ಮೂಡಲಗಿ : ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳು ಹಾಗೂ ಬೇಡಿಕೆಗಳು ಸಮಂಜಸವಾಗಿದ್ದು, ರಾಜ್ಯ ಸರ್ಕಾರ ಆಡಳಿತಾತ್ಮಕವಾಗಿ ಪರಿಹಾರ ದೊರಕಿಸಿಕೊಡಬೇಕೆಂದು ಅಖಿಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಗುಂಡಪ್ಪ ಕಮತೆ ಒತ್ತಾಯಿಸಿದರು.
ಶುಕ್ರವಾರದಂದು ಪಟ್ಟಣದ ತಹಶೀಲ್ದಾರ ಕಾರ್ಯಾಲಯ ಆವರಣದಲ್ಲಿ ನಡೆಯುತ್ತಿರುವ ಮೂಡಲಗಿ ತಾಲೂಕಿನ ಗ್ರಾಮ ಅಧಿಕಾರಿಗಳ 2ನೇ ಹಂತದ ಅನಿರ್ಧಾಷ್ಟವಧಿ ಮುಷ್ಕರದಲ್ಲಿ ಭಾಗವಹಿಸಿ, ಸಮಸ್ತ ಕಬ್ಬು ಬೆಳೆಗಾರರ ಹಾಗೂ ಸಂಘದ ಪರವಾಗಿ ಬೆಂಬಲ ಸೂಚಿಸುತ್ತ ಮಾತನಾಡಿದ ಅವರು, ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳನ್ನು ಆಡಳಿತಾತ್ಮಕವಾಗಿ ಪರಿಹರಿಸುವುದರಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆ ಆಗುವುದಿಲ್ಲ, ಸಮಂಜಸವಾದ ಬೇಡಿಕೆಗಳನ್ನು ಈ ಕೂಡಲೇ ಈಡೇರಿಸಿ ಗ್ರಾಮಗಳಲ್ಲಿನ ರೈತರಿಗೆ, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸರಕಾರ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶಿವಾನಂದ ಪಾಟೀಲ್, ಅಜೀತ್ ಬೆಣವಾಡ, ಬಾಹುಬಲಿ ಬೋಳಿ, ಮಾಣಿಕ್ ಬೋಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.