನೊಂದು ಮನೆ ಬೆಳಗುತ್ತಾಳೆ ಎಂದರೇ ಅವಳಲ್ಲಿ ಎಷ್ಟು ಶಕ್ತಿ, ತಾಳ್ಮೆ, ತ್ಯಾಗದ ಭಾವನೆ ಇದೆ. ಅದಕ್ಕಾಗಿಯೇ ನಾವೆಲ್ಲ ಮಹಿಳೆಯರನ್ನು ವಿಶೇಷವಾಗಿ ಗೌರವಿಸುವ ಸಂಸ್ಕೃತಿ ಹೊಂದಿದವರಾಗಿದ್ದೇವೆ ಎಂದರು.
ಸ್ಪಂದನಾ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಲಕ್ಷ್ಮೀಕಾಂತ ಮೇತ್ರಿ ಮಾತನಾಡಿ ಸ್ಪಂದನಾ ಆಸ್ಪತ್ರೆಯ ಎಲ್ಲ ತರಹದ ಚಿಕಿತ್ಸೆ ಇದ್ದು, ಇದರ ಸದುಪಯೋಗ ಇಂಡಿ ತಾಲೂಕಿನ ಜನರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಗುರುಣಾಪೂರ ಆಶ್ರಮದ ಯೋಗೇಶ್ವರಿ ಅಮ್ಮನವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಡಾ.ಪ್ರೀತಿ ಕೊಳೆಕರ, ಸ್ಪಂದನಾ ಆಸ್ಪತ್ರೆ ಆಡಳಿತ ಮಂಡಳಿ ಅಧ್ಯಕ್ಷ ಭೀಮಾಶಂಕರ ಮುರಗುಂಡಿ ಮಾತನಾಡಿದರು.
ಈ ಸಂದರ್ಭದಲ್ಲಿ ರಾಜೇಶ್ವರಿ ಕ್ಷತ್ರಿ, ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಅಜೀತ ಧನಶೆಟ್ಟಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ರಾವೂರ, ಸರ್ಕಾರಿ ಆರೋಗ್ಯ ವೈದ್ಯಾಧಿಕಾರಿ ಡಾ.ರಾಜೇಶ ಕೋಳೆಕರ, ಡಾ.ಐಶ್ವರ್ಯ ಹೊನವಾಡ ಡಾ.ರಮೇಶ ಪೂಜಾರಿ, ಡಾ.ಮಯೂರಿ ಧನಶೆಟ್ಟಿ, ಸಂಗಮೇಶ ಕಕ್ಕಳಮೇಲಿ, ಯಾಸಿನ್ ಅರಬ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


