ರಾಮದುರ್ಗ: ಬಡವರ ಅಂಧತ್ವ ನಿವಾರಿಸುವಲ್ಲಿ ಲಯನ್ಸ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಹುಬ್ಬಳ್ಳಿ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ವಾದಿರಾಜ ಕಟ್ಟಿ ಹೇಳಿದರು.
ಪಟ್ಟಣದ ಎಂಎಲ್ಬಿಸಿಯಲ್ಲಿರುವ ಪಿ.ಎಂ. ಪಾಲರೇಶಾ ಲಯನ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ಲಯನ್ಸ್ ಸಂಸ್ಥೆ, ಸಾರ್ವಜನಿಕ ಆಸ್ಪತ್ರೆ ಹಾಗೂ ಬೆಳಗಾವಿಯ ಅಂಧತ್ವ ನಿವಾರಣಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಣ್ಣಿನ ಪೊರೆ ಉದ್ಭವಿಸುವುದು ಸರ್ವೇ ಸಾಮಾನ್ಯ, ಅದಕ್ಕೆ ಭಯ ಪಡುವ ಅವಶ್ಯ ಇಲ್ಲ. ಸೂಕ್ತ ಚಿಕಿತ್ಸೆ ಪಡೆದಲ್ಲಿ ಪರಿಹಾರ ಸಾಧ್ಯ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಜೋತಿ ನೇತ್ರ ವಿಜ್ಞಾನ ಸಂಸ್ಥೆಯಲ್ಲಿ ನುರಿತ ವೈದರು ಲಭ್ಯರಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಸಂಸ್ಥೆ ನೂತನ ಅಧ್ಯಕ್ಷೆ ಸರಳಾ ಫತ್ತೇಪೂರ ಮಾತನಾಡಿ, ಕಳೆದ ಹತ್ತಾರು ವರ್ಷಗಳಿಂದ ಲಯನ್ ಸಂಸ್ಥೆ ಉಚಿತ ನೇತ್ರ ತಪಾಸಣಾ ಶಿಬಿರಗಳನ್ನು ಆಯೋಜಿಸಿ ಬಡ ಜನರ ಪಾಲಿನ ಆಶಾಕಿರಣವಾಗಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಶಿಬಿರದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರು ಶಿಬಿರದ ಲಾಭ ಪಡೆಯುವಂತೆ ಅವರು ಕರೆ ನೀಡಿದರು.
ಲಯನ್ಸ್ ಸಂಸ್ಥಾಪಕ ಅಧ್ಯಕ್ಷ ಆರ್.ಸಿ. ಪತ್ತೇವೂರ, ಎ.ಜಿ. ಮಳಗಲಿ, ಕಾರ್ಯದರ್ಶಿ ರಂಜನಾ ದಿಂಡಿವಾರ, ಖಜಾಂಚಿ ಡಾ. ವೈಶಾಲಿನಿ ಸಂಕನಗೌಡ್ರ, ಡಾ. ಅಪರ್ಣ ಕಕಡಿ, ಡಾ. ವೈಶಾಲಿನಿ ಫತ್ತೇಪೂರ, ಡಾ. ಸಿ.ಜಿ. ಅಗಡಿ, ಅವು ದಿಂಡಿವಾರ, ವೈ.ಬಿ. ಕಕರಡ್ಡಿ, ಬಸವರಾಜ ಗದತಗ ಸೇರಿದಂತೆ ಇತರರಿದ್ದರು.
ಲಯನ್ಸ್ ಕ್ಲಬ್ನ ಆಡಳಿತಾಧಿಕಾರಿ ವೆಂಕಟೇಶ ಹಿರೇರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರದಲ್ಲಿ ಒಟ್ಟು ೧೦೫ ಜನರ ನೇತ್ರ ತಪಾಸಣೆ, ರಕ್ತದ ಒತ್ತಡ, ಸಕ್ಕರೆ ಖಾಯಿಲೆ ತಪಾಸಣೆ ನಡೆಸಲಾಯಿತು. ೩೧ ಜನರ ನೇತ್ರ ಶಸ್ತ್ರ ಚಿಕಿತ್ಸೆಗೆ ಹುಬ್ಬಳ್ಳಿಯ ಡಾ. ಎಂ.ಎಂ. ಜೋಶಿ ಆಸ್ಪತ್ರೆಗೆ ಕಳಿಸಲಾಯಿತು. ಪ್ರೊ| ಎಸ್.ಎಂ. ಸಕ್ರಿ ನಿರೂಪಿಸಿದರು. ಬಿ.ಪಿ. ಆರಳಿಮಟ್ಟಿ ವಂದಿಸಿದರು.
ಲಯನ್ಸ್ ಸಂಸ್ಥೆಯ ಕಾರ್ಯ ಶ್ಲಾಘನೀಯ : ಕಟ್ಟಿ
