ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸಮುದಾಯದ ಬಹಳಷ್ಟು ಕುಟುಂಬಗಳು ಹೊಂದಿರುವ ಜಾತಿ ಸೂಚಕ ಹೊಲೆಯ, ಸಮಗಾರ, ಕೊರವ, ಭಜಂತ್ರಿ,ತಳವಾರ ಹೇಳವ , ದಾಸರ,ಮುಂತಾದ ಅಡ್ಡ( ಸರ್ ನೇಮ್ ) ಹೆಸರುಗಳನ್ನು ತೆಗೆದುಹಾಕಿ ಅದಕ್ಕೆ ಬದಲಾಗಿ ತಮ್ಮ ಹುಟ್ಟೂರು,ಉನ್ನತ ಶ್ರೇಣಿ ಎಂದು ಭಾವಿಸಿರುವ ಪಾಟೀಲ್,ನಾಡಗೌಡ್ ದೇಸಾಯಿ,ದೇಶಮುಖ್, ಅಥವಾ ತಮಗೆ ಇಷ್ಟವಾಗುವ
ಅಡ್ಡ ಹೆಸರುಗಳನ್ನು ಕಾನೂನು ಅಡಿಯಲ್ಲಿ ಹೊಂದಲು ಪ್ರಗತಿಪರ ದಲಿತ ಲೇಖಕರಾಗಿದ್ದ ದೇವರಾಯ ಇಂಗಳೆ ಅವರು ಅಡ್ಡ ಹೆಸರನ್ನು’ ಅಡ್ಡಡ್ಡ ಉದ್ದುದ್ದ ಸೀಳಿ ‘ಎಂಬ ವಿಶಿಷ್ಟ ಚಳುವಳಿಯನ್ನು ನೂರು ವರ್ಷಗಳ ಹಿಂದೆ ರೂಪಿಸಿ ಕಾರ್ಯರೂಪಕ್ಕೆ ತಂದಿದ್ದರು. ಈ ಚಳುವಳಿ ಬೆಳಗಾವಿಯಲ್ಲಿ 1925 ನವೆಂಬರ್ 11, 12ರಂದು ಸಂಘಟಿಸಲಾಗಿದ್ದ ‘ಬಹಿಷ್ಕೃತ ಹಿತಕಾರಣಿ ‘ಸಮ್ಮೇಳನದಲ್ಲಿ ಅಧಿಕೃತವಾಗಿ ಕಾರ್ಯರೂಪಕ್ಕೆ ತರಲಾಗಿತ್ತು.
ದೇವರಾಯ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅನುಯಾಯಿಯಾಗಿದ್ದರು . ಅವರೊಂದಿಗೆ ಚರ್ಚೆ, ಪತ್ರ ವ್ಯವಹಾರ ನಿರಂತರವಾಗಿ ನಡೆಸುತ್ತಿದ್ದರು. ವಯಸ್ಸಿನಲ್ಲಿ ಅವರಿಗಿಂತ ಎರಡು ವರ್ಷ ದೊಡ್ಡವರಾಗಿದ್ದರು. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಇಂಗಳೆ ಗ್ರಾಮ ದೇವರಾಯ ಅವರ(1889 -1972)ಹುಟ್ಟೂರು . ಪ್ರಾಥಮಿಕ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಅವರು ಅಂಬೇಡ್ಕರ್ ಅವರ ಸಂಪರ್ಕಕ್ಕೆ ಬಂದ ಮೇಲೆ ಶಿಕ್ಷಕ ವೃತ್ತಿ ತೊರೆದು ಲೇಖಕರಾಗಿ,ಸಮಾಜ ಕಾರ್ಯಕರ್ತರಾಗಿ ಕೆಲಸ ಮಾಡತೊಡಗಿದರು.
