ಧಾರವಾಡ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಅಂಜುಮನ್ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆಯನ್ನು ಕರ್ನಾಟಕ ವಿಶ್ವವಿದ್ಯಾಲಯ ಕುಲಸಚಿವರಾದ (ಮೌಲ್ಯ ಮಾಪನ) ಡಾ. ನಿಜಲಿಂಗಪ್ಪ ಮಟ್ಟಿಹಾಳ ಅವರು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಅವರು ಮಾತನಾಡುತ್ತಾ, ಇಂದು 111ನೇ ಸಂಸ್ಥಾಪನ ದಿನಾಚರಣೆಯನ್ನು ಆಚರಿಸುತ್ತಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಸಮಾಜದ ಬೇರೆ ಬೇರೆ ರಂಗಗಳಲ್ಲಿರುವ ಸಾಹಿತ್ಯಗಳನ್ನು ಗುರುತಿಸಿ ಅವರನ್ನು ಪ್ರಧಾನವಾಗಿ ತರುವ ಕೆಲಸ ಮಾಡಿದೆ. ಎಲ್ಲಾ ಅಧ್ಯಕ್ಷರುಗಳು ತಮ್ಮ ಮಿತಿಯಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಸಮೃದ್ಧಗೊಳಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಬಂಡಾಯ ಲೇಖಕರಾದ ಡಾ. ಚಂದ್ರಶೇಖರ್ ಪಾಟೀಲ್ ಅವರು ಅಧಿಕಾರ ಶಾಹಿಯನ್ನು ಪ್ರತಿರೋಧಿಸಿ ಸಾಹಿತ್ಯ ಪರಿಷತ್ತನ್ನ ಬೆಳೆಸಿದ ಮಾದರಿ ನಮ್ಮ ಮುಂದಿದೆ. ಇಂದಿನ ಯುವತಲಿ ಮಾರಿನವರು ಇದನ್ನು ಮುಂದುವರೆಸಿಕೊಂಡು ಹೋಗಬೇಕಾದ ಅಗತ್ಯ ಇದೆ ಎಂದು ಮಾತನಾಡಿದರು. ಮುಖ್ಯ ಅತಿಥಿಗಳಾದ ಪ್ರೊ .ಶ್ಯಾಮಸುಂದರ ಬಿದರಗುಂದಿ ಅವರು ಮಾತನಾಡುತ್ತಾ- ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಒಗ್ಗಟ್ಟು ಮತ್ತು ಅಸ್ಮಿತಿಯ ಸಂಕೇತವಾಗಿದೆ. ನಾವೆಲ್ಲ ಒಂದಾಗಿ ಬಾಳಲು ನಮಗೆ ಸಾಹಿತ್ಯದ ಜ್ಞಾನ ಅಗತ್ಯವಾಗಿದೆ. ಇಂತಹ ಜ್ಞಾನ ನೀಡುವ ಸಂಸ್ಥೆಯಾಗಿ ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಶ್ರಮಿಸುತ್ತಿದೆ. ಅಂತೆಯೇ ಧಾರವಾಡದಲ್ಲಿರುವ ವಿದ್ಯಾವರ್ಧಕ ಸಂಘವು ಕನ್ನಡ ನಾಡು ನುಡಿಯ ಪ್ರಸಾರಕ್ಕಾಗಿ ಕೆಲಸ ಮಾಡುತ್ತಿರುವುದನ್ನು ಕೊಂಡಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರನ್ನು ಒಂದುಗೂಡಿಸಿದ ಸಂಸ್ಥೆಯಾಗಿದೆ ಎಂದು ಸ್ಮರಿಸಿದರು. ಶ್ರೀಮತಿ ಸುನಂದಾ ನಿಂಬನಗೌಡರ ಹಾಗೂ ಸಂಗಡಿಗರು ಸಂಗೀತ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿ – ಇಂದಿನ ತಲೆಮಾರಿನ ಯುವಕರು ಕನ್ನಡ ಸಾಹಿತ್ಯ ಪರಿಷತ್ತಿನ ಸದಸತ್ವವನ್ನು ಪಡೆದುಕೊಂಡು ಅದರ ಬೆಳವಣಿಗೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಾಗುತ್ತದೆ ಎಂದು ಕಿವಿಮಾತು ಹೇಳಿದರು.
ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಐ. ಎ. ಮುಲ್ಲಾ ಹಾಗೂ ಡಾ. ಎನ್. ಬಿ. ನಾಲತವಾಡ ವೇದಿಕೆ ಮೇಲೆ ಉಪಸ್ಥಿತರಿದ್ದರು. ಡಾ. ಜಿನದತ್ತ ಹಡಗಲಿ ಸ್ವಾಗತಿಸಿದರು. ಡಾ. ಮೇಟಿ ರುದ್ರೇಶ್ ನಿರೂಪಿಸಿದರು. ಕು. ಬಾನುಬಿ ವಂದಿಸಿದರು. ಇದೇ ಸಂದರ್ಭದಲ್ಲಿ ಡಾ. ನಿಜಲಿಂಗಪ್ಪ ಮಟ್ಟಿಹಾಳ, ಡಾ. ಶ್ಯಾಮಸುಂದರ ಬಿದರಕುಂದಿ ಹಾಗೂ ಶ್ರೀಮತಿ ಸುನಂದಾ ನಿಂಬನಗೌಡರ ಅವರನ್ನು ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ಡಾ. ಅಬ್ದುಲ್ ಕರೀ ಆದೋನಿ – ಖುರಾನ್ ಪಠಣ ಮಾಡಿದರು. ಶ್ವೇತಾ ವರಚಗಿ ಶ್ಲೋಕ ಪಠಣ ಹಾಗೂ ಶ್ರೀಮತಿ ಸುನಂದಾ ನಿಂಬನಗೌಡರ ನಾಡಗೀತೆ ಪ್ರಸ್ತುತ ಪಡಿಸಿದರು.