ಸಿಂದಗಿ: ೩.೧ಕಿಮೀ ಉದ್ದದ ರಸ್ತೆ ಸುಧಾರಣೆಗೆ ರೂ.೫ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದ್ದು, ಗುತ್ತಿಗೆದಾರರು ಗುಣಮಟ್ಟ ಮತ್ತು ಸುಸಜ್ಜಿತ ರಸ್ತೆ ನಿರ್ಮಿಸಬೇಕು. ಇನ್ನೂ ಉಳಿದ ೬೦೦ಮೀ ರಸ್ತೆಯ ಸುಧಾರಣೆಗೆ ಶೀಘ್ರವೇ ಮಂಜೂರಾತಿ ತರಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ತಾಲೂಕಿನ ಹಂದಿಗಗೂರ ಕ್ರಾಸ್ ಬಳಿ ಹಂದಿಗನೂರ ಕ್ರಾಸ್ಯಿಂದ ಬಸ್ತಿಹಾಳ ಕ್ರಾಸ್ವರೆಗೆ ರಸ್ತೆ ಸುಧಾರಣೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸಿಂದಗಿ ನಗರ ಸುಧಾರಣೆ ಹಾಗೂ ಸೌಂದರ್ಯಿಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಆಲಮೇಲ ಪಟ್ಟಣದಲ್ಲಿ ರಸ್ತೆ ವಿಭಜಕಗಳು, ಬೀದಿ ವಿದ್ಯುತ್ ದೀಪಗಳು, ಕೆರೆ ನಿರ್ಮಾಣ, ಪ್ರಜಾಸೌಧ ನಿರ್ಮಾಣ, ತೋಟಗಾರಿಕಾ ಕಾಲೇಜು, ಕಡಣಿ ಬ್ಯಾರೆಜ್ಗಳಂತಹ ಶಾಶ್ವತ ಯೋಜನೆಗಳನ್ನು ಜಾರಿಗೆ ತರುವಲ್ಲಿ ಹೆಚ್ಚಿನ ಶ್ರಮ ವಹಿಸಿದ್ದೇನೆ. ಈ ಗ್ರಾಮದ ಬಹುದಿನಗಳ ಬೇಡಿಕೆ ಇಂದು ಈಡೇರಿಕೆಯಾಗಿದೆ. ರಸ್ತೆಗಳು ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಿಗೆ ಸಂವಹನ ಕೊಂಡಿಯಂತೆ ಕೆಲಸ ಮಾಡುವುದರಿಂದ ನನ್ನ ಅಧಿಕಾರ ಅವಧಿಯಲ್ಲಿ ಸುಸಜ್ಜಿತವಾದ ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ಮಾಜಿ ಶಾಸಕ ರಮೇಶ ಭೂಸನೂರ ಅವರು ಸರಕಾರದಲ್ಲಿ ಹಣವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಿಂದಗಿ, ಇಂಡಿ, ನಾಗಠಾಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೆಬಿಜೆಎನ್ಎಲ್ ದುರಸ್ಥಿ ಕಾಮಗಾರಿಗೆ ರೂ.೨೬೬೬ ಕೋಟಿ ಎಲ್ಲಿಂದ ತರುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಅವರೊಮ್ಮೆ ಶಕ್ತಿ ಯೋಜನೆ ಜಾರಿಯಲ್ಲಿದೆಯೋ ಇಲ್ಲವೋ ಎಂಬುದನ್ನು ಬಸ್ಸಿನಲ್ಲಿ ಪ್ರಯಾಣಿಸುವ ಮಹಿಳೆಯರನ್ನು ಕೇಳಲಿ. ಗೃಹಲಕ್ಷ್ಮಿ ಹಣ ಪ್ರತಿ ಮನೆಯ ಹೆಣ್ಣು ಮಕ್ಕಳಿಗೆ ತಲುಪುತ್ತಿದೆಯೋ ಇಲ್ಲವೋ ಎಂಬುದನ್ನು ಕೇಳಲಿ, ಗೃಹಜ್ಯೋತಿ ಯೋಜನೆ ಜಾರಿಯಲ್ಲಿದೆಯೋ ಇಲ್ಲವೋ ಎಂಬುದನ್ನು ವಿದ್ಯುತ್ ಬಿಲ್ಲ ಕಟ್ಟುವ ಗ್ರಾಹಕರನ್ನು ಕೇಳಲಿ, ಅನ್ನಭಾಗ್ಯ ಯೋಜನೆಯಡಿ ಉಚಿತ ರೇಷನ್ ದೊರೆಯುತ್ತಿದೆಯೋ ಇಲ್ಲವೋ ಎಂಬುದನ್ನು ಬಿಪಿಎಲ್ ಕಾರ್ಡ್ದಾರರನ್ನು ಕೇಳಲಿ. ಆಗ ಸರಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡಲಿ.