ಅವರು ಒಮ್ಮೆ ಕೊಲ್ಹಾಪುರದ ಕ್ಷೌರದ ಅಂಗಡಿಗೆ ದಾಡಿ ಮಾಡಿಸಿಕೊಳ್ಳಲು ಹೋಗಿದ್ದರು. ಕ್ಷೌರಿಕ ಅವರಿಗೆಸೋಪ್ ಲೇಪಿಸುತ್ತಾ “ನಿಮ್ಮ ಅಡ್ಡ ಹೆಸರು ಏನು “?ಎಂದು ಕೇಳಿದ. ದೇವರಾಯರು” ಹೊಲೇರ್ “ಎಂದು ನಿಜವನ್ನೇ ಹೇಳಿದರು . ಕ್ಷೌರಿಕ ಮರುಕ್ಷಣ ಹಾವಿನ ಹೆಡೆಯ ಮೇಲೆ ಕಾಲಿಟ್ಟಂತೆ ದೂರ ಜಿಗಿದು ನಿಂತ.” ಏಳು, ಏಳು ಇಲ್ಲಿಂದ. ಅಂಗಡಿಯ ಒಳಗೆ ಬರಲು ನಿನಗೆ ಅದೆಷ್ಟು ಧೈರ್ಯ? ನಿನ್ನನ್ನು ಮುಟ್ಟಿದ್ದಕ್ಕೆ ನಾನು ಜಳಕ ಮಾಡಬೇಕು. ಬೇಗನೆ ತೊಲಗು” ಎಂದು ಹೊರೆದೂಡಿದ.
ತೀವ್ರ ಅಪಮಾನದಿಂದ ನಲುಗಿ ಹೋದ ದೇವರಾಯ ಮತ್ತೊಂದು ಕ್ಷೌರದ ಅಂಗಡಿಗೆ ಹೋಗಿ ತಮ್ಮ ಅಡ್ಡ ಹೆಸರುಇಂಗಳೆ ಎಂದು ಹೇಳಿ ದಾಡಿ ಮಾಡಿಸಿಕೊಂಡರು. ಆಗ ಅವರಿಗೆ ದಲಿತರನ್ನು ಕಾಡುವ ಅಡ್ಡ ಹೆಸರು ಬದಲಾಯಿಸಬೇಕು ಎಂಬ ಹೊಸ ಬೆಳಕಿನ ಗೆರೆ ಕಾಣಿಸಿತು. ದೇವರಾಯ ಅವರು ಪರಿಶಿಷ್ಟರು ಹೊಂದಿರುವ ಮಾದಿಗ,ಡೋರ, ಸಮಗಾರ, ಮೇದಾರ, ಚಮ್ಮಾರ, ಮಾಹಾರ,ಕೊರವ, ಕೊರಚ,ಕೊಂಚಿಕೊರವ, ಹೇಳವ, ಹಡಪದ,ಮಡಿವಾಳ ಮುಂತಾದ ಜಾತಿ ಸೂಚಕ ಅಡ್ಡ ಹೆಸರುಗಳನ್ನು ತೆಗೆದುಹಾಕಿ ಹೊಸ ಅಡ್ಡ ಹೆಸರು ಪಡೆದುಕೊಳ್ಳಬೇಕು ಎಂಬ ಮಹತ್ವದ ಚಳುವಳಿಯನ್ನು ರೂಪಿಸಿದರು.
ಅವರು ಚಿಕ್ಕೋಡಿಯಲ್ಲಿ ಸಭೆ ನಡೆಸಿದರು. ದೊಡ್ಡ ಸಂಖ್ಯೆಯಲ್ಲಿ ಪರಿಶಿಷ್ಟರು ಭಾಗವಹಿಸಿದ್ದರು. ಸಭೆಯಲ್ಲಿ” ನೀವು ಹೇಳುವುದು ಸರಿ, ಆದರೆ ಅಡ್ಡ ಹೆಸರುಗಳನ್ನು ಏನೆಂದು ಬದಲಿಸಿಕೊಳ್ಳಬೇಕು “ಎಂದು ಒಬ್ಬರು ದೇವರಾಯ ಅವರನ್ನು ಪ್ರಶ್ನಿಸಿದರು.
