ರಾಮದುರ್ಗ: ಅತಿಥಿ ಉಪನ್ಯಾಸಕರ ನೈಜತೆ ವರದಿಗೆ ಕಾಲೇಜು ಶಿಕ್ಷಣ ಇಲಾಖೆಯೇ ಹಣವನ್ನು ಭರಿಸಬೇಕು ಎಂದು ಒತ್ತಾಯಿಸಿ ಪಟ್ಟಣದ ಶ್ರೀಮತಿ ಐ.ಎಸ್. ಯಾದವಾಡ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಪ್ರಾಚಾರ್ಯ ಡಾ| ಎಂ.ಡಿ. ಕಮತಗಿ ಅವರ ಮೂಲಕ ಬೆಂಗಳೂರಿನ ತಾಂತ್ರಿಕ ಮತ್ತು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ| ರಾಜು ಕಂಬಾರ, ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ೨೦೨೫-೨೬ ನೇ ಸಾಲಿನಲ್ಲಿ ಆಯ್ಕೆಗೊಂಡ ಅತಿಥಿ ಉಪನ್ಯಾಸಕರ ಪ್ರಮಾಣ ಪತ್ರಗಳ ನೈಜತೆ ವರದಿಗೆ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತಾಲಯವೇ ಹಣವನ್ನು ಭರಿಸಬೇಕು. ಈಗಾಗಲೇ ಅತಿಥಿ ಉಪನ್ಯಾಸಕರ ಪ್ರಮಾಣ ಪತ್ರಗಳ ನೈಜತೆ ವರದಿಯನ್ನು ತರಿಸಿಕೊಳ್ಳಲು ರಾಜ್ಯದ ಎಲ್ಲಾ ಕಾಲೇಜುಗಳ ಪ್ರಾಚಾರ್ಯರಿಗೆ ಆಯುಕ್ತರು ತಿಳಿಸಿದ್ದು, ಆಯುಕ್ತರ ಆದೇಶದಂತೆ ಎಲ್ಲಾ ಕಾಲೇಜುಗಳ ಪ್ರಾಚಾರ್ಯರು ಅತಿಥಿ ಉಪನ್ಯಾಸಕರ ಶೈಕ್ಷಣಿಕ ಪ್ರಮಾಣ ಪತ್ರಗಳ ನೈಜತೆ ವರದಿಯನ್ನು ನಮ್ಮಿಂದಲೇ ಹಣವನ್ನು ಭರಿಸಬೇಕೆಂದು ಹೇಳುತ್ತಿದ್ದಾರೆ ಎಂದರು.
ಕಳೆದ ೨-೩ ತಿಂಗಳಿಂದ ಅತಿಥಿ ಉಪನ್ಯಾಸಕರಿಗೆ ಉದ್ಯೋಗವಿಲ್ಲದೆ ಜೀವನವನ್ನು ನಿರ್ವಹಿಸುವುದೇ ಕಷ್ಟವಾಗಿದೆ. ತಂದೆ-ತಾಯಿಗಳ ಪಾಲನೆಯೊಂದಿಗೆ, ಮಕ್ಕಳಿಗೆ ಶಿಕ್ಷಣ ಕಲಿಸುವುದು ತುಂಬಾ ತೊಂದರೆಯಾಗಿದೆ. ಇಂತಹ ಸಂದರ್ಭದಲ್ಲಿ ನಮ್ಮ ಪ್ರಮಾಣ ಪತ್ರಗಳ ನೈಜತೆ ವರದಿಗೆ ವಿಶ್ವವಿದ್ಯಾಲಯಗಳಿಗೆ ಹಣವನ್ನು ಭರಿಸಲು ಸಾಧ್ಯವಾಗುವುದಿಲ್ಲ. ನಮ್ಮ ಪ್ರಮಾಣ ಪತ್ರಗಳ ನೈಜತೆ ವರದಿಗೆ ತಾಂತ್ರಿಕ ಮತ್ತು ಕಾಲೇಜು ಶಿಕ್ಷಣ ಇಲಾಖೆಯೇ ಶುಲ್ಕವನ್ನು ಭರಿಸಬೇಕೆಂದು ಒತ್ತಾಯಿಸಿದ ಅವರು, ಅತಿಥಿ ಉಪನ್ಯಾಸಕರ ಪ್ರಮಾಣ ಪತ್ರಗಳ ನೈಜತೆ ವರದಿ ವಿಳಂಬವಾಗಿದೆ ಎಂಬ ಕಾರಣವೊಡ್ಡಿ ನಮ್ಮ ಅಕ್ಟೋಬರ್ ತಿಂಗಳ ಗೌರಧನವನ್ನು ಯಾವುದೇ ಕಾರಣಕ್ಕೂ ತಡೆಹಿಡಿಯಬಾರದು. ಮೊದಲೇ ನಾವು ಆರ್ಥಿಕ ಸಂಕಷ್ಟದಲ್ಲಿ ಇದ್ದೇವೆ. ಒಂದು ವೇಳೆ ನಮ್ಮ ಗೌರವಧನ ತಡೆ ಹಿಡಿದರೆ, ರಾಜ್ಯಾದ್ಯಂತ ಎಲ್ಲಾ ಅತಿಥಿ ಉಪನ್ಯಾಸಕರು ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಮನವಿ ಮೂಲಕ ಆಗ್ರಹಿಸಿ ನೈಜತೆ ವರದಿಗೆ ತಾವೇ ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸಕರ ಹಣವನ್ನು ಭರಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಾದ ಯಲ್ಲಪ್ಪ ಕುರಿ, ವಿ.ಎಸ್. ಲಕ್ಕನಗೌಡ್ರ, ಎಸ್.ಜಿ. ಚುಳಕಿ, ಎಂ.ಎ. ನಕಾರ್ಚಿ, ರಮೇಶ್ ಹತ್ತಿ, ಡಾ. ವೈ.ಎಸ್. ಹೊಸಮನಿ, ಪರಶುರಾಮ ಮುಕಾರಿ, ಐ.ಆರ್. ಜಕಾತಿ, ಸಂಜು ಶೆಟ್ಟರ್, ವಸಂತ ಅರಳೇಶ್ವರ್, ವಿಜಯ ಶೆಟ್ಟಿ, ಮಾರುತಿ ಸುಳಿಕೇರಿ, ಸೋಮೇಶ್ ಹೊಸಪೇಟಿ, ಸಂತೋಷ ಬ್ಯಾಡಗಿ, ಕೆ.ಎಸ್. ಕಂಬಾರ, ಎಂ.ಎಸ್. ಭಾರಾಗನಿ, ಮಂಜುಳಾ ಬದಾಮಿ, ಡಾ. ಮಹಾಲಕ್ಷ್ಮಿ ಭೂಶಿ, ಮಾಲಾ ಹಾಲೋಳ್ಳಿ, ಕವಿತಾ ರಂಗನ್ನವರ, ಶೋಭಾ ಹಾಲೋಳ್ಳಿ, ಎಸ್.ಜಿ. ಕಟ್ಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


