ಇಂಡಿ,ಜು.೩೦ : ಇಂಡಿಯ ಶ್ರೀ ಶಾಂತೇಶ್ವರ ಮಾಧ್ಯಮಿಕ ಶಾಲೆಯಲ್ಲಿ ೧೯೯೮-೯೯ ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಕಲಿತ ವಿದ್ಯಾರ್ಥಿಗಳು ಇಂಡಿಯಲ್ಲಿ ಸೇರಿ ನಾಗರ ಪಂಚಮಿ ಹಬ್ಬವನ್ನು ಭಕ್ತಿ ಪೂರ್ವಕವಾಗಿ ಆಚರಿಸಿದರು.
ಹಬ್ಬದ ನಿಮಿತ್ಯ ಜೋಕಾಲಿ ಕಟ್ಟಿ ಆಡಿದರು. ಸಾಂಪ್ರದಾಯಕವಾಗಿ ಆಟಗಳಾದ ಕಣ್ಣಿಗೆ ಪಟ್ಟಿಕೊಂಡು ಸ್ಥಳ ಹುಡುಕುವದು, ಇಲ್ಲವೆ ವ್ಯಕ್ತಿಯನ್ನು ಮುಟ್ಟುವದು, ಮತ್ತು ಎರಡು ಕಂಬಗಳ ಮಧ್ಯೆ ಹಗ್ಗ ಕಟ್ಟಿ ಹಗ್ಗಕ್ಕೆ ಜಿಲೇಬಿ ಅಥವಾ ಬಾಳೆಹಣ್ಣು ಕಟ್ಟಿ ಅದನ್ನು ಸೈಕಲ ಮೇಲಿಂದ ಬಾಯಿಯಲ್ಲಿ ಹಿಡಿಯುವದು, ನಿಂಬೆ ಹಣ್ಣನ್ನು ಐದು, ಆರು ಏಳು ಎಸೆತಗಳಲ್ಲಿ ಇಂತಿಷ್ಟು ದೂರ ಮುಟ್ಟುವದು, ಇಲ್ಲವೆ ನಾಣ್ಯವನ್ನು ಚಿಕ್ಕ ಗುಂಡಿ ಮಾಡಿ ಅದರಲ್ಲಿ ಹಾಕುವದು ಸೇರಿದಂತೆ ಅನೇಕ ಮನರಂಜನೆ ಆಟಗಳನ್ನು ಆಡಿದರು. ಇವರಿಗೆ ಸಾರ್ವಜನಿಕರು ಸಾಥ ನೀಡಿದರು.ಚಿಣಿದಾಂಡು, ಕಣ್ಣು ಮುಚ್ಚಾಲೆ, ಗೋಟೆ, ಬಗರಿ, ಕುಂಟಾಟ, ಲಗೋರಿ, ಸುರಮನಿ ಗ್ರಾಮೀಣ ಆಟಗಳನ್ನು ತಾವು ಚಿಕ್ಕವರಿದ್ದಾಗ ಆಡಿದ ಆಟಗಳನ್ನು ಆಡಿದರು.
ಅದಲ್ಲದೆ ಮನೆಯಿಂದ ತಂದ ಖಾದ್ಯಗಳಾದ ಅಳ್ಳ, ಚೂಡಾ, ಚಕ್ಕಲಿ, ಕರದುಂಟು, ಕರ್ಚಿಕಾಯಿ, ಬೇಸನ ಉಂಡಿ, ಶಂಕರ ಪಾಳಿ, ಕಡಲೆ ಉಸುಳಿ, ಮೂಕಣಿ ಉಸಳಿ ತರಹ ತರಹ ನಾಷ್ಟಾ ಮಾಡಿದರು.
ನಂತರ ಊಟ ಸಜ್ಜೆ ರೊಟ್ಟಿ, ದಪಾಠಿ, ಬಿಳಿಜೋಳದ ರೊಟ್ಟಿ, ಶೇಂಗಾ ಹೋಳಿಗೆ, ತುಪ್ಪ, ಅಗಸಿ ಚಟ್ನಿ, ಎಣ್ಣಾಗಾಯಿ ಬದನೆಕಾಯಿ, ಕೆನೆ ಮೊಸರು, ನಿಂಬೆ ಉಪ್ಪಿಕಾಯಿ, ಹತ್ತರಕಿ ಪಲ್ಲೆ ಸವಿದರು.
ಗೆಳೆಯರ ಬಳಗದ ಬಿ.ಎಲ್.ಡಿಈ ವೈದ್ಯ ಮಹಾವಿದ್ಯಾಲಯದಲ್ಲಿ ವೈದ್ಯರಾದ ಮಂಜುನಾಥ ಕೊಟ್ಟೆನ್ನವರ, ನ್ಯಾಯವಾದಿ ರಮೇಶ ಕುಲಕರ್ಣಿ, ಗಣ್ಯ ವ್ಯಾಪಾರಿ ಶಾಂತು ಧನಶೆಟ್ಟಿ, ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿರುವ ಮುತ್ತುರಾಜ ಅಡಿಗ, ಶಾಂತು ಬಿರಾದಾರ, ಚಂದನ ಧನಪಾಲ, ಉಮೇಶ ಶಿವಯೋಗಿಮಠ, ಹಡಪದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಟರಾಜ ಗವಳಿ, ನ್ಯಾಶನಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಿಟ್ಟುಸಾಬ ಶೇಖ, ಶಿಕ್ಷಕರಾದ ದಶರಥ ಕೋರಿ, ಸುರೇಶ ಅವರಾದಿ, ಉಮೇಶ ಕುಲಕರ್ಣಿ, ನಾರಾಯಣ ಹಿಬಾರೆ, ಬಸವರಾಜ ದೇವರ, ರವಿ ವಂದಾಲ, ರಮೇಶ ಅಂಬಲಗಿ, ಪ್ರವೀಣ ಸುಲಾಖೆ, ಸರ್ವೇ ಅಧಿಕಾರಿ ರವಿ ನಾಯಕ, ಬಾನು ಪೂಜಾರಿ, ರಮೇಶ ಹಾವಿನಾಳ, ಹುಸೇನಿ ಮಕಾನದಾರ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಗೆಳೆಯರು ಪಾಲ್ಗೊಂಡು ಸಂತೋಷದಿಂದ ಹಬ್ಬದ ಸವಿ ಸವೆದರು.
ಶ್ರೀ ಶಾಂತೇಶ್ವರ ಮಾಧ್ಯಮಿಕ ಶಾಲೆಯಲ್ಲಿ ನಾಗರ ಪಂಚಮಿ ಹಬ್ಬ ಆಚರಣೆ