“ನನ್ನ ಹೆಸರು ದೇವರಾಯ ಹೊಲೇರ ಎಂದು ಇತ್ತು. ಇದನ್ನು ನಾನು ದೇವರಾಯ ಇಂಗಳೆ ಎಂದು ಬದಲಿಸಿಕೊಂಡಿದ್ದೇನೆ. ತಹಸಿಲ್ದಾರರೊಂದಿಗೆ ಚರ್ಚಿಸಿದ್ದೇನೆ. ಅವರು ಕಾನೂನಾತ್ಮಕವಾಗಿ ಬದಲಾವಣೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ನೀವೂ ಮಾಡಿಕೊಳ್ಳಬೇಕು “ಎಂದು ಸಲಹೆ ನೀಡಿರು. ಇದನ್ನು ಕೇಳಿ ಎಲ್ಲರಲ್ಲಿಯೂ ಒಂದು ರೀತಿಯ ವಿದ್ಯುತ್ ಸಂಚಾರವಾಯಿತು.
ಬೆಳಗಾವಿ, ವಿಜಾಪುರ, ಧಾರವಾಡ ಮತ್ತು ದಕ್ಷಿಣ ಮಹಾರಾಷ್ಟ್ರದ ಪ್ರದೇಶಗಳಲ್ಲಿ ಅನೇಕ ದಲಿತ ಕುಟುಂಬಗಳು ತಮ್ಮ ಅಡ್ಡ ಹೆಸರು ಬದಲಾಯಿಸಿಕೊಂಡಿವೆ. ರಾಜ್ಯದಿಂದ ಗೋವಾ,ಮುಂಬೈ ಮುಂತಾದ ನಗರಗಳಿಗೆ ವಲಸಿ ಹೋದ ತಳ ಸಮುದಾಯದ ಕುಟುಂಬಗಳು ತಮ್ಮ ಅಡ್ಡ ಹೆಸರು ಬದಲಿಸಿಕೊಂಡಿವೆ. ಇದರಿಂದಾಗಿ ಅವರಿಗೆ ಸಾಕಷ್ಟು ನೆಮ್ಮದಿ ದೊರೆತಿದೆ. ಈಗಲೂ ಜಾತಿ ಸೂಚಕ ಅಡ್ಡ ಹೆಸರು ಹೊಂದಿರುವ ಕುಟುಂಬಗಳು ಈ ಮಾರ್ಗ ಅನುಸರಿಸುತ್ತೇವೆ. ಇದು ಇನ್ನೂ ವ್ಯವಸ್ಥಿತವಾಗಿ ಪರಿಣಾಮಕಾರಿಯಾಗಿ ಆಗಬೇಕಾಗಿರುವುದು ಅವಶ್ಯವೇನಿಸುತ್ತದೆ.
ದೇವರಾಯ ಸ್ನೇಹಿತರೊಂದಿಗೆ ಚರ್ಚಿಸಿ ‘ಬಹಿಷ್ಕೃತ ಸಮಾಜ ಶಿಕ್ಷಣ ಪ್ರಸಾರ ಮಂಡಳಿ ‘ಎಂಬ ಸಂಸ್ಥೆಯನ್ನು 1927ರಲ್ಲಿ ಹುಟ್ಟು ಹಾಕಿದರು. ಅದರ ಮೊದಲು ಸಭೆ ಗವನಾಳ ಗ್ರಾಮದಲ್ಲಿ ಜರುಗಿತು. ದಲಿತರನ್ನು ಸಂಘಟಿಸುವುದು ಸಂಸ್ಥೆಯ ಉದ್ದೇಶವಾಗಿತ್ತು. ‘ ಬಹಿಷ್ಕೃತ ಹಿತಕಾರಣಿ ‘ ಸಂಘಟನೆಯ ಆಶ್ರಯದಲ್ಲಿ ಎರಡು ದಿನಗಳ ಸಮ್ಮೇಳನವನ್ನು ಬೆಳಗಾವಿಯಲ್ಲಿ ಆಯೋಜಿಸಲಾಗಿತ್ತು. ಬಾಬಾ ಸಾಹೇಬ್ ಅಂಬೇಡ್ಕರ್ ಈ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ದೇವರಾಯ ಅವರು ಆರಂಭಿಸಿದ ದಲಿತೋದ್ಧಾರ ಕಾರ್ಯಗಳ ಬಗ್ಗೆಬಹಳ ಮೆಚ್ಚುಗೆ ಸೂಚಿಸಿದರು. ಇದೇ ಸಭೆಯಲ್ಲಿ ದಲಿತ ಬಡ ಮಕ್ಕಳ ಶಿಕ್ಷಣಕ್ಕಾಗಿ ‘ಪೈಸಾ ಫಂಡ್ ‘ಯೋಜನೆಯನ್ನು ಜಾರಿಗೊಳಿಸಲಾಯಿತು. ದಲಿತ ಮಕ್ಕಳ ಓದಿಗೆ ಇದು ಬಹಳ ನೆರವಾಯಿತು.