ಬಾಕ್ಸ್: ಇಷ್ಟೆಲ್ಲ ಇದ್ದರೂ ವ್ಯಂಗವಾಗಿ ಮಾತನಾಡುವದನ್ನೇ ಬಂಡವಾಳವಾಗಿಸಿಕೊಂಡಿರುವ ಮಾಜಿ ಶಾಸಕ ಭೂಸನೂರ ಅವರು ಒಂದು ಬಾರಿ ತಾಲೂಕನ್ನು ಸುತ್ತಾಡಿಕೊಂಡು ಬರಲಿ. ಆಗಲಾದರೂ ಅಭಿವೃದ್ಧಿ ಕೆಲಸಗಳು ಅವರ ಕಣ್ಣಿಗೆ ಗೋಚರಿಸುತ್ತವೆ. ಆದಾದಮೇಲೂ ಅವರು ವಿರೋಧಿಸುವದನ್ನೇ ಮುಂದುವರೆಸಿದರೆ ಒಂದೇ ವೇದಿಕೆಯಡಿ ಚರ್ಚೆಗೆ ಅವರನ್ನು ಆಹ್ವಾನಿಸುತ್ತೇನೆ. ಅವರು ತಮ್ಮ ೧೨ ವರ್ಷದ ಅವಧಿಯಲ್ಲಿ ತಮ್ಮ ಸಾಧನೆಗಳನ್ನು ಬಹಿರಂಗ ಪಡಿಸಲಿ. ನನ್ನ ೨ವರ್ಷ ೧ತಿಂಗಳ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳನ್ನು ಜನರ ಮುಂದಿಡುತ್ತೇನೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಈ ವೇಳೆ ಲೋಕೋಪಯೋಗಿ ಇಲಾಖೆಯ ಎಇಇ ಅರುಣಕುಮಾರ ವಡಗೇರಿ, ಕಿರಿಯ ಅಭಿಯಂತರ ಎಂ.ಎಸ್.ಹೊಸಮನಿ, ಗುತ್ತಿಗೆದಾರ ಅರವಿಂದ ಗೊಬ್ಬೂರ, ಈರನಗೌಡ ಪಾಟೀಲ ಹಂದಿಗನೂರ, ಜಿಪಂ ಮಾಜಿ ಉಪಾಧ್ಯಕ್ಷ ಮಲ್ಲಣ್ಣ ಸಾಲಿ, ಮಶಾಕಸಾಬ, ಅಣ್ಣಪ್ಪಗೌಡ ಯಲಗೋಡ, ಶರಣಪ್ಪ ಬೋರಗಿ, ಜಗನ್ನಾಥ ಕುಲಕರ್ಣಿ, ಶ್ರೀನಾಥ ಬಿರಾದಾರ, ಶಿವಾನಂದ ವಾಲಿ, ಅರವಿಂದ ದೇಸಾಯಿ, ಚೇತನಗೌಡ ಬಿರಾದಾರ, ಮಡು ರೋಡಗಿ, ಬಾಪುಗೌಡ ಬಿರಾದಾರ, ಗುರುರಾಜ ಬಸರಕೋಡ, ಮುತ್ತು ಕೋರಿ, ಚಿನ್ನು ಡಾಂಗಿ, ಈರಗಂಟೆಪ್ಪ ಬಿರಾದಾರ, ಸಿದ್ದನಗೌಡ ಬಿರಾದಾರ, ಬಾಬುಗೌಡ ಪೋಲಿಸಪಾಟೀಲ, ಚವ್ಹಾಣಪ್ಪ ಬಿಂಗೇರಿ, ರಮೇಶ ಮಾಶ್ಯಾಳ, ಸುಭಾಸ ಆಲಗೂರ, ಲಕ್ಷ್ಮಣ ನಾಯ್ಕೋಡಿ, ಅರವಿಂದ ರಾಠೋಡ, ಸುದರ್ಶನ ಕುರಡಿ ಸೇರಿದಂತೆ ಅನೇಕರಿದ್ದರು.