ರಾಮದುರ್ಗ: ಇಂದಿನ ಯಾವುದೇ ಉದ್ಯೋಗದಲ್ಲಿ ತೋಡಗಬೇಕಾದರೇ ಪ್ರಮುಖವಾಗಿ ಕಂಪ್ಯೂಟರ್ನ ಜ್ಞಾನದ ಅವಶ್ಯಕತೆ ಇದೆ. ವಿದ್ಯಾರ್ಥಿ ದಿಶೆಯಲ್ಲಿ ಪ್ರತಿಯೊಬ್ಬರು ಕಂಪ್ಯೂಟರ್ ಸಾಮಾನ್ಯ ಜ್ಞಾನ ಪಡೆದು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಶ್ರೀಮತಿ ಐ.ಎಸ್. ಯಾದವಾಡ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಹಾಯಕ ಪ್ರಾದ್ಯಾಪಕ ಪ್ರೊ. ಪವನ ಮಹೇಂದ್ರಕರ ಹೇಳಿದರು.
ಪಟ್ಟಣದ ತಾ.ಪಂ. ಸಭಾ ಭವನದಲ್ಲಿ ಗುರುವಾರ ಕಿಯೋನಿಕ್ಸ್ ಸಂಸ್ಥೆಯಿಂದ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಏರ್ಪಡಿಸಿದ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಂಗಳೂರು ಐಟಿ ಬಿಟಿ ಕ್ಷೇತ್ರದ ಪರಿಕಲ್ಪನೆಗಿಂತಲೂ ಮೊದಲು ಕಿಯೋನಿಕ್ಸ್ ಕಂಪ್ಯೂಟರ್ ಸಂಸ್ಥೆ ೧೯೭೬ ರಲ್ಲಿ ಸ್ಥಾಪಿತವಾಗಿದೆ. ಇಂದು ಹಲವು ಮಹತ್ತರ ಬದಲಾವಣೆಯತ್ತ ದಾಪುಗಾಲು ಇಟ್ಟಿದೆ. ಈ ಶಿಕ್ಷಣ ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಯಾವುದೇ ವೃತ್ತಿಯಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಾರೆ ಎಂದು ಹೇಳಿದರು.
ಸಿ.ಎಸ್. ಬೆಂಬಳಗಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪ್ರಕಾಶ ತೆಗ್ಗಿಹಳ್ಳಿ ಮಾತನಾಡಿ, ಜಾಗತೀಕರಣದ ನಂತರದ ದಿನಗಳಲ್ಲಿ ಆಂಗ್ಲ ಭಾಷೆ ಮತ್ತು ಕಂಪ್ಯೂಟರ್ ಜ್ಞಾನದ ಅವಶ್ಯಕತೆ ಹೆಚ್ಚಾಗಿದ್ದು, ಉನ್ನತ ಶ್ರೇಣಿಯ ಕಿಯೋನಿಕ್ಸ್ ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಕೇವಲ ತರಬೇತಿ ಪಡೆದ ಪ್ರಮಾಣ ಪತ್ರ ಮುಖ್ಯವಲ್ಲ. ಅದರ ಜೊತೆಗೆ ಕೌಶಲ್ಯಾಭಿವೃದ್ಧಿಯನ್ನು ವೃದ್ಧಿಸಿಕೊಂಡಲ್ಲಿ ಉನ್ನತ ಸ್ಥಾನ ತಲುಪಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕ ಮಲ್ಲಿಕಾರ್ಜುನರಡ್ಡಿ ಗೊಂದಿ ಅವರು, ಸಾಮಾಜಿಕ ಸುರಕ್ಷಾ ವಿಮಾ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಆನಂದ ಕಂಪ್ಯೂಟರ್ ಸಂಸ್ಥೆಯ ಅಧ್ಯಕ್ಷ ಆನಂದ ಲಮಾಣಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ಉಚಿತ ಮೆಹಂದಿ ತರಬೇತಿ, ರಂಗೋಲಿ, ಗಾಯನ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಕಂಪ್ಯೂಟರ್ ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಶಿಕ್ಷಕಿ ಮಂಜುಳಾ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಧೀರ ಕಾರಬಾರಿ ಸ್ವಾಗತಿಸಿದರು. ಸ್ವಾತಿ ಹೊಸಮಠ ಪರಿಚಯಿಸಿದರು. ಜ್ಯೋತಿ ಬಂಡಾ ನಿರೂಪಿಸಿದರು. ಸಿದ್ಧಿಕಾ ಸೈಯ್ಯದ್ ವಂದಿಸಿದರು.
ಉದ್ಯೋಗದಲ್ಲಿ ತೋಡಗಬೇಕಾದರೇ ಇಂದು ಕಂಪ್ಯೂಟರ್ನ ಜ್ಞಾನ ಅವಶ್ಯಕ : ಮಹೇಂದ್ರಕರ