ದಲಿತರಲ್ಲಿ ಜಾಗೃತಿ ಮೂಡಿಸುವುದಕ್ಕೆ ದೇವರಾಯ ಅನೇಕ ನಾಟಕಗಳನ್ನು ರಚಿಸಿದರು. ತಾವೇ ಒಂದು ನಾಟಕ ಕಂಪನಿ ಸ್ಥಾಪಿಸಿ ಹಳ್ಳಿ ಹಳ್ಳಿಗಳಲ್ಲಿ ನಾಟಕ ಪ್ರದರ್ಶನ ನಡೆಸಿದರು. ನಾಟಕದ ಆರಂಭದಲ್ಲಿ ದೇವರಾಯ ಭಾಷಣ ಮಾಡುತ್ತಿದ್ದರು. ಅವರ ಪ್ರಾಮಾಣಿಕ ನಡೆ-ನುಡಿಯಿಂದ ಕೂಡಿದ ಮಾತುಗಳು ಎಲ್ಲರಮೇಲೆ ಒಳ್ಳೆಯ ಪರಿಣಾಮ ಬೀರುತ್ತಿದ್ದವು.
ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಬೆಳಗಾವಿ,ನಿಪ್ಪಾಣಿ,ಚಿಕ್ಕೋಡಿ ನಗರಗಳಿಗೆಹಲವು ಬಾರಿ ಕರೆದುಕೊಂಡು ಬಂದವರು ದೇವರಾಯ. ಅವರು ಹುಟ್ಟು ಹಾಕಿದ ದಲಿತರು ತಮ್ಮ ಜಾತಿ ಸೂಚಕ ಅಡ್ಡ ಹೆಸರುಗಳನ್ನು ಅಡ್ಡಡ್ಡ ಉದ್ದುದ್ದ ಸೀಳಿ ಎಂಬ ಚಳುವಳಿಗೆ ಈಗ ಶತಮಾನದ ಸಂಭ್ರಮ. ಈ ಚಳುವಳಿಯ ನೆನಪಿನಲ್ಲಿ ಪಕ್ಷಾತೀತವಾಗಿ ಶತಮಾನೋತ್ಸವ ಕಾರ್ಯಕ್ರಮ ನಡೆಸುವುದು ಅವಶ್ಯವಾಗಿದೆ.
ದೇವರಾಯ ಅವರ ಬದುಕು ಹೋರಾಟ ಕುರಿತು ಪತ್ರಕರ್ತ ಡಾ.ಸರಜೂ ಕಾಟ್ಕರ್’ ದೇವರಾಯ ‘ಎಂಬ ಕೃತಿ ರಚಿಸಿದ್ದಾರೆ. ಈ ಕೃತಿ ಆಧರಿಸಿ ಘನಶಾಮ ಬಾಂಡ್ಗೆ ಅವರು ‘ಇಂಗಳೇ ಮಾರ್ಗ ‘ ಕನ್ನಡ ಚಲನಚಿತ್ರ ನಿರ್ಮಿಸಿದ್ದಾರೆ. ಬೆಳಗಾವಿಯ 51ನೇ ಡಬಲ್ ರಸ್ತೆಗೆ ದೇವರಾಯ ಇಂಗಳೆ ಮಾರ್ಗ ಎಂದು ಹೆಸರಿಡಲಾಗಿದೆ.

ಲಕ್ಷ್ಮಣ.ಆರ್. ನಿರಾಣಿ
ಕೈಗಾರಿಕೋದ್ಯಮಿ, ಬೀಳಗಿ
9379090059