ಗ್ರಾಮ ಉತ್ಕ್ರಷ್ಟ ಅಭಿಯಾನ ಯೋಜನೆಯಡಿ ಹಲವು ಗ್ರಾಮಗಳ ಆಯ್ಕೆ

Pratibha Boi
ಗ್ರಾಮ ಉತ್ಕ್ರಷ್ಟ ಅಭಿಯಾನ ಯೋಜನೆಯಡಿ ಹಲವು ಗ್ರಾಮಗಳ ಆಯ್ಕೆ
WhatsApp Group Join Now
Telegram Group Join Now

ಸತ್ತಿಗೇರಿ : ದೂರದೃಷ್ಟಿಯ ಕೇಂದ್ರ ಪುರಸ್ಕೃತ ಬುಡಕಟ್ಟು ಕಲ್ಯಾಣ ಯೋಜನೆಯ ಧರ್ತಿ ಆಭಾ ಜನಜಾತಿಯ ಗ್ರಾಮ ಉತ್ಕ?ಅಭಿಯಾನ ಯೋಜನೆಯಡಿ ತಾಲೂಕಿನ ಹಿಂದುಳಿದ ಗುಡುಮಕೇರಿ ಸೇರಿದಂತೆ ಹಲವು ಗ್ರಾಮಗಳನ್ನು ಆಯ್ಕೆ ಮಾಡಿದ್ದು, ಈ ಗ್ರಾಮಗಳ ಸರ್ವಾಗೀಣ ವಿಕಾಸಕ್ಕೆ ಯೋಜನೆ ರೂಪಿಸಿ, ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕ ಅಧಿಕಾರಿಗಳಾದ ಆರ್. ಆರ್. ಕುಲಕರ್ಣಿ ಅವರು ಹೇಳಿದರು.

ಅವರು ಸೋಮವಾರ ಗುಡುಮಕೇರಿ ಗ್ರಾಮದ ಸಿದ್ಧಾರೂಢ ದೇವಸ್ಥಾನದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಕೇಂದ್ರ ಸರ್ಕಾರವು ಈ ಯೋಜನೆಯಡಿ ಪರಿಶಿಷ್ಟ ಪಂಗಡದ ಜನಾಂಗದ ಸದಸ್ಯರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ಇದಾಗಿದ್ದು, ಪರಿಶಿಷ್ಟ ಪಂಗಡದ ಜನಾಂಗದ ಬಹುಸಂಖ್ಯಾತರು ವಾಸಿಸುವ ಗ್ರಾಮಗಳಲ್ಲಿ ಸಮಗ್ರ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲಾಗುವುದಲ್ಲದೇ ಮೂಲಭೂತ ಸೌಕರ್ಯ, ಆರೋಗ್ಯ, ಶಿಕ್ಷಣ ಮತ್ತು ಜೀವನೋಪಾಯ ಕೌಶಲ್ಯಗಳ ಕುರಿತು ಕಾರ್ಯಕ್ರಮಗಳನ್ನು ಆಯೋಜಿಸಿ, ಅನುಷ್ಠಾನಗೊಳಿಸಲಾಗುವದು ಎಂದರು.

ಆಯ್ಕೆಗೊಂಡ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಕೂಡಲೇ ಗ್ರಾಮದ ಅಗತ್ಯತೆಗಳ ಪಟ್ಟಿಮಾಡಿ, ಕೈಗೊಳ್ಳಬಹುದಾದ ಕ್ರಮಗಳು ಹಾಗೂ ಸಾಧಕ-ಬಾದಕಗಳ ಬಗ್ಗೆ ಮಾಹಿತಿ ಹೊಂದಿದ್ದು, ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ತಕ್ಷಣದ ಮಾಹಿತಿ ನೀಡುವಂತೆ ಸೂಚಿಸಿದ ಅವರು, ಅಗತ್ಯವಿರುವೆಡೆಗಳಲ್ಲಿ ಅಂಗನವಾಡಿ ಕೇಂದ್ರಗಳು, ಶಾಲೆಗಳ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.

