ರಾಮದುರ್ಗ: ಮಹರ್ಷಿ ವಾಲ್ಮೀಕಿ ಅವರು ತಮ್ಮ ಗ್ರಂಥಗಳ ಮೂಲಕ ಸಾರಿದ ಮಾನವೀಯ ಮೌಲ್ಯ ಹಾಗೂ ಅವರ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳುವದರ ಜೊತೆಗೆ ತಮ್ಮ ಮುಂದಿನ ಪೀಳಿಗೆಗೆ ತಿಳಿಸುವ ಅಗತ್ಯತೆ ಇದೆ ಎಂದು ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಸೋಮವಾರ ತಾಲೂಕು ಆಡಳಿತ ಹಾಗೂ ವಾಲ್ಮೀಕಿ ಸಮಾಜದ ಆಶ್ರಯದಲ್ಲಿ ಹಮ್ಮಿಕೊಂಡ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸತ್ಸಂಗ, ಸದ್ವಿಚಾರ ಮೂಲಕ ಪರಿವರ್ತನೆಯಾದ ಮಹರ್ಷಿ ವಾಲ್ಮೀಕಿ ಅವರು ಮಹಾನ್ ಗ್ರಂಥವನ್ನು ರಚಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಹೆಚ್ಚು ಯುವ ಸಮುದಾಯವನ್ನು ಹೊಂದಿದ ವಾಲ್ಮೀಕಿ ಸಮಾಜ ಶರಣರಶಯಗಳನ್ನು ಈಡೇರಿಸುವಲ್ಲಿ ಸಮಾಜದ ಮುಖಂಡರೊಂದಿಗೆ ಶ್ರಮಿಸಬೇಕು ಎಂದು ಹೇಳಿದರು.
ಕಟಕೋಳ ಸರಕಾರಿ ಪ್ರೌಢ ಶಾಲೆ ಶಿಕ್ಷಕ ಎಸ್.ಎಂ. ದಿವಟಗಿ ಅವರು ವಿಶೇಷ ಉಪನ್ಯಾಸ ನೀಡುವ ಮೂಲಕ, ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣ ಇಲ್ಲದೇ ಯಾವುದೇ ಕ್ಷೇತ್ರದಲ್ಲಿ ಮುನ್ನಡೆಯಲು ಸಾಧ್ಯವಿಲ್ಲ. ಎಲ್ಲದಕ್ಕೂ ಶಿಕ್ಷಣವೆ ಪ್ರಧಾನವಾಗಿದ್ದು, ಸಮಾಜ ಸುಧಾರಣೆಗೆ ಶಿಕ್ಷಣ ಅತೀ ಅವಷ್ಯವಾಗಿದೆ. ಸರಕಾರ ವಾಲ್ಮೀಕಿ ಸಮಾಜಕ್ಕೆ ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸದ್ಭಳಿಕೆ ಮಾಡಿಕೊಂಡು ಸಮಾಜ ಅಭಿವೃದ್ಧಿ ಹೊಂದುವಂತೆ ಕರೆ ನೀಡಿದರು.
ವಾಲ್ಮೀಕಿ ಸಮಾಜದ ತಾಲೂಕಾಧ್ಯಕ್ಷ ಪ್ರಕಾಶ ತಳವಾರ, ಗೌರವಾಧ್ಯಕ್ಷ ಲಕ್ಷ್ಮೀನಾರಾಯಣಸ್ವಾಮಿ ಇನಾಮದಾರ, ಉಪಾಧ್ಯಕ್ಷ ಬಸವರಾಜ ಪೂಜೇರ, ಕಾರ್ಯದರ್ಶಿ ಮಂಜುನಾಥ ಹನಸಿ, ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ನಿರ್ದೇಶಕ ಭೀಮಪ್ಪ ಬಸಿಡೋಣಿ, ಮುಖಂಡರಾದ ಕಾಳಪ್ಪ ಹೂವನ್ನವರ, ಮಾರುತಿ ಪೂಜೇರ, ಚುರಚಪ್ಪ ಮಡ್ಡಿನಾಯ್ಕರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹನಮಂತ ವಕ್ಕುಂದ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿಜಯಕುಮಾರ, ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮೆರವಣಿಗೆಗೆ ಚಾಲನೆ:
ಮಹರ್ಷಿ ವಾಲ್ಮೀಕಿ ಅವರ ಜಯಂತ್ಯೋತ್ಸವ ಪ್ರಯುಕ್ತ ಪಟ್ಟಣದ ತಾಲೂಕು ಪಂಚಾಯತ ಆವರಣದಿಂದ ಶ್ರೀ ಮಹರ್ಷಿ ವಾಲ್ಮೀಕಿ ಅವರ ಆಳೆತ್ತರದ ಭಾವಚಿತ್ರದ ಮೆರವಣಿಗೆಗೆ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಹಾಗೂ ವಿರಕ್ತಮಠ ಟ್ರಸ್ಟ್ ಅಧ್ಯಕ್ಷ ಪ್ರದೀಪ ಪಟ್ಟಣ ಚಾಲನೆ ನೀಡಿದರು. ಮೆರವಣಿಗೆಯು ಸುಮಂಗಲೆಯರ ಕುಂಭ ಹಾಗೂ ವಿವಿಧ ವಾಧ್ಯಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೂಲಕ ಸಂಚರಿಸಿ ಕಾರ್ಯಕ್ರಮದ ಮುಖ್ಯ ವೇದಿಕೆ ವಿದ್ಯಾಚೇತನ ಶಾಲಾ ಆವರಣದ ಗುರುಭವನಕ್ಕೆ ಆಗಮಿಸಿ ಸಮಾವೇಶಗೊಂಡಿತು.