ರಾಮದುರ್ಗ,ಅ.೧೪: ರೈತರಿಗೆ ತೊಂದರೆ ಆಗದ ರೀತಿಯಲ್ಲಿ ಪ್ಯಾರಿ ಶುಗರ್ಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಡೆದುಕೊಳ್ಳಬೇಕು. ರೈತರ ಏನೇ ಸಮಸ್ಯೆಗಳು ಬಂದರು ಅವುಗಳನ್ನು ಆಲಿಸಿ ಅವುಗಳ ಪರಿಹಾರ ಕಲ್ಪಿಸಲು ಧನಲಕ್ಷ್ಮೀ ಆಡಳಿತ ಮಂಡಳಿ ಶ್ರಮಿಸಲಿದೆ ಎಂದು ಮಾಜಿ ಶಾಸಕ ಹಾಗೂ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಹಾದೇವಪ್ಪ ಯಾದವಾಡ ಹೇಳಿದರು.ತಾಲೂಕಿನ ಖಾನಪೇಠದಲ್ಲಿ ಧನಲಕ್ಷ್ಮೀ ಸಕ್ಕರೆ (ಲಿಜ್ ಪಡೆದ ಪ್ಯಾರಿ ಶುಗರ್ಸ್) ಕಾರ್ಖಾನೆಯ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ಯಾರಿ ಶುಗರ್ಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಡಳಿತ ಮಂಡಳಿಯ ನಿರ್ದೇಶಕ ಸಲಹೆ ಹಾಗೂ ಸೂಚನೆಗಳನ್ನು ಪಾಲಿಸಬೇಕು. ರೈತರ ವಿಷಯವಾಗಿ ಅವರು ಏನೇ ಸಲಹೆ ನೀಡಿದರು ನಿರ್ಲಕ್ಷ್ಯಿಸದಂತೆ ಸೂಚನೆ ನೀಡಿದರು.ಈ ಭಾರಿ ಅತಿಯಾದ ಮಳೆಯಿಂದಾಗಿ ಹಚ್ಚು ಕಬ್ಬಿಗೆ ರೋಗ ತಗಲಿದ್ದು, ಅಂತಹ ರೈತರ ಕಬ್ಬನ್ನು ತ್ವರಿತವಾಗಿ ಪಡೆದುಕೊಳ್ಳುವಲ್ಲಿ ಮುಂದಾಗಬೇಕು. ಇನ್ನೂ ಅನೇಕ ರೈತರ ಕುಳೆ ಕಬ್ಬು ಪಡೆಯುವ ಸಂದರ್ಭದಲ್ಲಿ ಸಮಯ ಹೆಚ್ಚಿಗೆ ತೆಗೆದುಕೊಳ್ಳುತ್ತಿದ್ದು, ಲವಣಿ ಬರೆಸಿದಂತೆ ನಿಗದಿತ ಸಮಯಕ್ಕೆ ಪಡೆಯುವಲ್ಲಿ ಮುಂದಾಗಬೇಕು. ಈ ಭಾರಿಯ ಕಬ್ಬು ನುರಿಸುವ ಗುರಿಗೆ ನಮ್ಮ ಆಡಳಿತ ಮಂಡಳಿ ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
ಪ್ಯಾರಿ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ಪಿ ಶಿವಸುಬ್ರಮನಿಯನ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ೬.೫೦ ಲಕ್ಷ ಟನ್ನ ಕಬ್ಬು ನುರಿಸುವ ಗುರಿಯನ್ನು ಹೊಂದಿದ್ದು, ಅದಕ್ಕೆ ಆಡಳಿತ ಮಂಡಳಿ ಹಾಗೂ ರೈತರು ಸಹಕಾರ ನೀಡಬೇಕು. ಎಫ್.ಆರ್.ಪಿ ದರ ನಿಗದಿ ಮಾಡಲಾಗುವದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ನಿರ್ದೇಶಕರಾದ ಬಸವರಾಜ ಹಿರೇರಡ್ಡಿ, ಬಿ.ಎಂ. ತುಪ್ಪದ, ಪಿ.ಎಫ್. ಪಾಟೀಲ, ಪರುತಗೌಡ ಪಾಟೀಲ, ಐ.ಎಸ್. ಹರನಟ್ಟಿ, ಎಂ.ಎಂ. ಆತಾರ, ಗೋಪಾಲರಡ್ಡಿ ಸಂಶಿ, ಚಂದ್ರು ರಜಪೂತ, ಅನ್ನಪೂರ್ಣಾ ಪಾಟೀಲ, ಶಶಿಕಲಾ ಸೋಮಗೊಂಡ, ಶಿವಾನಂದ ಮುಷ್ಠಿಗೇರಿ, ಈರಣ್ಣ ಕಾಮಣ್ಣವರ, ಭೀಮಪ್ಪ ಬಸಿಡೋಣಿ, ಬಿ.ಸೆ. ಸಿದರಡ್ಡಿ, ಪರಪ್ಪ ಜಂಗವಾಡ, ಪ್ಯಾರಿ ಶುಗರ್ಸ್ ಉಪಪ್ರಧಾನ ವ್ಯವಸ್ಥಾಪಕ ರಮೇಶ ಗಂಗರಡ್ಡಿ, ವಲಯ ವ್ಯವಸ್ಥಾಪಕ ಕೆ.ಎಚ್. ಬೂದಿ ಸೇರಿದಂತೆ ರೈತರು, ಪ್ಯಾರಿ ಶುಗರ್ಸ್ ಸಿಬ್ಬಂದಿ ಉಪಸ್ಥಿತರಿದ್ದರು.
ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ
