ಇಂಫಾಲ: ದೇಶದ ನಾಗರಿಕರ ಸುರಕ್ಷತೆ ಮತ್ತು ಭದ್ರತೆಗಾಗಿ 10 ಉಪಗ್ರಹಗಳು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಇಸ್ರೋ ಅಧ್ಯಕ್ಷ ಡಾ.ವಿ.ನಾರಾಯಣನ್ ಹೇಳಿದರು.
ಮಣಿಪುರದ ಇಂಫಾಲದ ಕೇಂದ್ರ ಕೃಷಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಭಾರತವೂ ಕ್ರಿಯಾಶೀಲ ಬಾಹ್ಯಕಾಶವಾಗುತ್ತಿದ್ದು, 2040ರ ವೇಳೆಗೆ ಮೊದಲ ಬಾಹ್ಯಾಕಾಶ ನಿಲ್ದಾಣವನ್ನು ಹೊಂದಲಿದೆ ಎಂದರು. ಭಾರತ ಮತ್ತು ಪಾಕಿಸ್ತಾನ ನಡುವಿನ ಸಶಸ್ತ್ರ ಸಂಘರ್ಷದ ನಡುವೆ ಇಸ್ರೋ ಅಧ್ಯಕ್ಷರು ದೇಶದ ಭದ್ರತೆಯಲ್ಲಿ ಉಪಗ್ರಹಗಳು ವಹಿಸುತ್ತಿರುವ ಮಹತ್ತರ ಪಾತ್ರದ ಕುರಿತು ಮಾತನಾಡಿದ್ಧಾರೆ.
ಇದುವರೆಗೆ ಭಾರತ 34 ದೇಶಗಳ 433 ಉಪಗ್ರಹಗಳನ್ನು ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದೆ. ಭಾರತದ ನಾಗರಿಕರ ಸುರಕ್ಷತೆ ಮತ್ತು ಭದ್ರತೆ ಖಚಿತಪಡಿಸಿಕೊಳ್ಳಲು 24/7 ಕಾಲ 10 ಉಪಗ್ರಹಗಳು ಕಾರ್ಯ ನಿರ್ವಹಿಸುವ ಮೂಲಕ ಕಟ್ಟೆಚ್ಚರ ವಹಿಸಿವೆ ಎಂದು ಹೇಳಲು ನನಗೆ ಸಂತಸವಾಗುತ್ತಿದೆ ಎಂದು ತಿಳಿಸಿದರು.
ನಮ್ಮ ದೇಶದ ಸುರಕ್ಷತೆಯನ್ನು ನಮ್ಮ ಉಪಗ್ರಹಗಳ ಮೂಲಕ ದೃಢಪಡಿಸಿಕೊಳ್ಳಬೇಕಿದೆ. ದೇಶದ 7,000 ಕಿ.ಮೀ. ಸಮುದ್ರ ತೀರವನ್ನು ನಾವು ಮೇಲ್ವಿಚಾರಣೆ ಮಾಡಬೇಕು. ದೇಶದ ಉತ್ತರ ಭಾಗವನ್ನು ನಿರಂತರವಾಗಿ ಸಂಪೂರ್ಣವಾಗಿ ಮೇಲ್ವಿಚಾರಣೆ ನಡೆಸಬೇಕಿದ್ದು, ಉಪಗ್ರಹ ಮತ್ತು ಡ್ರೋನ್ ತಂತ್ರಜ್ಞಾನವಿಲ್ಲದೆ, ನಾವು ಅದನ್ನು ಸಾಧಿಸಲು ಸಾಧ್ಯವಿಲ್ಲ. ಜಿ20 ಉಪಗ್ರಹದ ಶೇ.50 ರಷ್ಟು ಪೇಲೋಡ್ ಭಾರತದಿಂದ ಬರಲಿದ್ದು, ಉಳಿದ ಪೇಲೋಡ್ ಇತರ ದೇಶಗಳಿಂದ ಬರಲಿದೆ. ಭಾರತದ ಸ್ವಂತ ಉಡಾವಣಾ ವಾಹನವನ್ನು ಬಳಸಿಕೊಂಡು ಉಪಗ್ರಹವನ್ನು ಉಡಾವಣೆ ಮಾಡಲಾಗುತ್ತಿದೆ. ಉಡಾವಣೆ ಬಳಿಕ, ಉಪಗ್ರಹದಿಂದ ಸಂಗ್ರಹಿಸಿದ ಡೇಟಾವನ್ನು ಜಿ20 ದೇಶಗಳೊಂದಿಗೆ ಹಂಚಿಕೊಳ್ಳಲಿದೆ ಎಂದರು.