ಮಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಧರ್ಮಸ್ಥಳ ರಹಸ್ಯ ಸಮಾಧಿ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ. ಸ್ಥಳ ಸಂಖ್ಯೆ 13ರಲ್ಲಿ 300ಕ್ಕೂ ಹೆಚ್ಚು ಶವಗಳನ್ನು ಹೂತು ಹಾಕಿದ್ದಾಗಿ ಹೇಳಿದ್ದು ಆ ಜಾಗದಲ್ಲಿ ನಿನ್ನೆಯಿಂದ ಅಗೆಯುವ ಕಾರ್ಯಾಚರಣೆ ಶುರುವಾಗಿತ್ತು. ಆದರೆ ಸರಿಸುಮಾರು 14 ಅಡಿ ಆಳ ಅಗೆದರೂ ಇಲ್ಲಿಯವರೆಗೂ ಒಂದೇ ಒಂದೂ ಕಳೇಬರ ಸಿಕ್ಕಿಲ್ಲ. ಹೀಗಾಗಿ ಅಗೆದಿರುವ ಜಾಗದಲ್ಲಿ ಮತ್ತೆ ಮಣ್ಣನ್ನು ಮುಚ್ಚಲಾಗುತ್ತಿದೆ.
ಪ್ರಕರಣ ಸಂಬಂಧ ಈಗಾಗಲೇ ಎಸ್ಐಟಿ 12 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು ಸ್ಥಳ ಸಂಖ್ಯೆ 6ರಲ್ಲಿ ಮಾತ್ರ ಕಳೇಬರ ಪತ್ತೆಯಾಗಿತ್ತು. ಇನ್ನು ತೀವ್ರ ಕುತೂಹಲ ಕೆರಳಿಸಿದ್ದ 13ನೇ ಸ್ಥಳದಲ್ಲಿ ನಿನ್ನೆಯಿಂದ ಅಗೆಯುವ ಕೆಲಸ ನಡೆದಿತ್ತು. ಆದರೆ ಯಾವುದೇ ಅಸ್ಥಿಪಂಜರ ಪತ್ತೆಯಾಗಿರಲಿಲ್ಲ. ಇಂದು ಸಹ ಬೆಳಗ್ಗಿನಿಂದಲೇ ದೂರದಾರ ತೋರಿಸಿದ ಜಾಗಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಇಂದು ಸಂಜೆವರೆಗೂ ಯಾವುದೇ ಕಳೇಬರ ಪತ್ತೆಯಾಗದ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ.
ಇನ್ನು ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್ ಅವರನ್ನು ಎಸ್ಐಟಿ ಅಧಿಕಾರಿಗಳು ಭೇಟಿಯಾಗಿದ್ದರು. ಎಸ್ ಐಟಿ ಮುಖ್ಯ ಸ್ಥ ಪ್ರಣವ್ ಮೊಹಂತಿ, ಡಿಐಜಿಪಿ ಅನುಚೇತ್ ಭೇಟಿ ವೇಳೆ ಪರಮೇಶ್ವರ್ ಅವರು, ತನಿಖಾ ಪ್ರಗತಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು ಶೀಘ್ರವಾಗಿ ತನಿಖೆ ಮುಗಿಸಿ ವರದಿ ನೀಡುವಂತೆ ಸೂಚಿಸಿದ್ದಾರೆ.