ಸಂಬಂಧಿಸಿದ ತಾಲೂಕುಗಳ ತಹಶೀಲ್ದಾರರು ಅಲ್ಲಿನ ಗ್ರಾಮಸ್ಥರಿಗೆ ತ್ವರಿತವಾಗಿ ಜಾತಿ ಪ್ರಮಾಣಪತ್ರಗಳನ್ನು, ಸಂಬಂಧಿಸಿದ ಕಂದಾಯ ಇಲಾಖೆಯ ಅಧಿಕಾರಿಗಳು ಆಧಾರ ಕಾರ್ಡಗಳನ್ನು ಮಾಡಿಸಿಕೊಡಬೇಕು.

ಅದಕ್ಕಾಗಿ ಇಲಾಖಾಧಿಕಾರಿಗಳು ಒಂದು ದಿನಾಂಕವನ್ನು ನಿಗಧಿಗೊಳಿಸಿ, ಗ್ರಾಮಸ್ಥರಿಗೆ ಮುಂಚಿತವಾಗಿ ತಿಳಿಸಿ, ಗ್ರಾಮಕ್ಕೆ ಖುದ್ದು ಭೇಟಿ ನೀಡಿ, ಅಲ್ಲಿನ ಅಗತ್ಯತೆಗಳನ್ನು ಒದಗಿಸಿ ಬರುವಂತೆ ಸೂಚಿಸಿದರು.

ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವುದು, ಶಾಲೆಗಳಿರುವಲ್ಲಿ ಅಲ್ಲಿನ ಶೌಚಾಲಯ, ಶಾಲಾ ಕಾಂಪೌಂಡ ನಿರ್ಮಾಣಕ್ಕೆ ಕ್ರಮ, ರಸ್ತೆ ಸಂಪರ್ಕ ಸೌಲಭ್ಯ ಕಲ್ಪಿಸಲು ಅಡಚಣೆ ಇದ್ದಲ್ಲಿ ಕ್ರಿಯಾಯೋಜನೆ ತಯಾರಿಸಿ, ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆಯ ಅಭಿಯಂತರರಿಗೆ ಸೂಚಿಸಿದ ಅವರು, ಅಲ್ಲಿನ ನಿವಾಸಿಗಳ ಆರೋಗ್ಯ ಸುಧಾರಣೆಗಾಗಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಪರಿಶಿ? ವರ್ಗಗಳ ಕಲ್ಯಾಣ ಇಲಾಖೆಯ, ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಮೇಲ್ವಿಚಾರಕರಾದ ಶ್ರೀಮತಿ ಆಶಾ ಪರೀಟ, ಗ್ರಾ. ಪಂ ಕಾರ್ಯದರ್ಶಿ ಎಸ್. ಎಸ್. ತೋಟದ, ಗ್ರಾ. ಪಂ. ಸದಸ್ಯರಾದ ಶಿವಾನಂದ ಪುಡಕಲಕಟ್ಟಿ, ಮಲ್ಲವ್ವ ಸಿದ್ರಾಮಪ್ಪಗೋಳ, ರೇಣುಕಾ ಪಾಟೀಲ, ಗ್ರಾ. ಪಂ. ಸಿಬ್ಬಂದಿಯಾದ ಚಂದ್ರು ಪಾಟೀಲ, ಸ್ಥಳೀಯ ನಿವಾಸಿಗಳಾದ ವಾಚಪೆ ಗುಡುಮಕೇರಿ, ಭೀಮಪ್ಪ ಪಾಟೀಲ, ಫಕ್ಕೀರಪ್ಪ ಮಾದನ್ನವರ, ಹನುಮಂತ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

WhatsApp Group Join Now
Telegram Group Join Now
Share This Article