ಸಿಂದಗಿ: ಶಿಕ್ಷಕರಾಗಿ ಸೇವೆ ಸಲ್ಲಿಸಿದವರನ್ನು ಗೌರವಿಸದಿದ್ದರೆ ಮುಂದಿನ ಪೀಳಿಗೆಗ ಉತ್ತಮ ಶಿಕ್ಷಕರ ಮಾದರಿಯ ಕೊರತೆ ಉಂಟಾಗುತ್ತದೆ ಎಂದು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.
ತಾಲೂಕಿನ ಬಂದಾಳ ಗ್ರಾಮದಲ್ಲಿ ಗೊಲ್ಲಾಳೇಶ್ವರ ದೇವಾಲಯದಲ್ಲಿ ವಯೋ ನಿವೃತ್ತಿ ಹೊಂದಿದ ನಿಮಿತ್ಯ ಸಿದ್ದಣ್ಣ ಅಂಜುಟಗಿ ಅವರಿಗೆ ಗ್ರಾಮಸ್ಥರು ಹಮ್ಮಿಕೊಂಡ ಅಭಿನಂದನಾ ಸನ್ಮಾನ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ಹಾಗೂ ಪಾಲಕರು ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿ ಉತ್ತಮ ಶಿಕ್ಷಣ ಮತ್ತು ಸಂಸ್ಕಾರದ ಮಹತ್ವ ತಿಳಿಸಿಕೂಡಬೇಕು. ಶಿಕ್ಷಕ ಹುದ್ದೆ ಅತ್ಯಂತ ಪವಿತ್ರವಾದದ್ದು, ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ಶಿಕ್ಷಕರ ಸಲಹೆ ಮಾರ್ಗದರ್ಶನ ಅವಶ್ಯಕ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿದರು. ಈ ವೇಳೆ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಮಾತನಾಡಿದರು. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಸಿದ್ದಣ್ಣ ಅಂಜುಟಗಿ ಅವರಿಗೆ ಗ್ರಾಮಸ್ಥರು ಹಾಗೂ ಅಪಾರ ಬಂಧುಬಳಗ ಅಭಿನಂದಿಸಿ ಸನ್ಮಾನಿಸಿ ಗೌರವಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಜಂಗಮ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾಧ್ಯಕ್ಷ ಶಂಕರಲಿಂಗಯ್ಯ ಹಿರೇಮಠ ವಹಿಸಿದ್ದರು. ಮಲ್ಲಣ್ಣ ಮನಗೂಳಿ ಮನ್ನಾಪೂರ, ಎಪಿಎಂಸಿ ನಿರ್ದೇಶಕ ಬಸಯ್ಯ ಹಿರೇಮಠ, ವಿಶ್ವನಾಥ ಕುರಡಿ, ಶರಣಗೌಡ ಪಾಟೀಲ, ನಿಂಗನಗೌಡ ಬಿರಾದಾರ, ಎಂ.ಎಸ್.ಹಿರೇಮಠ ಸೇರಿದಂತೆ ಗ್ರಾಮಸ್ಥರು ಇದ್ದರು.