ರಾಮದುರ್ಗ: ಶತಮಾನೋತ್ಸವ ಪೂರೈಸಿದ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಉತ್ತಮ ವಾಹಿವಾಟು ನಡೆಸುವ ಮೂಲಕ ರಾಜ್ಯದಲ್ಲಿ ನಂ.೧ ಆಗಿದೆ ಎಂದು ಕೆ.ಎಂ.ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹರ್ಷವ್ಯಕ್ತಪಡಿಸಿದರು.
ಪಟ್ಟಣದ ಮರಾಠಾ ಮಂಗಲ ಕಾರ್ಯಾಲಯದಲ್ಲಿ ನಡೆದ ತಾಲೂಕಿನ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರುಗಳ ಸೌಹಾರ್ದ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುರಗೋಡದ ಮಹಾಂತ ಸ್ವಾಮೀಜಿಗಳ ಆಶೀರ್ವಾದದಿಂದ ಹಾಗೂ ಜಿಲ್ಲೆಯ ನೇಕ ದಿಗ್ಗಜರ ಶ್ರಮದ ಫಲವಾಗಿ ಬಿ.ಡಿ.ಸಿ.ಸಿ ಬ್ಯಾಂಕ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ರೈತರಿಗೆ ಗರಿಷ್ಠ ಪ್ರಮಾಣದ ಸಾಲ ನೀಡುವ ಮೂಲಕ ತನ್ನ ಹೆಜ್ಜೆ ಗುರುತನ್ನು ರಾಜ್ಯಮಟ್ಟಕ್ಕೆ ವಿಸ್ತರಿಸಿರುವ ಕಿರ್ತೀ ಇದರದಾಗಿದೆ ಎಂದು ಹೇಳಿದರು.
ಬರುವ ಅ.೧೯ ರಂದು ಬ್ಯಾಂಕಿನ ಆಡಳಿತ ಮಂಡಳಿಯ ಚುನಾವಣೆ ನಡೆಯಲಿದ್ದು, ಜಿಲ್ಲೆಯಲ್ಲಿ ಸಾಕಷ್ಟು ಶಾಸಕರು, ಸಚಿವರು ಇದ್ದಾರೆ. ಡಿ.ಸಿ.ಸಿ ಬ್ಯಾಂಕಿನಲ್ಲಿ ನಮಗೂ ಅಧಿಕಾರ ಬೇಕೆ ಎಂದರೆ ಹೇಗೆ ಸಾಧ್ಯ. ಶ್ರದ್ಧೆ, ನಿಶ್ವಾರ್ಥ ಹಾಗೂ ಪ್ರಾಮಾಣಿಕ ಅಭ್ಯರ್ಥಿಗಳನ್ನು ಒಮ್ಮತದಿಂದ ಚುನಾವಣೆ ಕಣಕ್ಕೆ ಇಳಿಸಲಿದ್ದು, ಎಲ್ಲರೂ ಒಗ್ಗೂಡಿ ಅಭ್ಯರ್ಥಿಗಳ ಆಯ್ಕೆಗೆ ಶ್ರಮಿಸಬೇಕು. ಮುಂದಿನ ದಿನಗಳಲ್ಲಿ ಪ್ರತಿ ತಾಲೂಕಿನಲ್ಲಿ ಅಗತ್ಯ ಇರುವ ಭಾಗದಲ್ಲಿ ಹೊಸ ಪಿ.ಕೆ.ಪಿ.ಎಸ್ ಸ್ಥಾಪನೆ ಮಾಡುವದಾಗಿ ಅವರು ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರು ಮಾತನಾಡಿ, ಬಿ.ಡಿ.ಸಿ.ಸಿ ಬ್ಯಾಂಕ ೩೪೦೦ ಕೋಟಿ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ರೈತರಿಗೆ ನೀಡಿದೆ. ತಾಲೂಕಿಗೆ ಹೆಚ್ಚಿನ ಸಾಲ ತರುವಲ್ಲಿ ನಿರ್ದೇಶಕ ಎಸ್.ಎಸ್.ಢವಣ ಶ್ರಮಿಸಿದ್ದಾರೆ. ಬರುವ ಚುನಾವಣೆಯಲ್ಲಿ ಯಾರೇ ಅಭ್ಯರ್ಥಿಯಾದರೂ ಅವರನ್ನು ಒಮ್ಮತದಿಂದ ಆಯ್ಕೆ ಮಾಡೋಣ ಎಂದು ಹೇಳಿದರು.
ಡಿ.ಸಿ.ಸಿ ಬ್ಯಾಂಕ ನಿರ್ದೇಶಕ ಅರವಿಂದ ಪಾಟೀಲ, ಎಸ್.ಎಸ್.ಢವಣ, ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಮಾತನಾಡಿದರು. ಬಿ.ಡಿ.ಸಿ.ಸಿ ಬ್ಯಾಂಕ ಅಧ್ಯಕ್ಷ ಅಪ್ಪಾಸಾಹೇಬ ಕುಲಗಡೆ, ನಿರ್ದೇಶಕರಾದ ಮಹಾಂತೇಶ ದೊಡಗೌಡ್ರ, ರಾಜು ಅಂಕಲಗಿ, ಮಾಜಿ ಉಪಾಧ್ಯಕ್ಷ ಬಿ.ಎಸ್.ಬೆಳವಣಕಿ, ಬಿಜೆಪಿ ಮಂಡಲ ಅಧ್ಯಕ್ಷ ಡಾ| ಕೆ.ವಿ.ಪಾಟೀಲ, ಪಿ.ಎಂ.ಜಗತಾಪ ಉಪಸ್ಥಿತರಿದ್ದರು. ಮಹಾಂತೇಶ ವಾಲಿ ಸ್ವಾಗತಿಸಿದರು. ಮಂಜುನಾಥ ತಲ್ಲೂರ ನಿರೂಪಿಸಿ, ವಂದಿಸಿದರು.