ರಾಮದುರ್ಗ: ಈ ಭಾಗದ ರೈತರ ಬಹುದಿನಗಳ ಬೇಡಿಕೆಯಾಗಿರುವ ವೀರಭದ್ರೇಶ್ವರ ಏತ ನೀರಾವರಿ ಯೋಜನೆಯ ಕಾಮಗಾರಿ ಕಾರಣಾಂತರಗಳಿಂದ ವಿಳಂಭವಾಗಿದ್ದು, ಇನ್ನೂ ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವದು ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.
ತಾಲೂಕಿನ ಹೊಸಕೋಟಿ ಗ್ರಾಮದ ಹತ್ತಿರ ಸುಮಾರು ೫೦ ಲಕ್ಷ ವೆಚ್ಚದಲ್ಲಿ ದಾದನಟ್ಟಿ-ಲೋಕಾಪೂರ ರಸ್ತೆ ಸುಧಾರಣೆ ಹಾಗೂ ಹೋಸಕೋಟಿ-ಲೋಕಾಪೂರ ಮುಖ್ಯ ರಸ್ತೆಯಿಂದ ಕೃಷ್ಣಗೌಡರ ಹೊಲದ ವರೆಗೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ಭಾಗಕ್ಕೆ ಈಗಾಗಲೇ ಸಾಕಷ್ಟು ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಅಭಿವೃದ್ದಿಗೆ ಶ್ರಮಿಸಿದವರಿಗೆ ಗ್ರಾಮದ ಜನತೆ ಮತ ನೀಡಬೇಕು. ಅದನ್ನು ಬಿಟ್ಟು ಬೇರೆಯವರನ್ನು ಬೆಂಬಲಿಸಿದರೆ ಅಭಿವೃದ್ಧಿ ಮಾಡಿದವರಿಗೆ ಮೋಸ ಮಾಡಿದಂತಾಗುತ್ತದೆ. ಅಭಿವೃದ್ಧಿ ಮಾಡಲು ನಾನು ಬದ್ದನಿದ್ದೇನೆ. ತಮ್ಮ ಮತ ನೀಡಿ ನಮ್ಮನ್ನು ಬೆಂಬಲಿಸಲು ತಾವು ಬದ್ಧರಾಗಿರಬೇಕು. ಗ್ರಾಮದ ಏನೇ ಬೇಡಿಕೆಗಳಿರಲಿ ಅವುಗಳನ್ನು ಹಂತ ಹಂತವಾಗಿ ಈಡೇರಿಸಲು ಪ್ರಮಾಣಿಕ ಪ್ರಯತ್ನ ಮಾಡುವದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಬಿ. ರಂಗನಗೌಡ್ರ, ರೈತ ಮುಖಂಡ ಹಣಮಂತ ದಳವಾಯಿ, ಗ್ರಾ.ಪಂ ಸದಸ್ಯರಾದ ನಿತಿನಗೌಡ ಪಾಟೀಲ, ಸಿದ್ದಪ್ಪ ಉದ್ದಪ್ಪನವರ, ಮಲ್ಲಿಕಾರ್ಜುನ ಬಿರಡಿ, ಕೃಷ್ಣ ಗೋಣಿ, ಮಾಜಿ ಗ್ರಾ.ಪಂ ಅಧ್ಯಕ್ಷ ನರಸಪ್ಪ ಬಂಡಿವಡ್ಡರ, ಲಕ್ಷ್ಮಣ ಮೇಗೇರಿ, ಜಿ.ಪಂ ಎಇಇ ಎಂ.ಡಿ. ಈಜಾನ್ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು.
ಇನ್ನೂ ಒಂದು ವರ್ಷದಲ್ಲಿ ವೀರಭದ್ರೇಶ್ವರ ಏತ ನೀರಾವರಿ ಕಾಮಗಾರಿ ಪೂರ್ಣ : ಪಟ್ಟಣ
